[ದೆಹಲಿ ಅಬಕಾರಿ ನೀತಿ ಹಗರಣ] ಇ ಡಿ ಜನರನ್ನು ಸುದೀರ್ಘವಾಗಿ ವಿಚಾರಣಾಪೂರ್ವ ಬಂಧನದಲ್ಲಿಡಲು ಸಾಧ್ಯವಿಲ್ಲ: ಸುಪ್ರೀಂ

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್‌ ಭಟ್ಟಿ ಅವರ ಪೀಠವು ಯಾವುದೇ ಆರೋಪಗಳನ್ನು ನಿರೂಪಿಸದೆ ಯಾರನ್ನಾದರೂ 13 ತಿಂಗಳ ಕಾಲ ಜೈಲಿನಲ್ಲಿರಿಸುವುದು ಜಾರಿ ನಿರ್ದೇಶನಾಲಯದ ಕಡೆಯಿಂದ ಸೂಕ್ತವಲ್ಲ ಎಂದು ಹೇಳಿದೆ.
ED, Supreme Court
ED, Supreme Court

ದೆಹಲಿ ಅಬಕಾರಿ ನೀತಿ ಹಗರಣದಿಂದ ಉದ್ಭವಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರ್ನೋಡ್ ರಿಕಾರ್ಡ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಬಿನೋಯ್ ಬಾಬು ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ (ಬಿನೋಯ್ ಬಾಬು ವರ್ಸಸ್ ಜಾರಿ ನಿರ್ದೇಶನಾಲಯ).

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್‌ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಜಾರಿ ನಿರ್ದೇಶನಾಲಯ (ಇಡಿ) ಯಾವುದೇ ಆರೋಪ ನಿಗದಿಪಡಿಸದೇ ವ್ಯಕ್ತಿಯೊಬ್ಬರನ್ನು 13 ತಿಂಗಳ ಕಾಲ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದು ಹೇಳಿದೆ.

"ಇದು ಸರಿಯಲ್ಲ. ನೀವು ಆರೋಪಿಯನ್ನು ಇಷ್ಟು ದಿನ ವಿಚಾರಣಾಪೂರ್ವ ಬಂಧನದಲ್ಲಿಡಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಆರೋಪಿಗಳನ್ನು ಕರೆತರಬೇಕಾಗಿದೆ" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಇದು ಸರಿಯಲ್ಲ. ನೀವು ಜನರನ್ನು ಇಷ್ಟು ದಿನ ವಿಚಾರಣೆ ಪೂರ್ವ ಬಂಧನದಲ್ಲಿಡಲು ಸಾಧ್ಯವಿಲ್ಲ.
ನ್ಯಾಯಮೂರ್ತಿ ಸಂಜೀವ್‌ ಖನ್ನಾ

ದೆಹಲಿ ಹೈಕೋರ್ಟ್ ಜುಲೈನಲ್ಲಿ ಬಾಬುಗೆ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಥಮ ಮಾಹಿತಿ ವರದಿಯಿಂದ (ಎಫ್ಐಆರ್) ಈ ಪ್ರಕರಣ ಉದ್ಭವಿಸಿದೆ. ಈ ಹಿಂದೆ ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು.

ದೆಹಲಿ ಸರ್ಕಾರದ ಅಧಿಕಾರಿಗಳು ಲಂಚಕ್ಕೆ ಬದಲಾಗಿ ಕೆಲವು ವ್ಯಾಪಾರಿಗಳಿಗೆ ಮದ್ಯದ ಪರವಾನಗಿ ನೀಡಲು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಬಕಾರಿ ನೀತಿಯನ್ನು ತಿರುಚಲಾಗಿದೆ ಮತ್ತು ಲಾಭಾಂಶವನ್ನು ಬದಲಾಯಿಸಲಾಗಿದೆ ಎಂಬುದು ಕೇಂದ್ರೀಯ ತನಿಖಾ ಸಂಸ್ಥೆಗಳ ಆರೋಪ. ಇದಕ್ಕೆ ಪ್ರತಿಯಾಗಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ವರದಿಯ ಆಧಾರದ ಮೇಲೆ ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ವಿ ಕೆ ಸಕ್ಸೇನಾ ಶಿಫಾರಸ್ಸು ಮಾಡಿದ ನಂತರ ಇಡಿ ಮತ್ತು ಸಿಬಿಐ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿವೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಗಮನಾರ್ಹ ಆರ್ಥಿಕ ಪರಿಣಾಮ ಉಂಟುಮಾಡುವಂತಹ ನಿರ್ಧಾರಕ್ಕೆ ಕಾರಣವಾಗಿದ್ದಾರೆ. ಲಂಚದ ಹಣವನ್ನು ಕಾನೂನುಬದ್ಧವಾಗಿಸಲು ಭಾಗಿಯಾಗಿದ್ದಾರೆ ಎಂದು ಕೇಂದ್ರೀಯ ತನಿಖಾ ಸಂಸ್ಥೆಗಳು ಆರೋಪಿಸಿವೆ.

ಬಾಬು ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ , ಬಾಬು ಅವರು 13 ತಿಂಗಳು ಜೈಲಿನಲ್ಲಿದ್ದಾರೆ ಎಂದು ಹೇಳಿದರು. ಇದಲ್ಲದೆ, ಈ ಪ್ರಕರಣದಲ್ಲಿ ಅವರ ಪಾತ್ರವು ಸಿಸೋಡಿಯಾ ಅವರಿಗಿಂತ ಭಿನ್ನವಾಗಿದೆ, ಅವರ ಜಾಮೀನು ಅರ್ಜಿಯನ್ನು ಇತ್ತೀಚೆಗೆ ಪ್ರಸ್ತುತ ನ್ಯಾಯಪೀಠ ತಿರಸ್ಕರಿಸಿದೆ .

ಬಾಬು ವಾಸ್ತವವಾಗಿ ಕಿರಿಯ ಉದ್ಯೋಗಿಯಾಗಿದ್ದು, ಯಾವುದೇ ನೀತಿ ರೂಪಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ವಾದಿಸಿದರು.

Related Stories

No stories found.
Kannada Bar & Bench
kannada.barandbench.com