ಇಷ್ಟದ ಉಡುಪು ವ್ಯಕ್ತಿ ಸ್ವಾತಂತ್ರ್ಯದ ಭಾಗ: ʼಪ್ರಚೋದನಕಾರಿ ಉಡುಗೆʼ ಹೇಳಿಕೆ ತೆಗೆದುಹಾಕುವಾಗ ಕೇರಳ ಹೈಕೋರ್ಟ್ ಅಭಿಮತ

ಸಾಮಾಜಿಕ ಹೋರಾಟಗಾರ ಸಿವಿಕ್ ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೋರಿಕ್ಕೋಡ್ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ಆದೇಶದಿಂದ ವಿವಾದಾತ್ಮಕ ಹೇಳಿಕೆ ತೆಗೆದುಹಾಕುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ ಉಚ್ಚ ನ್ಯಾಯಾಲಯ.
ಇಷ್ಟದ ಉಡುಪು ವ್ಯಕ್ತಿ ಸ್ವಾತಂತ್ರ್ಯದ ಭಾಗ: ʼಪ್ರಚೋದನಕಾರಿ ಉಡುಗೆʼ ಹೇಳಿಕೆ ತೆಗೆದುಹಾಕುವಾಗ ಕೇರಳ ಹೈಕೋರ್ಟ್ ಅಭಿಮತ

ಮಹಿಳೆಯರು ಧರಿಸಲು ಆಯ್ಕೆ ಮಾಡಿಕೊಂಡ ಬಟ್ಟೆಯ ಆಧಾರದ ಮೇಲೆ ಆಕ್ಷೇಪಣೆ ಎತ್ತುವುದನ್ನು ಸಮರ್ಥಿಸಲಾಗದು ಮತ್ತು ಮಹಿಳೆಯರನ್ನು ಅವರು ತೊಡುವ ಉಡುಪನ್ನು ಆಧರಿಸಿ ವರ್ಗೀಕರಿಸುವುದನ್ನು ಸಹಿಸಲಾಗದು ಎಂದು ಕೇರಳ ಹೈಕೋರ್ಟ್‌ ಗುರುವಾರ ಹೇಳಿದೆ [ಕೇರಳ ಸರ್ಕಾರ ಮತ್ತು ಸಿವಿಕ್‌ ಚಂದ್ರನ್‌ ನಡುವಣ ಪ್ರಕರಣ].

ದೇಶದ ಕಾನೂನಿಗೆ ಒಳಪಟ್ಟು ತಮಗೆ ಬೇಕಾದುದನ್ನು ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಸಿವಿಕ್ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೋರಿಕ್ಕೋಡ್ ಸೆಷನ್ಸ್ ನ್ಯಾಯಾಧೀಶ ಕೃಷ್ಣಕುಮಾರ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಚಂದ್ರನ್‌ ಅವರಿಗೆ ಸೆಷನ್ಸ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಎತ್ತಿ ಹಿಡಿದಿದ್ದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಹೈಕೋರ್ಟ್‌ ಪೀಠ ತೀರ್ಪಿನಲ್ಲಿರುವ ವಿವಾದಾತ್ಮಕ ಅಂಶಗಳನ್ನು ತೆಗೆದು ಹಾಕಲು ನಿರ್ಧರಿಸಿತ್ತು.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ದೇಶದ ಕಾನೂನಿಗೆ ಒಳಪಟ್ಟು ತಮಗೆ ಬೇಕಾದುದನ್ನು ಧರಿಸುವ ಸ್ವಾತಂತ್ರ್ಯ ಅವನು/ ಅವಳಿಗೆ ಇದೆ. ಮಹಿಳೆ ಧರಿಸುವುದನ್ನು ಆಧರಿಸಿ ಆಕೆಯನ್ನು ಗುರಿಯಾಗಿಸುವುದನ್ನು ಸಮರ್ಥಿಸಲಾಗದು.  ಮಹಿಳೆಯನ್ನು ಆಕೆ ಧರಿಸಿದ ಉಡುಪಿನಿಂದ ನಿರ್ಣಯಿಸಲು ಯಾವುದೇ ತಾರ್ಕಿಕತೆ ಇಲ್ಲ. ಮಹಿಳೆಯರನ್ನು ಅವರ ಉಡುಪು ಮತ್ತು ಅಭಿವ್ಯಕ್ತಿಗಳ ಆಧಾರದ ಮೇಲೆ ವರ್ಗೀಕರಿಸುವ ಮಾನದಂಡಗಳನ್ನು ಎಂದಿಗೂ ಸಹಿಸಲಾಗುವುದಿಲ್ಲ.

  • ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಪನ್ನು ಧರಿಸಿದ್ದರೂ ಕೂಡ, ಅದು ಆಕೆಯ ಘನತೆಗೆ ಧಕ್ಕೆ ತರಲು ನೀಡುವ ಪರವಾನಗಿ ಅಲ್ಲ.

  • ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪಿತ ವ್ಯಕ್ತಿಯನ್ನು ಬಿಡುಗಡೆ ಮಾಡಲು ಲೈಂಗಿಕ ಪ್ರಚೋದನಕಾರಿ ಉಡುಗೆಯನ್ನು ಆಧಾರವಾಗಿ ಪರಿಗಣಿಸಲಾಗದು.

  • ಮಹಿಳೆಯರು ಪುರುಷ ಗಮನ ಸೆಳೆಯಲು ಮಾತ್ರ ಉಡುಗೆ ತೊಡುತ್ತಾರೆ ಎಂಬ ಯಾವುದೇ ಆಲೋಚನೆ ಇರಬಾರದು. ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಕ್ಕಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವುದು ತಪ್ಪು.

  • ಯಾವುದೇ ಉಡುಪನ್ನು ಧರಿಸುವ ಹಕ್ಕು ಸಂವಿಧಾನ ಒದಗಿಸಿದ ವೈಯಕ್ತಿಕ ಸ್ವಾತಂತ್ರ್ಯದ ಸ್ವಾಭಾವಿಕ ವಿಸ್ತರಣೆಯಾಗಿದೆ.

  • ಆರೋಪಿಗೆ ಜಾಮೀನು ನೀಡುವಾಗ ಸಂತ್ರಸ್ತೆಯ ಉಡುಗೆ, ನಡತೆ ಅಥವಾ ಚಾರಿತ್ರ್ಯದ ಬಗ್ಗೆ ಚರ್ಚೆಯನ್ನು ತೀರ್ಪು ಉಲ್ಲೇಖಿಸಬಾರದು ಎಂದು ಅಪರ್ಣಾ ಭಟ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

  • ಅಲ್ಲದೆ ನ್ಯಾಯಾಧೀಶರಾದವರು ಸಂತ್ರಸ್ತೆಯ ವಿಶ್ವಾಸಕ್ಕೆ ಧಕ್ಕೆ ತರುವಂತಹ ಇಲ್ಲವೇ ಅಲುಗಾಡಿಸುವಂತಹ ಯಾವುದೇ ಪದಗಳನ್ನುಹೇಳಬಾರದು ಅಥವಾ ಬರೆಯಬಾರದು ಎಂದು ಕೂಡ ಅದೇ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಕಾರಣಗಳಿಗಾಗಿ ಸಂತ್ರಸ್ತೆಯ ಪ್ರಚೋದನಕಾರಿ ಉಡುಗೆಗೆ ಸಂಬಂಧಿಸಿದಂತೆ ಆಕ್ಷೇಪಿತ ಆದೇಶದಲ್ಲಿನ ಹೇಳಿಕೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಮೂಲಕ ಅವುಗಳನ್ನು ತೆಗೆದುಹಾಕಲಾಗುತ್ತದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
State_of_Kerala_v_Civic_Chandran_.pdf
Preview

Related Stories

No stories found.
Kannada Bar & Bench
kannada.barandbench.com