Tahir Hussain, Karkardooma courts
ಸುದ್ದಿಗಳು
[ದೆಹಲಿ ಗಲಭೆ] ಆಪ್ ಮಾಜಿ ನಗರಸಭೆ ಸದಸ್ಯ ತಾಹಿರ್ ಪಿತೂರಿದಾರನಷ್ಟೇ ಅಲ್ಲ ಸಕ್ರಿಯ ಗಲಭೆಕೋರ: ದೆಹಲಿ ನ್ಯಾಯಾಲಯ
ಹಿಂಸಾಚಾರದ ಸಂದರ್ಭದಲ್ಲಿ ತಾಹಿರ್ ಹುಸೇನ್ ಮನೆಯನ್ನು ಕಲ್ಲು ತೂರಾಟ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ಇಡಲು ಬಳಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಎರಡು ವರ್ಷಗಳ ಹಿಂದಿನ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ನಗರಸಭೆ ಸದಸ್ಯ ತಾಹೀರ್ ಹುಸೇನ್ ಮತ್ತು ಐವರು ಇತರರ ವಿರುದ್ಧ ಶುಕ್ರವಾರ ಕ್ರಿಮಿನಲ್ ಪಿತೂರಿ, ಗಲಭೆ ಸೃಷ್ಟಿ ಸೇರಿದಂತೆ ವಿವಿಧ ಆರೋಪಗಳನ್ನು ನಿಗದಿ ಮಾಡಲಾಗಿದೆ.
ಆರೋಪಿ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿರೇಂದರ್ ಭಟ್ ಅವರು ಹುಸೇನ್ ಪಿತೂರಿದಾರರಷ್ಟೇ ಅಲ್ಲ, ಸಕ್ರಿಯ ಗಲಭೆಕೋರ ಎಂದು ಆದೇಶದಲ್ಲಿ ಹೇಳಿದ್ದಾರೆ.
“ಹುಸೇನ್ ಅವರು ಮೂಕ ಪ್ರೇಕ್ಷಕರಾಗಿರಲಿಲ್ಲ. ಅವರು ಗಲಭೆಗಳಲ್ಲಿ ಸಕ್ರಿಯ ಪಾತ್ರವಹಿಸುತ್ತಿದ್ದರು. ಇತರೆ ಸಮುದಾಯದ ಜನರಿಗೆ ಪಾಠ ಕಲಿಸಲು ಜನರನ್ನು ಕಾನೂನುಬಾಹಿರವಾಗಿ ಒಂದು ಕಡೆ ಸೇರಿಸಲು ಪ್ರಚೋದಿಸುತ್ತಿದ್ದರು” ಎಂದು ನ್ಯಾಯಾಧೀಶರು 30 ಪುಟಗಳ ಆದೇಶದಲ್ಲಿ ಹೇಳಿದ್ದಾರೆ.
ಹುಸೇನ್ ಮನೆಯನ್ನು ಹಿಂಸಾಚಾರದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ಇಡಲು ಬಳಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿದೆ.