ಆನ್ಲೈನ್ ಮೂಲಕ ಹಣಕಾಸು ವಂಚನೆ ಕುರಿತಂತೆ ಬ್ಯಾಂಕ್ ಖಾತೆ ಸ್ಥಗಿತ (ಫ್ರೀಜಿಂಗ್) ಮತ್ತು ಹಣ ಮರುಜಮೆ ಮಾಡುವುದು ಸೇರಿದಂತೆ ಸೈಬರ್ ಅಪರಾಧ ಪ್ರಕರಣಗಳನ್ನು ವ್ಯವಹರಿಸಲು ಕರಡು ಪ್ರಮಾಣೀಕೃತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.
ಸೈಬರ್ ಅಪರಾಧಗಳ ಸಂಬಂಧ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮುನ್ನ ಖಾತೆದಾರರಿಗೆ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆ ಕಡ್ಡಾಯ ಪಾಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಕೇಂದ್ರ ಸರ್ಕಾರದ ಪರ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್, ಸಿಟಿಜನ್ ಫೈನಾನ್ಸಿಯಲ್ ಫ್ರಾಡ್ ರಿಪೋರ್ಟಿಂಗ್ (ಸಿಎಫ್ಸಿಎಫ್ಆರ್), ಮ್ಯಾನೇಜ್ಮೆಂಟ್ ಸಿಸ್ಟಮ್ ಆ್ಯಂಡ್ ಪ್ರೊಟೋಕಾಲ್ಸ್ಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಕರಡು ಎಸ್ಓಪಿಯನ್ನು ಪೀಠಕ್ಕೆ ಸಲ್ಲಿಸಿದರು.
ನಂತರ, ಈ ಎಸ್ಒಪಿಯನ್ನು ಭಾಗೀದಾರರೊಂದಿಗೆ ಹಂಚಿಕೊಳ್ಳಲಾಗಿದೆ. ಸಂಬಂಧಪಟ್ಟವರಿಂದ ಅವಶ್ಯ ಅಭಿಪ್ರಾಯಗಳನ್ನು ಸ್ವೀಕರಿಸಿ ಅಳವಡಿಸಿದ ಬಳಿಕ ಎಸ್ಓಪಿಯನ್ನು ಅಂತಿಮಗೊಳಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.
ಈ ಹೇಳಿಕೆ ದಾಖಲಿಸಿಕೊಂಡ ಪೀಠವು ಸೈಬರ್ ಅಪರಾಧ ನಡೆದ ನಂತರದ ಮೊದಲ ಒಂದು ಗಂಟೆಯ ಅವಧಿಯು ಗೋಲ್ಡನ್ ಅವರ್ ಆಗಿರುತ್ತದೆ. ಆಗ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಅಧಿಕಾರಿಗಳಿಂದ ನಿರೀಕ್ಷೆ ಮಾಡಲಾಗದು. ಕ್ರೆಡಿಟ್ ಕಾರ್ಡ್ ದುರುಪಯೋಗವಾಗಿ ಹಣ ವರ್ಗಾವಣೆಯಾದರೆ, ಹಣ/ಖಾತೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಅಸಹಾಯಕ ವ್ಯಕ್ತಿಗಳ, ವಿಶೇಷವಾಗಿ ಹಿರಿಯ ನಾಗರಿಕರ ಖಾತೆಗಳಿಂದ ಎಷ್ಟು ಹಣ ಹೋಗಿದೆ ಎಂಬುದನ್ನು ಗಮನಿಸಿ. ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡ ಜನರ ದುಃಸ್ಥಿತಿ ನೋಡಿ ಎಂದು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಮಾರ್ಮಿಕವಾಗಿ ನುಡಿಯಿತು.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡ ನಂತರ ಕಾನೂನು ಅಡಿಯಲ್ಲಿ ಸೂಕ್ತ ಪರಿಹಾರ ಕೋರಲು ಸ್ವತಂತ್ರರಿದ್ದಾರೆ. ಅದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಸ್ ಸುದರ್ಶನ್ ಅವರು “ಸೈಬರ್ ಅಪರಾಧಗಳ ಸಂಬಂಧಿಸಿದಂತೆ 2012ರಲ್ಲಿ 4.6 ಲಕ್ಷ ಮತ್ತು 2024ರಲ್ಲಿ 22.6 ಲಕ್ಷ ದೂರುಗಳು ದಾಖಲಾಗಿವೆ. ಸೈಬರ್ ಅಪರಾಧಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇಂತಹ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತಹ ಮಹತ್ವದ ಕ್ರಮ ಜರುಗಿಸುವ ಮುನ್ನ ಖಾತೆದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವುದು ನ್ಯಾಯಸಮ್ಮತವಾದ ಕ್ರಮ. ಆ ಕುರಿತಂತೆ ಸೂಕ್ತ ಮಾರ್ಗಸೂಚಿ ರಚನೆ ಮಾಡಬೇಕಿದೆ” ಎಂದರು.
ಅದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಷೋಕಾಸ್ ನೋಟಿಸ್ ನೀಡುವ ವಿಚಾರದಲ್ಲಿ ಅಧಿಕಾರಿಗಳು ಸಮಯ ಕಳೆಯುವುದಕ್ಕೆ ಹೇಳಿದರೆ, ವಂಚನೆಗೆ ಒಳಗಾದ ಅಪರಾಧದ ಹಣವನ್ನು ಮರುಪಡೆಯಲು ಅಡ್ಡಿಯಾಗಬಹುದು ಎಂದು ಪೀಠದ ಗಮನಕ್ಕೆ ತಂದರು.