ಮೈಸೂರಿನ ಮದರಸಾ-ಮಸೀದಿ ಪರಿವರ್ತನೆ ವಿವಾದ: ಪರಿಹಾರ ಹುಡುಕದ ಜಿಲ್ಲಾಡಳಿತಕ್ಕೆ ಚಾಟಿ ಬೀಸಿದ ಹೈಕೋರ್ಟ್‌

ದಶಕಗಳಿಂದ ಈ ವಿಚಾರ ನನೆಗುದಿಗೆ ಬಿದ್ದಿದ್ದು, ಇದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಅಪರಾಧಿಕ ಕೃತ್ಯಗಳಲ್ಲಿ ಈ ತನಕ ಕನಿಷ್ಠ 10 ಜನ ಬಲಿಯಾಗಿದ್ದಾರೆ. ಗಂಭೀರವಾದ 64 ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ ಎಂದು ಪೀಠಕ್ಕೆ ವಿವರಿಸಿದ ಎಎಜಿ.
High Court of Karnataka
High Court of Karnataka
Published on

ಮೈಸೂರು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಲೀಂ ಸಾದಿಯಾ ಮದರಸಾವನ್ನು ಮಸೀದಿಯಾಗಿ ಪರಿವರ್ತನೆ ಮಾಡುವ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಶಕಗಳಿಂದ ಇರುವ ವಿವಾದವನ್ನು ಬಗೆಹರಿಸಲು ಹೋದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಸಮಸ್ಯೆಯನ್ನು ಪರಿಹರಿಸದೇ ಇರುವ ನಡೆ ಸರ್ವಥಾ ಒಪ್ಪಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಮೈಸೂರು ಜಿಲ್ಲಾಧಿಕಾರಿಯನ್ನು ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮಸ್ಜಿದ್‌ ಎ ಸಿದ್ದಿಖಿ ಅಕ್ಬರ್‌ ಟ್ರಸ್ಟ್‌ ಸಲ್ಲಿಸುವ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಏಕಸದಸ್ಯ ಪೀಠ ಮಾಡಿರುವ ಆದೇಶ ಪಾಲನೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಗಾಯತ್ರಿಪುರಂ ಎರಡನೇ ಹಂತದಲ್ಲಿರುವ ಹಲೀಂ ಸಾದಿಯಾ ಶೈಕ್ಷಣಿಕ ಸಂಸ್ಥೆ ಮತ್ತು ಮಸ್ಜಿದ್‌ ಎ ಸಿದ್ದಿಖಿ ಅಕ್ಬರ್‌ ಟ್ರಸ್ಟ್‌ನ ಅಧಿಕೃತ ಪ್ರತಿನಿಧಿ ಮುನಾವರ್‌ ಪಾಶ ಬಿನ್‌ ಅಬ್ದುಲ್‌ ವಹೀದ್‌ ಅವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ವೆಂಕಟೇಶ್‌ ನಾಯ್ಕ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮೊಹಮದ್‌ ತಾಹೀರ್‌ ಅವರು “ರಾಜ್ಯ ಸರ್ಕಾರ ಸಬೂಬು ಹೇಳಿ, ಬೇಕೆಂದೇ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡುತ್ತಿಲ್ಲ” ಎಂದು ಆರೋಪಿಸಿದರು.

ಇದನ್ನು ಅಲ್ಲಗಳೆದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ ಎಸ್ ಪ್ರದೀಪ್‌ ಮತ್ತು ಸರ್ಕಾರದ ಪರ ವಕೀಲೆ ಬಿ ಜಿ ನಮಿತಾ ಮಹೇಶ್‌ ಅವರು “ಇದೊಂದು ದಶಕಗಳಿಂದ ನನೆಗುದಿಗೆ ಬಿದ್ದಿರುವ ವಿಷಯ. ಇದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಗಲಭೆಗಳು ಮತ್ತು ಅಪರಾಧಿಕ ಕೃತ್ಯಗಳಲ್ಲಿ ಈತನಕ ಕನಿಷ್ಠ 10 ಜನ ಬಲಿಯಾಗಿದ್ದಾರೆ. ಗಂಭೀರವಾದ 64 ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ” ಎಂದು ವಸ್ತುಸ್ಥಿತಿಯನ್ನು ಪೀಠದ ಮುಂದಿಟ್ಟಿರು.

ವಾದ ಆಲಿಸಿದ ಪೀಠ ವಿಚಾರಣೆಯಲ್ಲಿ ಖುದ್ದು ಹಾಜರಿದ್ದ ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ ಮತ್ತು ಮೈಸೂರು ನಗರ ಪೊಲೀಸ್ ಎಸಿಪಿ ಕೆ ರಾಜೇಂದ್ರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

“ಯಥಾಸ್ಥಿತಿ ಕಾಪಾಡುವ ಆದೇಶವನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವುದಾದರೆ ನೀವು ಇರುವುದಾದರೂ ಯಾತಕ್ಕೆ? ಕಾನೂನು ಸುವ್ಯವಸ್ಥೆ ಪಾಲಿಸಲು ಕಷ್ಟ ಎನ್ನುವ ನೀವು ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಇಂತಹ ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ಇನ್ಯಾವ ಜಿಲ್ಲೆಯ ಸಮಸ್ಯೆ ಬಗೆಹರಿಸಬಲ್ಲಿರಿ? ಜಿಲ್ಲಾಧಿಕಾರಿ ಹುದ್ದೆ ಎಂದರೆ ಅದೇನು ಎಂಜಾಯ್‌ ಮಾಡೋದಕ್ಕೆ ಇದೆಯಾ?” ಎಂದು ಕಿಡಿಕಾರಿತು.

ಇದಕ್ಕೆ ಲಕ್ಷ್ಮಿಕಾಂತ ಅವರು “ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ” ಎಂದು ಸಮಜಾಯಿಷಿ ನೀಡಿದರು. ಈ ಮಾತಿಗೆ ದನಿಗೂಡಿಸಿದ ಪ್ರದೀಪ್‌ “ಶಾಂತಿಸಭೆ ನಡೆಸಿದರೆ ಸಭೆಯಲ್ಲಿ ಭಾಗವಹಿಸಿದವರನ್ನು ಗುರಿ ಮಾಡಲಾಗುತ್ತದೆ. ಹತ್ಯೆಗಳು ನಡೆಯುತ್ತವೆ. ಇದರಲ್ಲಿ ಎರಡೂ ಕೋಮಿನ ಜನರಿಗೂ ಅಪಾಯ ಇದೆ” ಎಂಬ ಆತಂಕ ವ್ಯಕ್ತಪಡಿಸಿದರು.

ವಾದ–ಪ್ರತಿವಾದ ಆಲಿಸಿದ ಪೀಠವು “ಕೂಡಲೇ ಶಾಂತಿಸಭೆ ನಡೆಸಿ ಮುಂದಿನ ವಿಚಾರಣೆಯಲ್ಲಿ ಅದರ ವರದಿ ಸಲ್ಲಿಸಬೇಕು” ಎಂದು ತಾಕೀತು ಮಾಡಿ ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಿತು.

Kannada Bar & Bench
kannada.barandbench.com