![[ದೆಹಲಿ ಗಲಭೆ] ತನ್ಹಾ, ಕಲಿತಾ, ನತಾಶಾ ಬಿಡುಗಡೆಗೆ ಆದೇಶಿಸಿದ ದೆಹಲಿ ನ್ಯಾಯಾಲಯ](http://media.assettype.com/barandbench-kannada%2F2021-06%2F2b2d3454-a1c1-4da4-91b8-0a2a33508efb%2Fbarandbench_2021_06_845e3cfd_c518_43bb_a8bd_17f52fd5e722_dehli_riots_students__1_.jpg?w=480&auto=format%2Ccompress&fit=max)
ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿಯ ಕಡ್ಕಡ್ಡೂಮಾ ನ್ಯಾಯಾಲಯ ಗುರುವಾರ ಮಧ್ಯಾಹ್ನ ಆದೇಶಿಸಿದೆ.
ಈ ಕುರಿತು ಆದೇಶ ಹೊರಡಿಸಲಾಗಿದ್ದು ಪ್ರತಿಗಳನ್ನು ಜೈಲು ಅಧಿಕಾರಿಗಳಿಗೆ ಇಮೇಲ್ ಮಾಡಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರೆವಿಂದರ್ ಬೇಡಿ ತಿಳಿಸಿದರು.
ದೆಹಲಿ ಹೈಕೋರ್ಟ್ ಮೂವರಿಗೂ ಜೂನ್ 15ರಂದು ಜಾಮೀನು ನೀಡಿತ್ತು. ಆದರೆ ಪೊಲೀಸರು ವಿಳಾಸ ಮತ್ತು ಶ್ಯೂರಿಟಿ ಪರಿಶೀಲನೆ ಮಾಡಬೇಕಿರುವುದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡಲು ಕಡಕಡ್ಡೂಮಾ ಸೆಷನ್ಸ್ ನ್ಯಾಯಾಲಯ ನಿರಾಕರಿಸಿತ್ತು. ತನಿಖಾಧಿಕಾರಿ ಬುಧವಾರ ಹೆಚ್ಚಿನ ಸಮಯಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರವೂ ಈ ಮೂವರು ಬಿಡುಗಡೆಯಾಗಿರಲಿಲ್ಲ.
ನ್ಯಾಯಾಲಯದ ತೀರ್ಮಾನ ಪ್ರಶ್ನಿಸಿ ಆರೋಪಿತ ವ್ಯಕ್ತಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಬೇಕು ಆ ಬಳಿಕ ತಾನು ಮಧ್ಯಾಹ್ನ 3.30 ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ಗುರುವಾರ ಬೆಳಿಗ್ಗೆ ತಿಳಿಸಿತ್ತು. ಅದಾದ ಕೆಲ ಗಂಟೆಗಳ ಬಳಿಕ ತನ್ಹಾ, ಕಲಿತಾ, ನತಾಶಾ ಅವರನ್ನು ಬಿಡುಗಡೆಗೊಳಿಸಿ ಕಡ್ಕಡ್ಡೂಮಾ ನ್ಯಾಯಾಲಯ ಆದೇಶ ಹೊರಡಿಸಿದೆ.