ಸಲ್ಮಾನ್ ಖುರ್ಷಿದ್ ಅವರ ಅಯೋಧ್ಯೆ, ಆರ್‌ಎಸ್‌ಎಸ್‌ ಕುರಿತಾದ ಪುಸ್ತಕ: ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ಕೋರ್ಟ್ ನಕಾರ

ತಡೆಯಾಜ್ಞೆಯಿಂದ ಪ್ರಕಾಶಕರಿಗೆ ತೊಂದರೆ ಉಂಟಾಗಲಿದ್ದು ಲೇಖಕರ ವಾಕ್ ಮತ್ತು ಅಭಿವ್ಯಕ್ತಿಯ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
Salman Khurshid
Salman Khurshid facebook

ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅವರು ಬರೆದಿರುವ ʼಸನ್‌ರೈಸ್ ಓವರ್ ಅಯೋಧ್ಯೆʼ ಪುಸ್ತಕದ ಪ್ರಸಾರ, ಪ್ರಕಟಣೆ, ವಿತರಣೆ ಹಾಗೂ ಮಾರಾಟದ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ನ್ಯಾಯಾಲಯ ಬುಧವಾರ ನಿರಾಕರಿಸಿದೆ. (ವಿಷ್ಣು ಗುಪ್ತ ಮತ್ತು ಸರ್ಕಾರ ನಡುವಣ ಪ್ರಕರಣ).

ಪುಸ್ತಕದಲ್ಲಿನ ಒಂದು ಅಂಶ ಹಿಂದೂ ಧರ್ಮ ಅನುಸರಿಸುವ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹಿಂದೂ ಸೇನೆಯ ಅಧ್ಯಕ್ಷರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರತಿವಾದಿಗಳ ವಿರುದ್ಧವಾಗಿ ತಡೆಯಾಜ್ಞೆ ನೀಡಬೇಕು ಮತ್ತು ಸಮಾಜದ ಹಿತಾಸಕ್ತಿಗಾಗಿ ಪುಸ್ತಕ ನಿಷೇಧಿಸುವಂತೆ ಫಿರ್ಯಾದಿ ಕೋರಿದ್ದರು.

"ಲೇಖಕ ಮತ್ತು ಪ್ರಕಾಶಕರಿಗೆ ಪುಸ್ತಕ ಬರೆಯುವ ಹಾಗೂ ಪ್ರಕಟಿಸುವ ಹಕ್ಕಿದೆ. ತಡೆಯಾಜ್ಞೆ ನೀಡಿದರೆ ಅದು ಪ್ರಕಾಶಕರಿಗೆ ತೊಂದರೆ ಉಂಟುಮಾಡುತ್ತದೆ. ಜೊತೆಗೆ ಲೇಖಕರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸುತ್ತದೆ" ಎಂದು ಸಿವಿಲ್ ನ್ಯಾಯಾಧೀಶೆ ಪ್ರೀತಿ ಪರೇವಾ ಹೇಳಿದರು.

“ಪುಸ್ತಕ ಬರೆಯುವ/ಪ್ರಕಟಿಸುವ ಹಕ್ಕು ಪ್ರತಿವಾದಿಗಳಿಗೆ ಇದೆ. ಪುಸ್ತಕದಲ್ಲಿ ಇವೆ ಎನ್ನಲಾದ ಆಕ್ಷೇಪಾರ್ಹ ಅಂಶಗಳಿಂದ ತನಗೆ ಅನಾನುಕೂಲ ಉಂಟಾಗುತ್ತದೆ ಎಂದು ಸಾಬೀತಪಡಿಸಲು ಫಿರ್ಯಾದಿಗೆ ಸಾಧ್ಯವಾಗಿಲ್ಲ. ಮತ್ತೊಂದೆಡೆ, ತಡೆಯಾಜ್ಞೆ ನೀಡಿದರೆ ಅದು ಪ್ರಕಾಶಕರಿಗೆ ತೊಂದರೆ ಉಂಟುಮಾಡುತ್ತದೆ. ಜೊತೆಗೆ ಲೇಖಕರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Also Read
ರಾಜ್ಯದ ನ್ಯಾಯಾಲಯ ಇತಿಹಾಸ ಕುರಿತು ಗ್ರಂಥ ಹೊರತರಲಿರುವ ಕರ್ನಾಟಕ ಹೈಕೋರ್ಟ್: ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ

ಇದೇ ವೇಳೆ "ಫಿರ್ಯಾದಿ ಪುಸ್ತಕದ ವಿರುದ್ಧ ಪ್ರಚಾರ ಮಾಡಬಹುದು ಮತ್ತು ಅವರ ಭಾವನೆಗಳಿಗೆ ಘಾಸಿಗೊಳಿಸಿದ ಆಕ್ಷೇಪಾರ್ಹ ಪ್ಯಾರಗಳನ್ನು ಖಂಡಿಸಿ ಮತ್ತೊಂದು ಪುಸ್ತಕ ಪ್ರಕಟಿಸಬಹುದು" ಎಂದು ಕೂಡ ನ್ಯಾಯಾಲಯ ಹೇಳಿದೆ.

ಖುರ್ಷಿದ್‌ ಅವರ ಪುಸ್ತಕದಲ್ಲಿ ಹಿಂದುತ್ವ ಮತ್ತು ಐಸಿಸ್‌ ಸಂಘಟನೆಗಳ ವಿವರ ಇರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪುಸ್ತಕ ಪ್ರಕಟಣೆ ವಿರೋಧಿಸಿ ದುಷ್ಕರ್ಮಿಗಳು ಖುರ್ಷಿದ್‌ ಅವರ ನೈನಿತಾಲ್‌ ಮನೆಯನ್ನು ಧ್ವಂಸಗೊಳಿಸಿದ್ದರು.

ಮೋರ್ಗನ್ ಸ್ಟೇನ್ಲಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ನ್ಯಾಯಾಲಯ ಉಲ್ಲೇಖಿಸಿತು. ಪುಸ್ತಕದ ಆಯ್ದಭಾಗವನ್ನು ಮಾತ್ರ ದೂರುದಾರರು ದಾಖಲೆಯಲ್ಲಿ ಒದಗಿಸಿದ್ದಾರೆ. ಅಂತಹ ಆಯ್ದ ಭಾಗವನ್ನಷ್ಟೇ ಓದಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲಾಗದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ವಾದ ಮತ್ತು ಸಮರ್ಥನೆಯ ಸ್ಪಷ್ಟೀಕರಣಕ್ಕಾಗಿ ಪ್ರಕರಣವನ್ನು ನ. 18ರಂದು ಮತ್ತೆ ಆಲಿಸಲಿದೆ.

Related Stories

No stories found.
Kannada Bar & Bench
kannada.barandbench.com