ಪ್ರೊ. ಭಗವಾನ್‌ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ವಿಳಂಬ: ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌

ಒಂದೊಮ್ಮೆ ನಿಗದಿತ ಅವಧಿಯೊಳಗೆ ಅರ್ಜಿ ಇತ್ಯರ್ಥಪಡಿಸದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನಕ್ಕೆ 2,000 ರೂಪಾಯಿ ದಂಡ ಪಾವತಿಸಬೇಕು ಎಂದು ಆದೇಶಿಸಿದ ಪೀಠ.
Prof. K S Bhagawan and Karnataka HC
Prof. K S Bhagawan and Karnataka HC

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಸಾಹಿತಿ ಪ್ರೊ. ಕೆ ಎಸ್ ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸಾಗರ ತಾಲ್ಲೂಕಿನ ಇಕ್ಕೇರಿಯ ಮಹಾಬಲೇಶ್ವರ ಮಾಪು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ಕೆ ಎಸ್ ಭಗವಾನ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಸರ್ಕಾರವು 8 ವಾರಗಳ ಒಳಗೆ ಪರಿಗಣಿಸಿ ಇತ್ಯರ್ಥಪಡಿಸಬೇಕು. ಒಂದೊಮ್ಮೆ ನಿಗದಿತ ಅವಧಿಯೊಳಗೆ ಅರ್ಜಿ ಇತ್ಯರ್ಥಪಡಿಸದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನಕ್ಕೆ 2,000 ರೂಪಾಯಿ ದಂಡ ಪಾವತಿಸಬೇಕು ಎಂದು ಆದೇಶಿಸಿತು.

Also Read
ಹವಾಲಾ ಹಣ ಪ್ರಕರಣ: ಕೇರಳ ಎಡ ಪಕ್ಷದ ನಾಯಕನ ಪುತ್ರ ಬಿನೇಶ್‌ ಕೊಡಿಯೇರಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಭಗವಾನ್ ಅವರು ಬರೆದಿರುವ ‘ಶ್ರೀರಾಮ ಮಂದಿರ ಏಕೆ ಕಟ್ಟಬಾರದು’ ಎಂಬ ಕೃತಿಯಲ್ಲಿ ಶ್ರೀರಾಮ, ಲಕ್ಷ್ಮಣ, ಆಂಜನೇಯ, ಸೀತಾ ಮಾತೆಯ ಅವಹೇಳನ ಮಾಡಲಾಗಿದ್ದು, ಹಿಂದೂ ಧರ್ಮ ಮತ್ತು ಹಿಂದೂಗಳ ನಂಬಿಕೆಗಳನ್ನು ಕೀಳಾಗಿ ಬಿಂಬಿಸಿಲಾಗಿದೆ. ಜತೆಗೆ, ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಮಹಾಬಲೇಶ್ವರ ಮಾಪು ಸಾಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಭಗವಾನ್ ವಿರುದ್ಧ ಧಾರ್ಮಿಕ ಸೌಹಾರ್ದತೆ ಕದಡಿದ, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಹಾಗೂ ಮಾನಹಾನಿ ಮಾಡಿದ ಆರೋಪಗಳ ಅಡಿ ವಿಚಾರಣೆ ನಡೆಸಲು ಸರ್ಕಾರದಿಂದ ಅನುಮತಿ ಕೋರಿ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ವಿಳಂಬ ಧೋರಣೆ ಅನುಸರಿಸಿತ್ತು. ಇದರಿಂದ ಅಸಮಾಧನಗೊಂಡ ದೂರುದಾರರು, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಮಧುಸೂದನ್ ಅಡಿಗ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com