ಮಾನನಷ್ಟ ಮೊಕದ್ದಮೆ: ಏಕ ಸದಸ್ಯ ಪೀಠದ ಆದೇಶ ರದ್ದುಗೊಳಿಸುವ ಮಲಿಕ್ ಪ್ರಸ್ತಾವನೆಗೆ ಸಮೀರ್ ವಾಂಖೆಡೆ ತಂದೆ ಒಪ್ಪಿಗೆ

ವಾಂಖೆಡೆ ಅವರಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ಏಕಸದಸ್ಯ ಪೀಠದ ಆದೇಶ ತಮ್ಮ ಪರವಾಗಿದ್ದರೂ, ತಮ್ಮ ವಿರುದ್ಧ ಅನೇಕ ಪ್ರತಿಕೂಲ ಅವಲೋಕನ ಮಾಡಿರುವುದರಿಂದ ಅದನ್ನು ರದ್ದುಗೊಳಿಸಲು ಮಲಿಕ್‌ ಕೋರಿದ್ದರು.
ಮಾನನಷ್ಟ ಮೊಕದ್ದಮೆ: ಏಕ ಸದಸ್ಯ ಪೀಠದ ಆದೇಶ ರದ್ದುಗೊಳಿಸುವ ಮಲಿಕ್ ಪ್ರಸ್ತಾವನೆಗೆ ಸಮೀರ್ ವಾಂಖೆಡೆ ತಂದೆ ಒಪ್ಪಿಗೆ

ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿರುವ ನವಾಬ್‌ ಮಲಿಕ್‌ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನದೇವ್ ವಾಂಖೆಡೆ ಅವರಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿರುವ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಲು ಮಲಿಕ್‌ ಮನವಿ ಮಾಡಿದ್ದು ಇದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಧ್ಯಾನದೇವ್‌ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.

ಧ್ಯಾನದೇವ್ ಅವರಿಗೆ ಮಧ್ಯಂತರ ಪರಿಹಾರ ನೀಡಲು ಏಕಸದಸ್ಯ ಪೀಠ ನಿರಾಕರಿಸುವ ಮೂಲಕ ಮಲಿಕ್ ಪರ ಆದೇಶ ಬಂದಿತ್ತು. ಆದರೆ ತಮ್ಮ ವಿರುದ್ಧ ಅನೇಕ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದ್ದ ಆದೇಶ ರದ್ದುಗೊಳಿಸಲು ಅವರು ಕೋರಿದ್ದರು. ಆದೇಶ ರದ್ದುಗೊಳಿಸಿದ ಬಳಿಕ ಮೊಕದ್ದಮೆಯಲ್ಲಿನ ಮಧ್ಯಂತರ ಅರ್ಜಿಯನ್ನು ಪ್ರಕರಣದ ಮರುವಿಚಾರಣೆಗಾಗಿ ಏಕಸದಸ್ಯ ಪೀಠಕ್ಕೆ ಮರಳಿಸಬಹುದು ಎಂದು ಸಲಹೆ ನೀಡಿದ್ದರು. ಧ್ಯಾನದೇವ್‌ ಅವರು ಅದಕ್ಕೆ ಸಮ್ಮತಿಸಿರುವುದರಿಂದ, ಮಾನನಷ್ಟ ಮೊಕದ್ದಮೆಯನ್ನು ಈಗ ಮಧ್ಯಂತರ ಪರಿಹಾರದ ಅಂಶದ ಮೇಲೆ ಏಕ ಸದಸ್ಯ ಪೀಠ ಮರುವಿಚಾರಣೆ ನಡೆಸಲಿದೆ.

Also Read
ಎನ್‌ಡಿಪಿಎಸ್‌ ಪ್ರಕರಣ ರದ್ದುಗೊಳಿಸುವಂತೆ ಕೋರಿ ನವಾಬ್ ಮಲಿಕ್ ಅವರ ಅಳಿಯ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಏಕಸದಸ್ಯ ಪೀಠದ ಆದೇಶವನ್ನು ಸರ್ವಾನುತದಿಂದ ರದ್ದುಗೊಳಿಸಲಾಗಿದೆ ಎಂದು ವಾಂಖೆಡೆ ಅವರ ವಾದ ಪರಿಗಣಿಸಿ, ನ್ಯಾಯಮೂರ್ತಿ ಎಸ್‌ ಜೆ ಕಥಾವಲ್ಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ವಿಭಾಗೀಯ ಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ. ವಾಂಖೆಡೆ ಅವರ ಮಾನನಷ್ಟ ಮೊಕದ್ದಮೆಯ ಮಧ್ಯಂತರ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಪೀಠ ಡಿಸೆಂಬರ್ 9ರವರೆಗೆ ಮಲಿಕ್‌ ಅವರಿಗೆ ಸಮಯಾವಕಾಶ ನೀಡಿತು. ವಾಂಖೆಡೆ ಅವರು ಜನವರಿ 3, 2021ರೊಳಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ. ನಂತರ ಮುಂದಿನ 12 ವಾರಗಳ ಕಾಲ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಮೊದಲೇ ಒಪ್ಪಿರುವಂತೆ ಮಲಿಕ್‌ ಅವರು ಸಮೀರ್‌ ಕುಟುಂಬದ ವಿರುದ್ಧ ಯಾವುದೇ ಹೇಳಿಕೆ ನೀಡದೆ ಇರಬೇಕಾಗುತ್ತದೆ.

ಸಮೀರ್‌ ತಂದೆ ಮುಸ್ಲಿಂ ಆಗಿದ್ದು ಅವರ ಹೆಸರು ದಾವುದ್‌ ಎಂಬುದಾಗಿ ಆರೋಪಿಸಿ ಮಲಿಕ್‌ ಅವರು ಟ್ವಿಟರ್‌ನಲ್ಲಿ ಸಮೀರ್‌ ಅವರ ಜನ್ಮ ಪ್ರಮಾಣಪತ್ರ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಲಿಕ್‌ ಅವರ ವಿರುದ್ಧ ಧ್ಯಾನದೇವ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು.

Related Stories

No stories found.
Kannada Bar & Bench
kannada.barandbench.com