Supreme Court, Air Pollution
Supreme Court, Air Pollution

[ದೆಹಲಿ ವಾಯುಮಾಲಿನ್ಯ] ನಮ್ಮ ಭುಜದ ಮೇಲೆ ಕೋವಿ ಇರಿಸಬೇಡಿ; ನೀವೇ ಕ್ರಮ ಕೈಗೊಳ್ಳಿ: ಸರ್ಕಾರಗಳಿಗೆ ಸುಪ್ರೀಂ ತಪರಾಕಿ

ನಾವು ವಿರೋಧ ಪಕ್ಷದ ನಾಯಕರಲ್ಲ. ಮಾಲಿನ್ಯ ನಿಯಂತ್ರಣ ಮಾತ್ರವೇ ನಮ್ಮ ಗುರಿ ಎಂದು ವಿಚಾರಣೆ ವೇಳೆ ಸಿಜೆಐ ಎನ್‌ ವಿ ರಮಣ ಹೇಳಿದರು,
Published on

ದೆಹಲಿಯಲ್ಲಿ ವಾಯುಮಾಲಿನ್ಯವನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ತಾನು ಸೂಚಿಸಿದ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರಗಳಿಂದ ಲೋಪವುಂಟಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಅತೃಪ್ತಿ ವ್ಯಕ್ತಪಡಿಸಿದೆ [ಆದಿತ್ಯ ದುಬೆ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಮಕ್ಕಳಿಗೆಲ್ಲಾ ಆನ್‌ಲೈನ್‌ ಮೂಲಕ ತರಗತಿ ನಡೆಸುವಂತೆ ಸೂಚಿಸಲಾಗಿದ್ದರೂ ಅವರಿನ್ನೂ ಶಾಲೆಗೆ ಹೋಗುವಂತೆ ಆಗಿರುವುದೇಕೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಸೂರ್ಯ ಕಾಂತ್ ಅವರ ಪೀಠ ಪ್ರಶ್ನಿಸಿತು.

Also Read
[ದೆಹಲಿ ವಾಯುಮಾಲಿನ್ಯ] ಮಾಲಿನ್ಯ ನಿರ್ವಹಣೆ ಬಗ್ಗೆ ಕೇಂದ್ರದ ಅಫಿಡವಿಟ್‌; ಟಿವಿ ಚರ್ಚೆ ಹೆಚ್ಚು ಮಾಲಿನ್ಯಕರ: ಸುಪ್ರೀಂ

ಪೀಠ ಹೇಳಿದ ಪ್ರಮುಖ ಅಂಶಗಳು:

  • ನಾವು ಇದನ್ನು ಗಂಭೀರವಾಗಿ ನೋಡುತ್ತಿದ್ದೇವೆ. ಶಾಲೆಗಳನ್ನು ಮುಚ್ಚಲಾಗಿದೆ ಎಂದು ನೀವು ನಮಗೆ ಹೇಳಿದ್ದೀರಿ ಆದರೆ ಹಾಗೆ ಮಾಡಿಲ್ಲ. 3 ರಿಂದ 4 ವರ್ಷದ ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡಲಾಗುತ್ತಿದೆ.

  • ಹಿರಿಯರು ಮನೆಯಿಂದಲೇ ಕೆಲಸ ಮಾಡುವ ಮತ್ತು ಮಕ್ಕಳು ಶಾಲೆಗೆ ಹೋಗವ ಸ್ಥಿತಿ ನಿರ್ಮಾಣವಾಗಿದೆ. ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮಾಡಲಾಗುವುದು, ಲಾಕ್‌ಡೌನ್‌ಗೂ ಸಿದ್ಧ ಎಂದು ಹಿಂದೆ ಭರವಸೆ ನೀಡಿದ್ದಿರಿ. ಶಾಲಾ ಕಾಲೇಜುಗಳನ್ನೂ ಮುಚ್ಚುವುದಾಗಿ ತಿಳಿಸಿದ್ದೀರಿ ಆದರೆ ಈಗ ಆಗಿರುವುದೇನು?

  • ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ನ್ಯಾಯಾಲಯದ ಉದ್ದೇಶ. ನ್ಯಾಯಾಲಯ ಕಾರ್ಯಾಂಗದ ವ್ಯಾಪ್ತಿಗೆ ಲಗ್ಗೆ ಇಡುತ್ತಿದೆ ಎಂದು ಟೀಕಿಸುವವರಿಗಾಗಿ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ.

  • ನಾವು ವಿರೋಧ ಪಕ್ಷದ ನಾಯಕರಲ್ಲ. ಮಾಲಿನ್ಯ ನಿಯಂತ್ರಣ ಮಾತ್ರವೇ ನಮ್ಮ ಗುರಿ.

  • ನಮ್ಮ ಭುಜದ ಮೇಲೆ ಕೋವಿಯಿಟ್ಟು ಗುಂಡು ಹಾರಿಸುವಂತಿಲ್ಲ. ನೀವೇ ಕ್ರಮ ಕೈಗೊಳ್ಳಬೇಕು. ನಿಮ್ಮ ಅಧಿಕಾರಶಾಹಿಯಲ್ಲಿ ಕ್ರಿಯಾಶೀಲತೆಯನ್ನು ಜಾಗೃತಗೊಳಿಸಲು ಅಥವಾ ತುಂಬಲು ನಮಗೆ ಸಾಧ್ಯವಿಲ್ಲ. ನೀವು ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕು.

  • ಸರ್ಕಾರ ತೋರಿಕೆಗೆ ಕೆಲಸ ಮಾಡುತ್ತಿದೆಯೇ ವಿನಾ ಅನುಷ್ಠಾನ ನಡೆಯುತ್ತಿಲ್ಲ.

ದೇಶದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಅವರು ಸಲ್ಲಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Kannada Bar & Bench
kannada.barandbench.com