ನಟ ಸುಶಾಂತ್ ಸಿಂಗ್ ರಜಪೂತ್ ಕುರಿತ ಸಿನಿಮಾ ಪ್ರಸಾರ ತಡೆಗೆ ದೆಹಲಿ ಹೈಕೋರ್ಟ್ ನಕಾರ

'ನ್ಯಾಯ್: ದಿ ಜಸ್ಟೀಸ್' ಎಂಬ ರಜಪೂತ್ ಕುರಿತಾದ ಚಿತ್ರದ ನಿರಂತರ ಪ್ರಸಾರದ ವಿರುದ್ಧ ರಜಪೂತ್ ಅವರ ತಂದೆ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.
Sushant Singh Rajput and Delhi HC
Sushant Singh Rajput and Delhi HC

ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್  ಅವರ ಜೀವನ ಆಧಾರಿತ 'ನ್ಯಾಯ್: ದಿ ಜಸ್ಟೀಸ್' ಚಿತ್ರ ಪ್ರಸಾರದ ವಿರುದ್ಧ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. [ಕೃಷ್ಣ ಕಿಶೋರ್ ಸಿಂಗ್ ಮತ್ತು ಸರಳಾ ಎ ಸರೋಗಿ ಇನ್ನಿತರರ ನಡುವಣ ಪ್ರಕರಣ].

ಅವರು ಸಾವನ್ನಪ್ಪುವುದರೊಂದಿಗೆ ಅವರ ವ್ಯಕ್ತಿತ್ವದ ಹಕ್ಕು, ಖಾಸಗಿತನದ ಹಾಗೂ ಪ್ರಚಾರದ ಹಕ್ಕುಗಳು ನಶಿಸಿಹೋಗಿವೆ. ಅವರ ತಂದೆ ಈ ಹಕ್ಕುಗಳನ್ನು ಪ್ರತಿಪಾದಿಸಲು ಅವು ಅನುವಂಶಿಕವಲ್ಲ ಎಂದು ನ್ಯಾ. ಸಿ ಹರಿ ಶಂಕರ್‌ ಹೇಳಿದ್ದಾರೆ.

ಆದ್ದರಿಂದ, ಲಪಲಾಪ್ ಒರಿಜಿನಲ್ ಎಂಬ ಓವರ್-ದಿ-ಟಾಪ್ (ಒಟಿಟಿ) ವೇದಿಕೆಯಲ್ಲಿ ಚಲನಚಿತ್ರದ ನಿರಂತರ ಪ್ರಸಾರಕ್ಕೆ ತಡೆ ಕೋರಿ ರಜಪೂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಸಿನಿಮಾ ಜೂನ್ 2021ರಲ್ಲಿ ಬಿಡುಗಡೆಯಾಗಿತ್ತು.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಸಿನಿಮಾದಲ್ಲಿ ಪ್ರದರ್ಶಿಸಲಾಗಿರುವ ಮಾಹಿತಿ ಸಂಪೂರ್ಣವಾಗಿ ಮಾಧ್ಯಮದಲ್ಲಿ ದೊರೆತ ವಸ್ತುವಿಷಯಗಳಿಂದ ಪಡೆಯಲಾಗಿದೆ. ಹೀಗಾಗಿ ಇದು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನೇ ನಿರೂಪಿಸಿದೆ.

  • ಚಲನಚಿತ್ರ ಈಗಾಗಲೇ ಬಿಡುಗಡೆಯಾಗಿರುವಾಗ, ಸಾವಿರಾರು ಜನರು ಇದನ್ನು ವೀಕ್ಷಿಸಿರುವಾಗ ಅದರ ಪ್ರಸಾರ ನಿಲ್ಲಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ.

  • ಸಂವಿಧಾನದ 19(2) ನೇ ವಿಧಿಯನ್ನು ಚಿತ್ರ ಉಲ್ಲಂಘಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾದ  ಪ್ರಸಾರ ತಡೆದರೆ ಸಂವಿಧಾನದ 19 (1) (ಎ) ಅಡಿಯಲ್ಲಿ ಪ್ರತಿವಾದಿಗಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ.

  • ಖ್ಯಾತನಾಮರಿಗೆ ಮಾತ್ರ ಇರಬೇಕು ಎನ್ನುವ ಸೆಲಬ್ರಿಟಿ ಹಕ್ಕು ಪರಿಕಲ್ಪನೆ ಕಾನೂನುಬದ್ಧವಾಗಿ ಒಪ್ಪುವಂಥದ್ದಲ್ಲ. ಎಲ್ಲ ವ್ಯಕ್ತಿಗಳಿಗೂ ಸಮಾನತೆಯನ್ನು ಪ್ರತಿಪಾದಿಸುವ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಇದಕ್ಕೆ ಆಸ್ಪದವಿಲ್ಲ.

  • ಖ್ಯಾತನಾಮರು ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದು ಅಷ್ಟೇ ಬೇಗನೆ ಸಾರ್ವಜನಿಕರ ಕಣ್ಣಿನಿಂದ ಮರೆಯಾಗುತ್ತಾರೆ.

  • ತಾತ್ಕಾಲಿಕವಾಗಿ ಸೆಲೆಬ್ರಿಟಿಗಳಿಗೆ ವಿಶೇಷ ಸ್ಥಾನಮಾನದಂತಹ ಕಾನೂನುಬದ್ಧ ಹಕ್ಕನ್ನು ಒದಗಿಸುವುದು ವಿರೋಧಾಭಾಸದ ಕಾರ್ಯವಾಗುತ್ತದೆ.

Related Stories

No stories found.
Kannada Bar & Bench
kannada.barandbench.com