ಅನುಕಂಪದ ನೇಮಕಾತಿ ಸಂವಿಧಾನದ 14 & 16ನೇ ವಿಧಿಯ ಉಲ್ಲಂಘನೆ; ಅರ್ಹ ಪ್ರಕರಣಗಳಿಗೆ ಸೀಮಿತವಾಗಲಿ: ಮದ್ರಾಸ್ ಹೈಕೋರ್ಟ್
ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸುವುದು ಸಂವಿಧಾನದ 14 (ಸಮಾನತೆಯ ಹಕ್ಕು) ಮತ್ತು 16ನೇ (ಸಾರ್ವಜನಿಕ ಸೇವೆಯಲ್ಲಿ ಸಮಾನ ಅವಕಾಶ) ವಿಧಿಗಳ ಉಲ್ಲಂಘನೆಯಾಗಿದ್ದು, ಷರತ್ತುಗಳಿಗೆ ಒಳಪಟ್ಟು ಅರ್ಹ ಪ್ರಕರಣಗಳಲ್ಲಿ ಮಾತ್ರ ಅನುಕಂಪದ ನೇಮಕಾತಿ ಜಾರಿ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.
ಪ್ರಸ್ತುತ ಪ್ರಕರಣದಲ್ಲಿ 2002ರಲ್ಲಿ ಸರ್ಕಾರಿ ಸೇವೆಯಲ್ಲಿದ್ದ ತಾಯಿಯು ತಾನು ಸಾವನ್ನಪ್ಪುವುದಕ್ಕೂ ಕೆಲ ಕಾಲ ಮುಂಚಿತವಾಗಿ ಪ್ರಸ್ತುತ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿರುವ ಮಹಿಳೆಯನ್ನು ದತ್ತು ಪಡೆದಿದ್ದರು. ಆದರೆ, 12 ವರ್ಷಗಳಷ್ಟು ತಡವಾಗಿ 2014ರಲ್ಲಿ ಆಕೆಯು ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿರುವುದಕ್ಕೆ ನ್ಯಾಯಮೂರ್ತಿ ಎಸ್ ಎಂ ಸುಬ್ರಮಣಿಯಮ್ ಅವರ ನೇತೃತ್ವದ ಏಕಸದಸ್ಯ ಪೀಠವು ನಿರಾಕರಿಸಿತು.
“ಅನುಕಂಪದ ನೇಮಕಾತಿಯು ವಿನಾಯಿತಿಯಾಗಿದ್ದು, ಅದನ್ನು ಹಕ್ಕಿನ ರೀತಿ ಕೇಳಲಾಗದು. ಇದು ವಿನಾಯಿತಿ ಯೋಜನೆಯಾಗಿದ್ದು, ಕಟ್ಟುನಿಟ್ಟಿನಿಂದ ಷರತ್ತಿಗೆ ಒಳಪಟ್ಟು ಜಾರಿಗೊಳಿಸಬೇಕು. ಈ ಯೋಜನೆಯು ಸಂವಿಧಾನದ 14 ಮತ್ತು 16ನೇ ವಿಧಿಯ ಉಲ್ಲಂಘಿಸಲಿದ್ದು, ಇದನ್ನು ನಿಯಂತ್ರಿಸಿ, ಅರ್ಹತೆ ಇರುವ ಪ್ರಕರಣದಲ್ಲಿ ಮಾತ್ರ ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡುವುದನ್ನು ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಒತ್ತಿ ಹೇಳಿತು.
ನಿಯಮದ ಪ್ರಕಾರ ಮೂರು ವರ್ಷಗಳ ಒಳಗೆ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಬೇಕು. ಆದರೆ, ಅರ್ಜಿದಾರೆಯು 2014ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಡವಾಗಿ ಅರ್ಜಿ ಸಲ್ಲಿಸಿರುವುದನ್ನು ಆಧರಿಸಿ ಮನವಿ ತಿರಸ್ಕರಿಸಲಾಗಿದೆ.
ತಂದೆ ಕಾಲವಾದ ನಂತರ ಅರ್ಜಿದಾರೆಯ ತಾಯಿಯನ್ನು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ನೇಮಕ ಮಾಡಲಾಗಿತ್ತು. ತಾಯಿಯನ್ನು ವೆಲ್ಲೂರು ಜಿಲ್ಲೆಯ ಸರ್ಕಾರಿ ಶಾಲೆಗೆ ಕಿರಿಯ ಸಹಾಯಕಿಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಅರ್ಜಿದಾರೆ ತಿಳಿಸಿದ್ದಾರೆ. ತಾಯಿ 2002ರ ಮೇ 8ರಲ್ಲಿ ನಿಧನ ಹೊಂದಿದ್ದು, ಅದಕ್ಕೂ ಕೆಲ ಕಾಲ ಮುಂಚಿತವಾಗಿ ಅರ್ಜಿದಾರೆಯನ್ನು ದತ್ತು ಪಡೆದಿದ್ದರು.


