ಜಾರಿ ನಿರ್ದೇಶನಾಲಯ ಹೂಡಿದ್ದ ಪ್ರಕರಣ ರದ್ದತಿ: ಪ. ಬಂಗಾಳ ಸಚಿವ ಘಟಕ್ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಆದರೆ ಇ ಡಿ ಕನಿಷ್ಠ 24 ಗಂಟೆಗಳ ಮೊದಲೇ ಘಟಕ್ ಅವರಿಗೆ ನೋಟಿಸ್ ನೀಡಬೇಕು ಮತ್ತು ದೆಹಲಿ ಬದಲಿಗೆ ಕೋಲ್ಕತ್ತಾದಲ್ಲಿಯೇ ಅವರ ವಿಚಾರಣೆ ನಡೆಸಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿದೆ.
Moloy Ghatak
Moloy Ghatak
Published on

ಕಲ್ಲಿದ್ದಲು ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ವಿಚಾರಣೆಯನ್ನು ಮತ್ತು ಸಮನ್ಸನ್ನು ರದ್ದುಗೊಳಿಸುವಂತೆ ಕೋರಿ ಪಶ್ಚಿಮ ಬಂಗಾಳದ ಕಾನೂನು ಸಚಿವ ಮೊಲೊಯ್ ಘಟಕ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ [ಮೊಲೊಯ್ ಘಟಕ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್‌ 50 ರ ಅಡಿಯಲ್ಲಿ ನೀಡಲಾದ ಸನಬ್ಸ್‌ ರದ್ದುಗೊಳಿಸುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದ್ದಾರೆ.

ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್‌ ) ರದ್ದುಗೊಳಿಸುವಂತೆ ಕೋರಿರುವ ಪ್ರಾರ್ಥನೆ ಇನ್ನೂ ಅಕಾಲಿಕವಾಗಿದ್ದು ಘಟಕ್‌ ಪಾತ್ರವನ್ನು ಇಸಿಐಆರ್‌ನಲ್ಲಿ ಇನ್ನೂ ಗುರುತಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read
ಸ್ತ್ರೀವಾದಿ ಬೇರುಗಳನ್ನು ಮರೆತ ಪ. ಬಂಗಾಳ, ಪ್ರಗತಿ ಮತ್ತು ಆಡಳಿತದಲ್ಲಿ ಹಿಂದುಳಿದಿದೆ: ಕಲ್ಕತ್ತಾ ಹೈಕೋರ್ಟ್ ಅಸಮಾಧಾನ

ಪಿಎಂಎಲ್‌ಎಯ ಸೆಕ್ಷನ್ 50 ರ ಅಡಿಯಲ್ಲಿ ಸಮನ್ಸ್‌ ನೀಡಿದ ಮಾತ್ರಕ್ಕೆ ಅದು ಸಂವಿಧಾನದ 20 (3) ವಿಧಿಯಡಿ ಒದಗಿಸುವ ರಕ್ಷಣೆಗೆ ಧಕ್ಕೆ ತರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದ 20 (3) ವಿಧಿ ಪ್ರಕಾರ ಯಾವುದೇ ಅಪರಾಧದ ಆರೋಪಿಯನ್ನು ತನ್ನ ವಿರುದ್ಧ ಸಾಕ್ಷಿಯಾಗುವಂತೆ ಒತ್ತಾಯಿಸುವಂತಿಲ್ಲ.

ಘಟಕ್‌ ಅವರು ಆರೋಪಿಯೋ ಅಥವಾ ಸಾಕ್ಷಿಯೋ ಎಂದು ಇನ್ನೂ ತಿಳಿಯದಿರುವುದರಿಂದ 20 (3) ವಿಧಿಯಡಿ ಅವರು ರಕ್ಷಣೆ ಕೋರುವುದು ವ್ಯತಿರಿಕ್ತವಾಗುತ್ತದೆ ಎಂದು ನ್ಯಾಯಾಲಯ ನುಡಿದಿದೆ.

ಆದರೆ ಇ ಡಿ ಕನಿಷ್ಠ 24 ಗಂಟೆಗಳ ಮೊದಲೇ ಘಟಕ್‌ ಅವರಿಗೆ ನೋಟಿಸ್‌ ನೀಡಬೇಕು ಮತ್ತು ದೆಹಲಿ ಬದಲಿಗೆ ಕೋಲ್ಕತ್ತಾದಲ್ಲಿಯೇ  ಅವರ ವಿಚಾರಣೆ  ನಡೆಸಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Moloy_Ghatak_v_Directorate_of_Enforcement
Preview
Kannada Bar & Bench
kannada.barandbench.com