ಹೇಮಂತ್ ಸೊರೇನ್ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಇ ಡಿ

ಸೊರೇನ್‌ ವಿರುದ್ಧ ಆಪಾದಿಸಲಾಗಿರುವ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಅವರು ತಪ್ಪಿತಸ್ಥರಲ್ಲ ಎಂದು "ನಂಬಲು ಕಾರಣವಿದೆ" ಎಂದು ತೀರ್ಮಾನಿಸಿದ್ದ ಹೈಕೋರ್ಟ್ ಜೂನ್ 28ರಂದು ಅವರಿಗೆ ಜಾಮೀನು ನೀಡಿತ್ತು.
Hemant Soren, ED, SC
Hemant Soren, ED, SC Hemant Soren (Facebook)
Published on

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೇನ್ ಅವರಿಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ರಾಂಚಿಯ ಬರಗೈನ್ ಸರ್ಕಲ್‌ನಲ್ಲಿ 8.5 ಎಕರೆ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಕೃತ್ಯದಲ್ಲಿ ಸೊರೇನ್‌ ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಇ ಡಿ ಆರೋಪಿಸಿತ್ತು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ಗೆ ಜಾಮೀನು

ಆದರೆ, ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಅವರು ತಪ್ಪಿತಸ್ಥರಲ್ಲ ಎಂದು  "ನಂಬಲು ಕಾರಣವಿದೆ" ಎಂಬುದಾಗಿ ತೀರ್ಮಾನಿಸಿದ್ದ ಹೈಕೋರ್ಟ್ ಜೂನ್ 28ರಂದು ಅವರಿಗೆ ಜಾಮೀನು ನೀಡಿತ್ತು.

ದಾಖಲೆಗಳನ್ನು ನಕಲಿ ಮತ್ತು ದುರ್ಬಳಕೆ ಮಾಡುವ ಮೂಲಕ ಅಕ್ರಮವಾಗಿ ಭೂ ಸ್ವಾಧೀನಪಡಿಸಿಕೊಳ್ಳುವುದನ್ನು ತನ್ನ ಸಕಾಲಿಕ ಕ್ರಮ ತಡೆದಿದೆ ಎಂಬ ಜಾರಿ ನಿರ್ದೇಶನಾಲಯದ ಹೇಳಿಕೆಯು ಈಗಾಗಲೇ ಅರ್ಜಿದಾರರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಿಗಣಿಸಿದಾಗ ಅಸ್ಪಷ್ಟ ಹೇಳಿಕೆಯಂತೆ ತೋರುತ್ತದೆ ಎಂಬುದಾಗಿ  ನ್ಯಾಯಾಲಯ ನುಡಿದಿತ್ತು.

ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಸೊರೇನ್‌ ಅವರ ನೇರ ಪಾಲ್ಗೊಳ್ಳುವಿಕೆಯ ಯಾವುದೇ ಪುರಾವೆಗಳನ್ನು ರಿಜಿಸ್ಟರ್‌ಗಳು ಅಥವಾ ಕಂದಾಯ ದಾಖಲೆಗಳು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಇದಲ್ಲದೆ, ಈ ಅವಧಿಯಲ್ಲಿ ಸೊರೇನ್‌ ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿಲ್ಲದಿದ್ದಾಗಲೂ  ಕೂಡ, ಜಮೀನು ಸ್ವಾಧೀನದಿಂದ ನೊಂದವರಾರೂ ದೂರು ದಾಖಲಿಸಿಲ್ಲ ಎಂಬುದನ್ನು ಎಂದು ಹೈಕೋರ್ಟ್ ಗಮನಿಸಿತ್ತು.

Also Read
ತನಿಖೆ ತಡೆಯಲೆಂದು ಅಧಿಕಾರಿಗಳ ವಿರುದ್ಧ ಹೇಮಂತ್‌ ಸೊರೇನ್ ಸುಳ್ಳು ಮೊಕದ್ದಮೆ: ಸುಪ್ರೀಂ ಕೋರ್ಟ್‌ನಲ್ಲಿ ಇ ಡಿ ಆರೋಪ

ಆದ್ದರಿಂದ, ಮನಿ ಲಾಂಡರಿಂಗ್ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 45 ರ ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ಅಗತ್ಯವಾದ ಅವಳಿ ಷರತ್ತುಗಳು ಪ್ರಸ್ತುತ ಪ್ರಕರಣದಲ್ಲಿ ಸಾಕಷ್ಟು ಇವೆ ಎಂದು ಅದು ನಿರ್ಧರಿಸಿತ್ತು.

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೊರೇನ್‌ ಅವರನ್ನು ಬಂಧಿಸಿತ್ತು. ಇದರಿಂದಾಗಿ ಜನವರಿ 31 ರಂದು ಸೊರೇನ್‌ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಜೈಲಿನಲ್ಲಿದ್ದಾಗ ಜೆಎಂಎಂ ನಾಯಕ ಚಂಪೈ ಸೊರೇನ್‌ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಹೇಮಂತ್‌ ಜುಲೈ 4 ರಂದು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Kannada Bar & Bench
kannada.barandbench.com