[ಸಂವಿಧಾನ ಜಾಥಾ] ಫೆ.24 ಮತ್ತು 25ರಂದು ಎರಡು ದಿನಗಳ ರಾಷ್ಟ್ರೀಯ ಐಕ್ಯತಾ ಸಮಾವೇಶ: ಸಿಎಂ ಸಿದ್ದರಾಮಯ್ಯ

ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಿಸಲಾಗುತ್ತಿದೆ. ಸಂವಿಧಾನ ರಚನೆಯಾದ ನಂತರ ಮೊದಲನೇ ಬಾರಿಗೆ ಬಜೆಟ್ ಪುಸ್ತಕದ ಮುಖಪುಟದಲ್ಲಿ ಪೀಠಿಕೆ ಮುದ್ರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನ ಪ್ರಸ್ತಾವನೆ ಭಾಗವನ್ನು ಸಿಎಂ ಸಿದ್ದರಾಮಯ್ಯ ಬೋಧಿಸಿದರು.
ಸಂವಿಧಾನ ಪ್ರಸ್ತಾವನೆ ಭಾಗವನ್ನು ಸಿಎಂ ಸಿದ್ದರಾಮಯ್ಯ ಬೋಧಿಸಿದರು. ಸಂಗ್ರಹ ಚಿತ್ರ

“ಜಾತ್ಯತೀತ, ಸಮಾನತೆ, ಭ್ರಾತೃತ್ವ ತತ್ವಗಳೇ ಸಂವಿಧಾನದ ತಳಹದಿ. ಇದಕ್ಕೆ ಧಕ್ಕೆ ತರುವ ಪ್ರಯತ್ನ ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಇದಕ್ಕೆ ಯಾವ ಪಕ್ಷ, ಗುಂಪು ಇಲ್ಲ. ಸಂವಿಧಾನ ಈ ದೇಶ ಎಲ್ಲಾ ಜನರಿಗೆ ಸಲ್ಲುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಭಾರತ ಸಂವಿಧಾನ ಹಾಗೂ ರಾಷ್ಟ್ರೀಯ ಐಕ್ಯತಾ ಸಮಾವೇಶದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಭಾರತ ಸಂವಿಧಾನ ಜಾರಿಗೆ ಬಂದು 75 ವರ್ಷಗಳಾಗಿವೆ. 75ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಥಾವನ್ನು ಜನವರಿ 26 ರಿಂದ ಫೆಬ್ರವರಿ 23ರವರೆಗೆ ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 24 ಮತ್ತು 25 ಎರಡು ದಿಗಳು ರಾಷ್ಟ್ರೀಯ ಏಕತಾ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಚಿಂತಕರಾದ ಪ್ರೊ. ಅಷುತೋಶ್ ವರ್ಶನಿ, ಡಾ. ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ. ಕಾಂಚಾ ಐಲಯ್ಯ, ಪ್ರಶಾಂತ್ ಭೂಷಣ್, ಬೆಜವಾಡ ವಿಲ್ಸನ್, ಮೇಧಾ ಪಾಟ್ಕರ್ ಮುಂತಾದ ಅನೇಕ ಚಿಂತಕರು ಮೇಧಾವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ದೇಶದ ಸಮಸ್ಯೆ, ಜನರ ಬವಣೆ, ಸಂವಿಧಾನದಲ್ಲಿ ಅದಕ್ಕೆ ಪರಿಹಾರಗಳ ಬಗ್ಗೆ ಈ ಚಿಂತಕರು ಬೆಳಕು ಚೆಲ್ಲಲಿದ್ದಾರೆ. ಫೆಬ್ರವರಿ 24ರಂದು ಉದ್ಘಾಟನೆ ನಡೆದು ಫೆಬ್ರವರಿ 25ರಂದು ಬೃಹತ್ ಸಮಾವೇಶ ನಡೆಯಲಿದೆ. ಪ್ರಸ್ತುತ ಜಾಥಾ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಿಸಲಾಗುತ್ತಿದೆ. ಸಂವಿಧಾನ ರಚನೆಯಾದ ನಂತರ ಮೊದಲನೇ ಬಾರಿಗೆ ಬಜೆಟ್ ಪುಸ್ತಕದ ಮುಖಪುಟದಲ್ಲಿ ಪೀಠಿಕೆ ಮುದ್ರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಜಾಗೃತಿ ಮೂಡಬೇಕು: ದೇಶದ ಜನರಿಗೆ ಸಂವಿಧಾನ ನಮಗೇನು ಕೊಟ್ಟಿದೆ ಎನ್ನುವುದು ತಿಳಿಯಬೇಕು. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರಗಳನ್ನು ನೀಡಿದ್ದಾರೆ. ಹೋರಾಟ ಇಲ್ಲದೇ ಸಂವಿಧಾನದಲ್ಲಿ ಹೇಳಿರುವ ಅನೇಕ ಹಕ್ಕುಗಳು ನಮಗೆ ದಕ್ಕುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಸಂವಿಧಾನ ಜಾರಿಯಾಗಿ 75ನೇ ವರ್ಷವಾದರೂ ಎಲ್ಲರಿಗೂ ಎಲ್ಲ ಹಕ್ಕುಗಳು ಸಿಕ್ಕಿಲ್ಲ. ಸಂವಿಧಾನ ಜಾರಿಗೆ ಬಂದ ಸಂದರ್ಭದಲ್ಲಿ ವೈರುಧ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದರು. ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಇದೆ. ಇಷ್ಟು ವರ್ಷಗಳಾದರೂ ಅಸಮಾನತೆ ನಮ್ಮ ದೇಶದಿಂದ ಹೋಗಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಆರ್ಥಿಕ, ಸಾಮಾಜಿಕ, ಸಮಾನತೆಯನ್ನು ಸಂವಿಧಾನ ಕೊಟ್ಟಿದ್ದರೂ ನಮಗ್ಯಾಕೆ ಸಿಕ್ಕಿಲ್ಲ ಎಂಬ ಜಾಗೃತಿ ಮೂಡಬೇಕು. ಅದಕ್ಕಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಜನರಿಗೆ ಸಂವಿಧಾನದ ಅರಿವು ಮೂಡಿಸುವ ಉದ್ದೇಶ: ನಮ್ಮ ದೇಶದಲ್ಲಿ ಕಾನೂನಿನ ಅರಿವು ಕಡಿಮೆಯಿದೆ. ಬಹಳ ಜನರಿಗೆ ಸಂವಿಧಾನದ ಬಗ್ಗೆ ತಿಳಿದಿಲ್ಲ. ದೇಶದ ಪ್ರತಿ ನಾಗರಿಕನಿಗೂ ನಮ್ಮ ಸಂವಿಧಾನದ ಬಗ್ಗೆ ತಿಳಿದಿರಬೇಕು.  ಸಂವಿಧಾನ ನೀಡಿರುವ ಹಕ್ಕುಗಳು, ಅವುಗಳು ಸರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆಯೇ ಎಂದು ಎಲ್ಲರಿಗೂ ತಿಳಿಯುವ ಸಲುವಾಗಿ ಸಮಾವೇಶ ಆಯೋಜಿಸುತ್ತಿರುವುದಾಗಿ ತಿಳಿಸಬೇಕಿದೆ. ಸಂವಿಧಾನದಲ್ಲಿ ಕೆಲವರಿಗೆ ನಂಬಿಕೆ, ಗೌರವವಿಲ್ಲ. ಆದ್ದರಿಂದ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಸಹಿಷ್ಣುತೆ ಮತ್ತು ಸಹಬಾಳ್ವೆ ಭೋದಿಸುವ ಸಂವಿಧಾನ: ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಸರ್ಕಾರಗಳ ಕರ್ತವ್ಯ. ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನ ತಿಳಿಸುತ್ತದೆ. ಸಾಮಾಜಿಕ ನ್ಯಾಯ ಮತ್ತು ಅವಕಾಶಗಳನ್ನು ಪಡೆಯಲು ಜಾಗೃತಿ ಮೂಡಿಸಲು ಫೆಬ್ರವರಿ 24 ಮತ್ತು 25 ರಂದು ಭಾರತ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಬದ್ಧತೆ ಹಾಗೂ ಸ್ಪಷ್ಟತೆ ಇದ್ದರೆ, ಯಾರು ನಮ್ಮನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಸುಮಾರು ಶೇ.78 ರಷ್ಟು ಜನರು ಇಂದು ಶಿಕ್ಷಣ ಪಡೆದಿದ್ದಾರೆ. ವಿಪರ್ಯಾಸವೆಂದರೆ ವಿದ್ಯಾವಂತರು ಸಹ ಇಂದಿಗೂ ಮೌಢ್ಯ ಕಂದಾಚಾರ ಪಾಲಿಸುತ್ತಿದ್ದಾರೆ. ವೈಚಾರಿಕತೆಯ ಬಗ್ಗೆ ಅರಿವಿಲ್ಲ ಎಂದು ವಿಷಾದಿಸಿದರು. ಸಮಾಜ ಕಲ್ಯಾಣ ಸಚಿವ ಎಚ್‌ ಸಿ ಮಹದೇವಪ್ಪ ಮತ್ತು ಇತರರು ಇದ್ದರು.

Related Stories

No stories found.
Kannada Bar & Bench
kannada.barandbench.com