ಮೃಗಾಲಯದಲ್ಲಿ ಪಾಲಿಸಬೇಕಾದ ಎಸ್‌ಒಪಿ ಸೂಚಿಸಲು ತಜ್ಞರ ಸಮಿತಿ ರಚನೆ: ಹೈಕೋರ್ಟ್‌ಗೆ ಕೇಂದ್ರ ಮೃಗಾಲಯ ಪ್ರಾಧಿಕಾರದ ವಿವರಣೆ

ಶಿವಮೊಗ್ಗ ಮೃಗಾಲಯದಲ್ಲಿ ಚಿಕಿತ್ಸೆಗೆ ತೆರಳಿದ್ದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ನಿರಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಎಸ್ಒಪಿ ಹಾಗೂ ಇತರೆ ಸುರಕ್ಷತಾ & ಮುನ್ನೆಚ್ಚರಿಕೆ ಕ್ರಮ ಸೂಚಿಸಲು ಸಮಿತಿ ರಚಿಸಲಾಗಿದೆ ಎಂದ ಕೇಂದ್ರ ಸರ್ಕಾರ.
High Court of Karnataka
High Court of Karnataka
Published on

ಪಶುವೈದ್ಯರು, ಪಶುಪಾಲನಾ ಸಿಬ್ಬಂದಿ, ಮೃಗಾಲಯ ಪಾಲಕರು ಸೇರಿದಂತೆ ಇತರ ಸಿಬ್ಬಂದಿ ಪ್ರಾಣಿಗಳ ಚಿಕಿತ್ಸೆ ಅಥವಾ ಆರೈಕೆಯ ಉದ್ದೇಶದಿಂದ ಮೃಗಾಯಲಯ ಪ್ರವೇಶಿಸಿ ಅವುಗಳ ಸನಿಹಕ್ಕೆ ಹೋಗುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಅಗತ್ಯ ‘ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ) ಸೂಚಿಸಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಕರ್ನಾಟಕ ಹೈಕೋರ್ಟ್ಗೆ ಬುಧವಾರ ತಿಳಿಸಿದೆ.

ಈ ವಿಚಾರವಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಂಸ್ಸಿ ಅನಯ್ವಿಕ ವನ್ಯಜೀವಿ ಸಂರಕ್ಷಣೆ ವ್ಯಾಸಂಗದಲ್ಲಿ ತೊಡಗಿ ಸದ್ಯ ಇಂಗ್ಲೆಂಡಿನಲ್ಲಿ ವಾಸವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ 24 ವರ್ಷದ ಎಂ ಭುವನ್ ತಮ್ಮ ತಾಯಿ ಬಿ ಪುಷ್ಪಲತಾ ಅವರ ಮೂಲಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೇಂದ್ರ ಮೃಗಾಲಯ ಪ್ರಾಧಿಕಾರದ ಪರ ವಕೀಲರು, ಇತ್ತೀಚೆಗೆ ಶಿವಮೊಗ್ಗ ಮೃಗಾಲಯದಲ್ಲಿ ಚಿಕಿತ್ಸೆಗೆ ತೆರಳಿದ್ದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ನಿರಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳಿಗೆ ಸಂಬಂಧಿಸಿದಂತೆ ಅಗತ್ಯ ಎಸ್ಒಪಿ ಹಾಗೂ ಇತರೆ ಸುರಕ್ಷತಾ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಲು ಸಮಿತಿ ರಚಿಸಲಾಗಿದ್ದು, ಆ ನಿಟ್ಟಿನಲ್ಲಿ ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ಅರ್ಜಿದಾರರು ಎತ್ತಿರುವ ವಿಚಾರಗಳ ಬಗ್ಗೆ ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ. ಆದ್ದರಿಂದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಅಥವಾ ನಿರ್ದೇಶನದ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ಇತ್ಯರ್ಥಪಡಿಸಿತು.

Kannada Bar & Bench
kannada.barandbench.com