

2018ರಲ್ಲಿ ರೈಲ್ವೆ ರಕ್ಷಣಾ ಪಡೆಯ ಹಿರಿಯ ಅಧಿಕಾರಿಯೊಬ್ಬರನ್ನು ಮತ್ತೊಬ್ಬ ಪೇದೆ ಕೊಂದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಆರೋಪ ಎದುರಿಸುತ್ತಿದ್ದ ಮತ್ತೊಬ್ಬ ಪೇದೆಯನ್ನು ವಜಾಗೊಳಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ [ರಾಬಿನ್ ಗೌತಮ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಅರ್ಜಿದಾರರಾದ ರಾಬಿನ್ ಗೌತಮ್ ಆಕ್ಷೇಪಾರ್ಹ ಕಾಮೆಂಟ್ ಪೋಸ್ಟ್ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ. . ಹೀಗಾಗಿ, ಆರೋಪಪಟ್ಟಿಯಲ್ಲಿ ಅವರ ವಿರುದ್ಧ ಉಲ್ಲೇಖಿಸಲಾದ ಆರೋಪಗಳಿಂದ ದೋಷಮುಕ್ತಗೊಳಿಸಲು ಅವರು ಅರ್ಹರು ಎಂದು ನ್ಯಾಯಮೂರ್ತಿ ಸಿ ಹರಿಶಂಕರ್ ಮತ್ತು ನ್ಯಾಯಮೂರ್ತಿ ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ.
ಶಿಸ್ತು ಪ್ರಾಧಿಕಾರ ಅವರ ಹೇಳಿಕೆಯನ್ನು ನಿರ್ಣಾಯಕವಾಗಿ ಸಾಬೀತುಪಡಿಸಲಾಗದು ಎನ್ನುತ್ತದೆ. ಆದ್ದರಿಂದ ನಾವು ಆರೋಪಪಟ್ಟಿಯಲ್ಲಿ ಮಾಡಲಾದ ಆರೋಪಗಳನ್ನು ಮೂಲದಿಂದಲೇ ರದ್ದುಪಡಿಸುತ್ತಿದ್ದೇವೆ. ಸೇವೆಯಿಂದ ವಜಾಗೊಳಿಸಿದ ದಿನದಿಂದಲೇ ಅರ್ಜಿದಾರರು ಸೇವೆಗೆ ಮರುನೇಮಕಗೊಳ್ಳಲು ಅರ್ಹರು ಎಂದು ನ್ಯಾಯಾಲಯ ಆದೇಶಿಸಿದೆ.
ಆಕ್ಷೇಪಾರ್ಹ ಹೇಳಿಕೆಯುಳ್ಳ ಫೇಸ್ಬುಕ್ ಖಾತೆ ಗೌತಮ್ಗೆ ಸೇರಿದ್ದು ಎಂದು ದೃಢಪಟ್ಟಿದ್ದರೆ, ಅವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
2018 ರಲ್ಲಿ, ಮೇಘಾಲಯದಲ್ಲಿ ಚುನಾವಣಾ ಕರ್ತವ್ಯದ ಸಮಯದಲ್ಲಿ ಆರ್ಪಿಎಫ್ ಸಹಾಯಕ ಕಮಾಂಡೆಂಟ್ ಮುಖೇಶ್ ಸಿ ತ್ಯಾಗಿ ಅವರನ್ನು ಕಾನ್ಸ್ಟೆಬಲ್ ಅರ್ಜುನ್ ದೇಶ್ವಾಲ್ ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಹತ್ಯೆಯ ನಂತರ, ಅರ್ಜಿದಾರ ಗೌತಮ್ ಅವರ ಫೇಸ್ಬುಕ್ ಹೇಳಿಕೆಗೆ ಸಂಬಂಧಿಸಿದಂತೆ ಆರೋಪ ನಿಗದಿಗೊಳಿಸಲಾಗಿತ್ತು. ನಂತರ ತನಿಖಾಧಿಕಾರಿ ಅವರನ್ನು ತಪ್ಪಿತಸ್ಥರು ಎಂದಿದ್ದರು. ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಸೇವೆಯಿಂದ ತಮ್ಮನ್ನು ವಜಾಗೊಳಿಸಿದ್ದನ್ನು ಗೌತಮ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ದಾಖಲೆಗಳನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣವನ್ನು ನಿರ್ಧರಿಸುವ ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳು ಸಂಪೂರ್ಣವಾಗಿ ಅನ್ವಯಿಸಿಲ್ಲ ಎಂದಿತು.
ಗೌತಮ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವ ಮೊದಲು ಡಿಐಜಿ ದಾಖಲೆಗಳನ್ನು ಪರಿಶೀಲಿಸಿರಲಿಲ್ಲ, ಆದರೆ ಅವರು ಹಾಗೆ ಮಾಡಿದ್ದಾಗಿ ಹೇಳಿಕೊಂಡಿದ್ದರು ಎಂದು ನ್ಯಾಯಾಲಯ ತಿಳಿಸಿದೆ.
ಫೇಸ್ಬುಕ್ ಖಾತೆ ಗೌತಮ್ಗೆ ಸೇರಿದ್ದು ಎಂದು ಸಾಬೀತುಪಡಿಸಲು ಪುರಾವೆಗಳ ಕೊರತೆ ಇದೆ ಎಂಬುದರ ಬಗ್ಗೆ ಮಾಹಿತಿ ಅಧಿಕಾರಿ ಮತ್ತು ಡಿಎ ನಡುವೆ ಸಹಮತವಿತ್ತು, ಆದ್ದರಿಂದ ಆರೋಪ ಪಟ್ಟಿಯಲ್ಲಿ ಅವರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲದ ಕಾರಣ ವಿಷಯ ಅಲ್ಲಿಗೆ ಮುಗಿಯಬೇಕಿತ್ತು ಎಂದು ನ್ಯಾಯಾಲಯ ತೀರ್ಮಾನಿಸಿತು.
ಹೀಗಾಗಿ, ಮನವಿ ಪುರಸ್ಕರಿಸಿದ ನ್ಯಾಯಾಲಯ ಗೌತಮ್ ಸೇವೆಯಲ್ಲಿ ಮುಂದುವರಿಯಲು ಅರು ಅವರನ್ನು ಎಂದಿಗೂ ಸೇವೆಯಿಂದ ತೆಗೆದುಹಾಕಲಾಗಿಲ್ಲ ಎಂಬಂತೆ ಹುದ್ದೆಯನ್ನು ಮರಳಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತು.
[ತೀರ್ಪಿನ ಪ್ರತಿ]