ಧಾರವಾಡಕ್ಕೆ ತೆರಳಿ ಮತದಾನ ಮಾಡಲು ಶಾಸಕ ವಿನಯ್‌ ಕುಲಕರ್ಣಿಗೆ ಅನುಮತಿ ನಿರಾಕರಿಸಿದ ವಿಶೇಷ ನ್ಯಾಯಾಲಯ

ಒಂದಿಲ್ಲೊಂದು ಆಧಾರದ ಮೇಲೆ ವಿನಯ್‌ ಕುಲಕರ್ಣಿ ನ್ಯಾಯಾಲಯದ ಮೇಟ್ಟಿಲೇರುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತನ್ನು ಈ ನ್ಯಾಯಾಲಯ ಸಡಿಲಿಸಲಾಗದು ಎಂದು 2023ರ ಜೂನ್‌ನಲ್ಲಿ ಹೇಳಿದ್ದ ನ್ಯಾಯಾಲಯ.
Congress Leader Vinay Kulkarni and Bengaluru City Civil Court
Congress Leader Vinay Kulkarni and Bengaluru City Civil Court

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್‌ನ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಧಾರವಾಡದಲ್ಲಿ ಇಂದು ಮತದಾನ ಮಾಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಅನುಮತಿ ನಿರಾಕರಿಸಿದೆ. ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನವು ಹುಬ್ಬಳ್ಳಿ-ಧಾರವಾಡ ಸೇರಿ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ.

ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಷರತ್ತು ಸಡಿಲಿಕೆ ಮಾಡುವ ಮೂಲಕ ಮತ ಚಲಾಯಿಸಲು ಅನುಮತಿ ಕೋರಿ ವಿನಯ್‌ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ತಿರಸ್ಕರಿಸಿದ್ದಾರೆ.

ಒಂದಿಲ್ಲೊಂದು ಆಧಾರದ ಮೇಲೆ ವಿನಯ್‌ ಕುಲಕರ್ಣಿ ಅವರು ನ್ಯಾಯಾಲಯದ ಮೇಟ್ಟಿಲೇರುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತನ್ನು ಈ ನ್ಯಾಯಾಲಯ ಸಡಿಲಿಸಲಾಗದು ಎಂದು 2023ರ ಜೂನ್‌ನಲ್ಲಿ ಹೇಳಿತ್ತು.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಅವರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ.

ಈಚೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌-ಉಪಮೇಯರ್‌ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಲು ಧಾರವಾಡಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ವಿನಯ್‌ ಕುಲಕರ್ಣಿ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದಕ್ಕೂ ಮುನ್ನ, ತನ್ನ ಡೈರಿ ಫಾರ್ಮ್‌ ನಿರ್ವಹಿಸಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಕೋರಿ ಏಪ್ರಿಲ್‌ 5ರಂದು ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾ ಮಾಡಿತ್ತು.

ಕಳೆದ ವರ್ಷದ ನವೆಂಬರ್‌ನಲ್ಲಿ ಕುಲಕರ್ಣಿ ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಸಂಬಂಧಿ ವಿಜಯಲಕ್ಷ್ಮಿ ಪಾಟೀಲ್‌ ಅವರನ್ನು ಸುಚಿರಾಯು ಆಸ್ಪತ್ರೆಯಲ್ಲಿ ನೋಡಲು ಕೇವಲ ಮೂರು ತಾಸುಗಳಿಗೆ ಅವಕಾಶ ಸೀಮಿತಗೊಳಿಸಿತ್ತು. ಕುಲಕರ್ಣಿ ಅವರು ಮೂರು ದಿನ ಅಲ್ಲಿರಲು ಅವಕಾಶಕೊಡಬೇಕು ಎಂದು ವಿನಂತಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿರಲಿಲ್ಲ. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂಬ ಐದನೇ ಷರತ್ತಿನಲ್ಲಿ ಭಾಗಶಃ ಬದಲಾವಣೆ ಮಾಡಿ ನ್ಯಾಯಾಲಯವು 2021ರ ಡಿಸೆಂಬರ್‌ನಲ್ಲಿ ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Also Read
ಧಾರವಾಡ ಪ್ರವೇಶ: ಒಂದಿಲ್ಲೊಂದು ಆಧಾರದಲ್ಲಿ ವಿನಯ್‌ ಕುಲಕರ್ಣಿಯಿಂದ ಅರ್ಜಿ ಸಲ್ಲಿಕೆ ಎಂದು ಮನವಿ ವಜಾ ಮಾಡಿದ ನ್ಯಾಯಾಲಯ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಚುನಾವಣೆಯಲ್ಲಿ ಟಿಕೆಟ್‌ ಪಡೆಯುವುದಕ್ಕೂ ಮುನ್ನ ವಿನಯ ಕುಲಕರ್ಣಿ ಅವರು ನ್ಯಾಯಾಲಯದ ಅನುಮತಿ ಕೋರಿಲ್ಲ. ಟಿಕೆಟ್‌ ಸಿಕ್ಕ ಬಳಿಕ ಪ್ರಚಾರಕ್ಕಾಗಿ 50 ದಿನ ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಕೋರಿದ್ದರು. ಈ ಅರ್ಜಿಯನ್ನೂ ನ್ಯಾಯಾಲಯ ಪುರಸ್ಕರಿಸಿರಲಿಲ್ಲ.

Kannada Bar & Bench
kannada.barandbench.com