ಡಾ. ಅಂಬೇಡ್ಕರ್‌ ಫೋಟೊ ವಿವಾದ: ವಿಧಾನ ಪರಿಷತ್‌ ಉಪ ಕಾರ್ಯದರ್ಶಿ ಅಮಾನತು ಆದೇಶ ರದ್ದುಪಡಿಸಿದ ಹೈಕೋರ್ಟ್‌

ಜಲಜಾ ಅವರ ಮೇಲಿನ ಆರೋಪಗಳನ್ನು ನೋಡಿದರೆ ಸಾಕ್ಷಿಗಳನ್ನು ತಿರುಚುತ್ತಾರೆ ಎನಿಸುವುದಿಲ್ಲ. ಜಲಜಾ ತಪ್ಪೆಸಿಗಿರುವ ವಿಚಾರ ಇಲಾಖಾ ವಿಚಾರಣೆಯಿಂದ ಹೊರಬರಬೇಕು. ಮೇಲ್ನೋಟಕ್ಕೆ ಅಮಾನತಿಗೆ ಬಲವಾದ ಸಾಕ್ಷ್ಯಾಧಾರಗಳು ಕಾಣುತ್ತಿಲ್ಲ ಎಂದಿರುವ ನ್ಯಾಯಾಲಯ.
Dr. B R Ambedkar and Karnataka HC
Dr. B R Ambedkar and Karnataka HC
Published on

ಸಂವಿಧಾನದ ದಿನದ ಅಂಗವಾಗಿ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ 2024ರ ನವೆಂಬರ್ 26ರಂದು ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಪರಿಷತ್ತಿನ ಉಪ ಕಾರ್ಯದರ್ಶಿ ಕೆ ಜೆ ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಕೆ ಜೆ ಜಲಜಾಕ್ಷಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ವಾದ-ಪ್ರತಿವಾದ ಆಲಿಸಿದ ಪೀಠವು “ಜಲಜಾ ಅವರ ಮೇಲಿನ ಆರೋಪಗಳನ್ನು ನೋಡಿದರೆ ಸಾಕ್ಷಿಗಳನ್ನು ತಿರುಚುತ್ತಾರೆ ಎನಿಸುವುದಿಲ್ಲ. ಜಲಜಾ ಅವರ ತಪ್ಪೆಸಿಗಿರುವ ವಿಚಾರ ಇಲಾಖಾ ವಿಚಾರಣೆಯಿಂದ ಹೊರಬರಬೇಕು. ಮೇಲ್ನೋಟಕ್ಕೆ ಅಮಾನತಿಗೆ ಬಲವಾದ ಸಾಕ್ಷ್ಯಾಧಾರಗಳು ಕಾಣುತ್ತಿಲ್ಲ” ಎಂದು ಹೇಳಿದೆ.

Also Read
ಡಾ. ಅಂಬೇಡ್ಕರ್‌ ಫೋಟೊ ವಿವಾದ: ವಿಧಾನ ಪರಿಷತ್‌ ಉಪ ಕಾರ್ಯದರ್ಶಿ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ

ಅರ್ಜಿದಾರರ ಪರ ವಕೀಲರು “ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಅಂಬೇಡ್ಕರ್ ಅವರ ಫೋಟೊ ಇರಿಸುವ ಬಗ್ಗೆ ನಿರ್ದಿಷ್ಟವಾಗಿ ಹೇಳಿರಲಿಲ್ಲ. ಶಿಷ್ಠಾಚಾರ ಉಲ್ಲಂಘನೆ, ಕರ್ತವ್ಯ ಲೋಪ ಆಗಿರುವ ಬಗ್ಗೆ ನೀಡಲಾಗಿದ್ದ ನೋಟಿಸ್‌ಗೆ ಅರ್ಜಿದಾರರು ವಿವರವಾಗಿ ಉತ್ತರಿಸಿದ್ದಾರೆ. ತಾನು ಕಾರ್ಯಕ್ರಮದ ಆಯೋಜಕಿ ಅಲ್ಲ, ನಾನು ಹೊಣೆಗಾರಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಭಾಪತಿಯವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಿದ್ದರು. ಆದರೆ, ಕೆಲವು ಸಂಘಟನೆಗಳು ಜುಲೈ 3ರಂದು ದೂರು ನೀಡಿ ಒತ್ತಡ ತಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಒಂದು ವರ್ಷದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಅದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಆದ್ದರಿಂದ, ಅಮಾನತು ಆದೇಶ ರದ್ದುಪಡಿಸಬೇಕು” ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಪರ ವಕೀಲರು “ಸಂವಿಧಾನ ದಿನದಂದು ಶಿಷ್ಠಾಚಾರ ಪಾಲಿಸುವ ಕುರಿತು ಸರ್ಕಾರವು ಸುತ್ತೋಲೆ ಹೊರಡಿಸಿದೆ. ಇದನ್ನು ಪಾಲಿಸದೇ ಇರುವುದರಿಂದ ಜಲಜಾ ಅವರನ್ನು ಅಮಾನತು ಮಾಡಲಾಗಿದೆ” ಎಂದು ವಾದಿಸಿದ್ದರು.

Kannada Bar & Bench
kannada.barandbench.com