ಹಬ್ಬಗಳು ರಾಜಕೀಯ ಉದ್ದೇಶಕ್ಕಾಗಿ ಬಳಕೆ, ಸರ್ಕಾರವೂ ಇದನ್ನೇ ಮಾಡುತ್ತಿದೆ: ಹೈಕೋರ್ಟ್‌ ಅತೃಪ್ತಿ

“ಸಣ್ಣ ವಿಚಾರವನ್ನು ಎಲ್ಲರೂ ಸೇರಿ ದೊಡ್ಡದು ಮಾಡಲು ಮುಂದಾಗುತ್ತಾರೆ. ಪ್ರತಿವರ್ಷ ಈ ಹಬ್ಬದ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಒಬ್ಬರತ್ತ ಬೆರಳು ಮಾಡುತ್ತಿಲ್ಲ. ಎರಡೂ ಕಡೆಯಿಂದ ಈ ಸಮಸ್ಯೆಗಳಾಗುತ್ತಿವೆ” ಎಂದ ಸರ್ಕಾರದ ವಕೀಲರು.
BJP MLA M P Renukacharya and Karnataka HC
BJP MLA M P Renukacharya and Karnataka HC
Published on

“ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ, ಸರ್ಕಾರ ಸಹ ಇದನ್ನೇ ಮಾಡುತ್ತಿದೆ” ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧಿಸಿದ್ದ ದಾವಣಗೆರೆ ಜಿಲ್ಲಾಡಳಿತದ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಬುಧವಾರ ಮಧ್ಯಂತರ ಆದೇಶ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಿಜೆಪಿಯ ಎಂ ಪಿ ರೇಣುಕಾಚಾರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M I Arun
Justice M I Arun

ಕೆಲ ಕಾಲ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ಮಾಡಿತು.

ಪ್ರತಿವಾದಿಗಳಾದ ದಾವಣಗೆರೆ ಎಕ್ಸ್‌ಟೆನ್ಷನ್ ಠಾಣೆ ಪೊಲೀಸರು ಹಾಗೂ ದೂರುದಾರ ಬಿ ಆರ್ ರವಿ (ಪೊಲೀಸ್ ಕಾನ್‌ಸ್ಟೆಬಲ್) ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ದಸರಾ ರಜೆಯ ಬಳಿಕ ಮುಂದೂಡಿತು.

ಹಬ್ಬಗಳು ರಾಜಕೀಯ ಕಾರಣಗಳಿಗೆ ಬಳಕೆಯಾಗಬಾರದು: ಇದಕ್ಕೂ ಮುನ್ನ ರೇಣುಕಾಚಾರ್ಯ ಪರ ವಕೀಲರು “ಡಿಜೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯನ್ನು ಅರ್ಜಿದಾರರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದರು. ಅವರ ಹೇಳಿಕೆಗಳನ್ನು ತಿರುಚಲಾಗಿದ್ದು, ತಪ್ಪಾಗಿ ವರದಿ ಮಾಡಲಾಗಿದೆ. ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೆರವಣಿಗೆಗೆ ಅರ್ಜಿದಾರರು ಜವಾಬ್ದಾರರಲ್ಲ ಹಾಗೂ ಅವರು ಸಾರ್ವಜನಿಕ ಮಾರ್ಗವನ್ನು ನಿರ್ಬಂಧಿಸಿಲ್ಲ” ಎಂದು ತಿಳಿಸಿದರು.

ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಸರ್ಕಾರ ಅಥವಾ ಡಿಸಿ ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿತ್ತು. ಅದನ್ನು ಯಾರೂ ತಡೆಯುತ್ತಿರಲಿಲ್ಲ. ಅದು ಬಿಟ್ಟು ಜನರನ್ನು ಸೇರಿಸಿ, ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ನೆರೆದಿದ್ದ ಜನರನ್ನು ಉದ್ದೇಶಿಸಿ “ನೀವು ಡಿಜೆ ಹಾಕಿ, ತಾಕತ್ತಿದ್ದರೆ ಪೊಲೀಸರು ಬಂದು ತಡೆಯಲಿ ನೋಡೋಣ” ಎಂದು ಹೇಳಿಕೆ ನೀಡಿದ್ದಾರೆ. ಇದು ಜನಪ್ರತಿನಿಧಿಯೊಬ್ಬರು ಬಳಸುವ ಭಾಷೆಯೇ” ಎಂದು ಆಕ್ಷೇಪಿಸಿದರು.

ವಿಚಾರಣೆಯ ಹಂತದಲ್ಲಿ ಪೀಠವು ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ, “ಒಂದು ವಿಷಯ ಜಗದೀಶ್, ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರವೂ ಸಹ. ಇದನ್ನು ಗಮನಿಸಲಾಗಿದೆ, ಈ ರೀತಿ ಆಗಬಾರದು” ಎಂದು ಮೌಖಿಕವಾಗಿ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್‌ ಅವರು “ಸಣ್ಣ ವಿಚಾರವನ್ನು ಎಲ್ಲರೂ ಸೇರಿ ದೊಡ್ಡದು ಮಾಡಲು ಮುಂದಾಗುತ್ತಾರೆ. ಪ್ರತಿವರ್ಷ ಈ ಹಬ್ಬದ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಒಬ್ಬರತ್ತ ಬೆರಳು ಮಾಡುತ್ತಿಲ್ಲ. ಎರಡೂ ಕಡೆಯಿಂದ ಈ ಸಮಸ್ಯೆಗಳಾಗುತ್ತಿವೆ. ಮದ್ದೂರಿನಲ್ಲಿ ಇಂಥದೇ ವಿಚಾರದಲ್ಲಿ ನಡೆದ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿದರೆ ನಮಗೆ ಯಾವುದೇ ತಕರಾರಿಲ್ಲ. ಆದರೆ, ಈ ರೀತಿ ರಸ್ತೆಯಲ್ಲಿ ನಿಂತು ಜನರನ್ನು ಸೇರಿಸಿ, ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ” ಎಂದರು.

Kannada Bar & Bench
kannada.barandbench.com