ನೌಕರರ ಪರಿಹಾರ ಕಾಯಿದೆ - 1923ರ ಅಡಿಯಲ್ಲಿ ನೌಕರ ಮೃತಪಟ್ಟ ದಿನದಿಂದಲೇ ಪರಿಹಾರ ನೀಡುವ ಮತ್ತು ಅದರ ಮೇಲೆ ಬಡ್ಡಿ ನೀಡುವ ಹೊಣೆಗಾರಿಕೆ ಇರುತ್ತದೆಯೇ ಹೊರತು ಆದೇಶ ನೀಡಿದ ದಿನದಿಂದಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ [ಶೋಭಾ ಮತ್ತು ವಿಠ್ಠಲ್ ರಾವ್ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಅಧ್ಯಕ್ಷರ ನಡುವಣ ಪ್ರಕರಣ].
ಕಾಯಿದೆಯ 4ಎ (1)ನೇ ಸೆಕ್ಷನ್ ಪ್ರಕಾರ, ಬಾಕಿ ಉಳಿಯುವ ದಿನದಿಂದಲೇ ಸೆಕ್ಷನ್ 4ರ ಅಡಿಯ ಪರಿಹಾರವನ್ನುಕೂಡಲೇ ಪಾವತಿಸಬೇಕು ಮತ್ತು ಕಾರ್ಮಿಕ ಮೃತಪಟ್ಟ ದಿನದಿಂದಲೇ ಅಂತಹ ಪರಿಹಾರಕ್ಕೆ ಸಂಬಂಧಿಸಿದ ಬಡ್ಡಿಯನ್ನು ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿತು.
ಹಾವು ಕಡಿತದಿಂದ ಸಾವನ್ನಪ್ಪಿದ ಕಾರ್ಮಿಕನ ವಾರಸುದಾರರಿಗೆ ಪರಿಹಾರ ನೀಡಲು ಗುತ್ತಿಗೆದಾರ ನಿರಾಕರಿಸಿದ್ದ. ಮರಣ ಹೊಂದಿದಾತ ಗುತ್ತಿಗೆ ಕಾರ್ಮಿಕ ಎಂಬುದು ಅದರ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ಬೀಡ್ನಲ್ಲಿರುವ ಕಾರ್ಮಿಕ ಪರಿಹಾರ ಆಯುಕ್ತರನ್ನು ಸಂಪರ್ಕಿಸಿ ₹ 5 ಲಕ್ಷ ಪರಿಹಾರ ಕೋರಿದರು. ಮನವಿಯನ್ನು ಒಪ್ಪಿದ ಆಯುಕ್ತರು ವಾರ್ಷಿಕ ಶೇ 12ರ ಬಡ್ಡಿದರದೊಂದಿಗೆ ಪರಿಹಾರ ಒಗಿಸಲು ಸೂಚಿಸಿದರು. ಅಲ್ಲದೆ ಕಾಯಿದೆಯ ಸೆಕ್ಷನ್ 4ಎ (3) (ಬಿ) ಅಡಿ ಪರಿಹಾರ ಮೊತ್ತದ ಮೇಲೆ ಶೇ 50ರಷ್ಟು ದಂಡವನ್ನೂ ವಿಧಿಸಿದರು.
ಆಯುಕ್ತರ ಆದೇಶದಿಂದ ತೃಪ್ತರಾಗದ ಪ್ರತಿವಾದಿಗಳು ಬಾಂಬೆ ಹೈಕೋರ್ಟ್ಮೊರೆ ಹೋಗಿದ್ದರು. ಹೈಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿತಾದರೂ ದಂಡವನ್ನು ರದ್ದುಗೊಳಿಸಿ ಅವಘಡ ಸಂಭವಿಸಿದ ದಿನದ ಬದಲಿಗೆ ಆಯುಕ್ತರು ಆದೇಶ ನೀಡಿದ ಒಂದು ತಿಂಗಳ ನಂತರದಿಂದ ಬಡ್ಡಿ ಪಾವತಿಸುವಂತೆ ಸೂಚಿಸಿತು. ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಮೃತರ ವಾರಸುದಾರರು ಪ್ರಶ್ನಿಸಿದ್ದರು.
ಕಾಯಿದೆಯ ಸೆಕ್ಷನ್ 4 ಎ (1)ರ ಪ್ರಕಾರ ಮೃತರ ಮರಣದ ತಕ್ಷಣ ಪರಿಹಾರ ಪಾವತಿಸುವ ಹೊಣೆಗಾರಿಕೆ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮೃತರ ಮರಣದ ದಿನದಿಂದ ಬಡ್ಡಿ ಪಾವತಿಸಬೇಕಾಗುತ್ತದೆ ಎಂದ ಸುಪ್ರೀಂ ಕೋರ್ಟ್ "ಬಡ್ಡಿ ವಿಧಿಸುವ ನಿಯಮ ಸೆಕ್ಷನ್ 4ಎ (3) (ಎ) ಅಡಿಯಲ್ಲಿ ಇರುತ್ತದೆ ಮತ್ತು ದಂಡ ವಿಧಿಸುವ ನಿಯಮ ಸೆಕ್ಷನ್ 4ಎ (3) (ಬಿ) ಅಡಿಯಲ್ಲಿ ಬರುತ್ತದೆ" ಎಂಬುದನ್ನು ಗಮನಿಸಿತು. ಆ ಮೂಲಕ ಬಾಂಬೆ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿ ಮೃತರು ಸಾವನ್ನಪ್ಪಿದ ದಿನದಿಂದಲೇ ಪರಿಹಾರದ ಮೇಲಿನ ಬಡ್ಡಿ ಒದಗಿಸುವಂತೆ ಸೂಚಿಸಿತು.