ಸೆಂಥಿಲ್‌ ಮಾನಹಾನಿ ಪ್ರಕರಣ: ಶಾಸಕ ಜನಾರ್ದನ ರೆಡ್ಡಿಗೆ ನೋಟಿಸ್‌ ಜಾರಿ ಮಾಡಿದ ವಿಶೇಷ ನ್ಯಾಯಾಲಯ

ಶಶಿಕಾಂತ್ 'ಹಿಂದು ವಿರೋಧಿ', ಧರ್ಮಸ್ಥಳ ಪ್ರಕರಣದ ಹಿಂದಿನ 'ಮಾಸ್ಟರ್ ಮೈಂಡ್' ಹಾಗೂ "ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಕೆಲ ವ್ಯಕ್ತಿಗಳ ಮೂಲಕ 'ಪ್ರಚೋದನೆ' ನೀಡುತ್ತಿದ್ದಾರೆ" ಎಂದು ರೆಡ್ಡಿ ಆರೋಪಿಸಿದ್ದರಿಂದ ದಾವೆ ಹೂಡಲಾಗಿದೆ.
ಸೆಂಥಿಲ್‌ ಮಾನಹಾನಿ ಪ್ರಕರಣ: ಶಾಸಕ ಜನಾರ್ದನ ರೆಡ್ಡಿಗೆ ನೋಟಿಸ್‌ ಜಾರಿ ಮಾಡಿದ ವಿಶೇಷ ನ್ಯಾಯಾಲಯ
Published on

ತಮಿಳುನಾಡಿನ ತಿರುವಳ್ಳೂರು ಕಾಂಗ್ರೆಸ್‌ ಸಂಸದ ಶಶಿಕಾಂತ್ ಸೆಂಥಿಲ್ ದಾಖಲಿಸಿರುವ ಮಾನಹಾನಿ ಮೊಕದ್ದಮೆ ಸಂಬಂಧ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಜನಾರ್ದನ ರೆಡ್ಡಿ ಅವರು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿ ಮಾನಹಾನಿಯುಂಟು ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಮಾಜಿ ಐಎಎಸ್‌ ಅಧಿಕಾರಿಯೂ ಆದ ತಮಿಳುನಾಡಿನ ಶಶಿಕಾಂತ್ ಸೆಂಥಿಲ್ ಸಲ್ಲಿಸಿರುವ ಖಾಸಗಿ ದೂರನ್ನು ಬೆಂಗಳೂರಿನ ವಿಶೇಷ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್ ವಿಚಾರಣೆ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 223ರ ಅನುಸಾರ ದೂರುದಾರ ಶಶಿಕಾಂತ ಸೆಂಥಿಲ್ ಹಾಗೂ ಸಾಕ್ಷಿಯಾದ ಕಿರಣ್‌ಜಿತ್ ಅವರ ಸ್ವಯಂ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯವು ಸೆಕ್ಷನ್ 223 ಅಡಿಯಲ್ಲಿ ಆರೋಪಿಯ ವಾದ ಆಲಿಸಲು ಜನಾರ್ದನ ರೆಡ್ಡಿ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.

ಶಶಿಕಾಂತ್ ಸೆಂಥಿಲ್ ಪರ ವಕೀಲರಾದ ಸೂರ್ಯ ಮುಕುಂದರಾಜ್‌ ಮತ್ತು ಸಂಜಯ ಯಾದವ್‌ ಹಾಜರಿದ್ದರು.

ಬಿಎನ್‌ಎಸ್‌ಎಸ್‌ ಸೆಕ್ಷನ್‌ 223ರ ಪ್ರಕಾರ ಖಾಸಗಿ ದೂರಿನ ಸಂಬಂಧ ಸಂಜ್ಞೇ ಪರಿಗಣಿಸುವುದಕ್ಕೂ ಮುನ್ನ ಮ್ಯಾಜಿಸ್ಟ್ರೇಟ್ ದೂರುದಾರರ ಸ್ವಯಂಹೇಳಿಕೆ ಹಾಗೂ ಪ್ರಕರಣದಲ್ಲಿ ಸಾಕ್ಷಿಗಳಿದ್ದಲ್ಲಿ ಅವರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಬೇಕು. ಆ ಬಳಿಕ ಆರೋಪಿಗೆ ಕಡ್ಡಾಯವಾಗಿ ನೋಟಿಸ್ ಜಾರಿಗೊಳಿಸಿ ಅವರ ಅಹವಾಲನ್ನೂ ಆಲಿಸಬೇಕು.

ಪ್ರಕರಣದ ಹಿನ್ನೆಲೆ: ಸೆಂಥಿಲ್‌ ದಾಖಲಿಸಿರುವ ದೂರಿನ ಸಾರಾಂಶವೆಂದರೆ ಗಾಲಿ ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ಸೆಂಥಿಲ್‌ ಅವರ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸೆಂಥಿಲ್ ಅವರು ಈ ಹಿಂದೆ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದರು. ಬಳ್ಳಾರಿಯಲ್ಲಿ ರೆಡ್ಡಿ ಎಸಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಇಸಿ ಮತ್ತು ಸಿಬಿಐಗೆ ನೆರವು ನೀಡಿದ್ದ ಸೆಂಥಿಲ್, ಹಲವು ಕ್ರಮಗಳನ್ನು ಬಯಲು ಮಾಡಿದ್ದರು. ಇದರಿಂದ, ಜನಾರ್ದನ ರೆಡ್ಡಿ ದ್ವೇಷ ಸಾಧಿಸುತ್ತಿದ್ದರು. 2025ರ ಆಗಸ್ಟ್ 18ರಿಂದ 21ರ ನಡುವೆ ರಾಜ್ಯದ ಹಲವು ಪ್ರಾದೇಶಿಕ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿರುವ ರೆಡ್ಡಿ, ಶಶಿಕಾಂತ ಅವರನ್ನು 'ಹಿಂದು ವಿರೋಧಿ', ಧರ್ಮಸ್ಥಳ ಪ್ರಕರಣದ ಹಿಂದಿನ 'ಮಾಸ್ಟರ್ ಮೈಂಡ್' ಹಾಗೂ "ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಕೆಲ ವ್ಯಕ್ತಿಗಳ ಮೂಲಕ 'ಪ್ರಚೋದನೆ' ನೀಡುತ್ತಿದ್ದಾರೆ" ಎಂದು ಆಧಾರರಹಿತ ಆರೋಪ ಮಾಡಿದ್ದಾರೆ. ಈ ಹೇಳಿಕೆಗಳನ್ನು ಕೆಲ ಮುದ್ರಣ ಮಾಧ್ಯಮಗಳೂ ವರದಿ ಮಾಡಿವೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Also Read
ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಂಸದ ಶಶಿಕಾಂತ್‌ ಸೆಂಥಿಲ್‌ ಹೂಡಿರುವ ಮಾನಹಾನಿ ದಾವೆ ವಿಚಾರಣೆಗೆ ಅಂಗೀಕಾರ

ಆರೋಪಿಯ ದುರುದ್ದೇಶಪೂರಿತ ಹೇಳಿಕೆಗಳಿಂದ ದೂರುದಾರರ ಖ್ಯಾತಿಗೆ ಹಾಗೂ ಸಮಾಜದಲ್ಲಿ ಅವರ ಸ್ಥಾನಮಾನಕ್ಕೆ ತೀವ್ರ ಹಾನಿಯುಂಟಾಗಿದೆ. ಜನರು ಅವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದು, ಇದರಿಂದ, ದೂರುದಾರರು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಸಂಸತ್ ಸದಸ್ಯರಾಗಿರುವ ಅವರ ಕೆಲಸದ ಮೇಲೂ ಪರಿಣಾಮ ಬೀರಿದೆ. ಆದ್ದರಿಂದ, ದೂರು ದಾಖಲಿಸಿಕೊಂಡು ಆರೋಪಿಯ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 356 (1) ಮತ್ತು 356(2) ರ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಖಾಸಗಿ ದೂರಿನಲ್ಲಿ ಮನವಿ ಮಾಡಲಾಗಿದೆ.

Kannada Bar & Bench
kannada.barandbench.com