ನಟ ಸಲ್ಮಾನ್ ಮನೆ ಬಳಿ ಗುಂಡು ಹಾರಿಸಿದ್ದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಸಾವು: ಬಾಂಬೆ ಹೈಕೋರ್ಟ್‌ ಮೊರೆ ಹೋದ ಮೃತನ ತಾಯಿ

ನಟ ಸಲ್ಮಾನ್ ಮನೆ ಬಳಿ ಗುಂಡು ಹಾರಿಸಿದ್ದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಸಾವು: ಬಾಂಬೆ ಹೈಕೋರ್ಟ್‌ ಮೊರೆ ಹೋದ ಮೃತನ ತಾಯಿ

ಮೇ 1 ರಂದು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ್ದ ಅನುಜ್ಗೆ, ಮುಂಬೈ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಥಪನ್ ತಾಯಿ ದೂರಿದ್ದಾರೆ.

ಬಾಲಿವುಡ್‌ ನಟ ಸಲ್ಮಾನ್ ಖಾನ್ ಮನೆ ಬಳಿ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದ ಅನುಜ್‌ ಥಪನ್‌ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಆತನ ತಾಯಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ದೇವಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮೇ 1 ರಂದು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ್ದ ಅನುಜ್‌ಗೆ, ಮುಂಬೈ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಥಪನ್ ತಾಯಿ ರೀಟಾ ದೇವಿ ದೂರಿದ್ದಾರೆ.

“ತಮ್ಮ ಮಗನನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಮುಂಬೈನ ಅಪರಾಧ ವಿಭಾಗದ ಪೊಲೀಸರು ಸಲ್ಮಾನ್ ಖಾನ್ ಅವರೊಂದಿಗೆ ಶಾಮೀಲಾಗಿ ಮಗನಿಗೆ ಥರ್ಡ್‌ ಡಿಗ್ರಿ ಚಿತ್ರಹಿಂಸೆ ನೀಡಿದ್ದಾರೆ. ನಂತರ ಇಡೀ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ” ಎಂದು ಆಕೆ ಅಳಲು ತೋಡಿಕೊಂಡಿದ್ದಾರೆ.

ವಕೀಲರಾದ ಶ್ರೀರಾಮ್ ಪರಕ್ಕತ್ ಮತ್ತು ರಾಜವಂತ್ ಕೌರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಥಾಪನ್ ಸಾವಿನ ಕುರಿತು ಸಿಬಿಐ ತನಿಖೆ ನಡಸುವಂತೆ ವಿನಂತಿಸಲಾಗಿದೆ.

ಏಪ್ರಿಲ್ 24 ರಿಂದ ಮೇ 2 ರವರೆಗೆ ಪೊಲಿಸ್‌ ಅಧಿಕಾರಿಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಮತ್ತು ಕರೆ ವಿವರ ದಾಖಲೆಗಳನ್ನು (ಸಿಡಿಆರ್‌) ಸಂರಕ್ಷಿಸಿ ಇಡಬೇಕು. ಅಲ್ಲದೆ ಥಪನ್‌ ಥಾಪನ್ ಸಾವಿನ ಕುರಿತು ಹೊಸದಾಗಿ ಮರಣೋತ್ತರ ಪರೀಕ್ಷೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ಅರ್ಜಿಯನ್ನು ನ್ಯಾಯಾಲಯ ಇನ್ನಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದೆ.

ನಟ ಸಲ್ಮಾನ್‌ ಖಾನ್‌ ಮನೆಯ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಉಳಿದ ಆರೋಪಿಗಳಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪದಡಿ ಥಪನ್‌ನನ್ನು ಉಳಿದ ಮೂವರು ವ್ಯಕ್ತಿಗಳೊಂದಿಗೆ ಮುಂಬೈ ಪೊಲೀಸ್‌ ಅಪರಾಧ ವಿಭಾಗ ಏಪ್ರಿಲ್ 26ರಂದು ಬಂಧಿಸಿತ್ತು.

ಏಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಆತನ ವಿರುದ್ಧ ಪೊಲೀಸರು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಡಿಯೂ ಪ್ರಕರಣ ದಾಖಲಿಸಿಕೊಂಡಿದ್ದರು. ಏಪ್ರಿಲ್ 29ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ನ್ಯಾಯಾಲಯ ಥಪನ್ ಸೇರಿದಂತೆ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಮೇ 8 ರವರೆಗೆ ವಿಸ್ತರಿಸಿತ್ತು. ಉಳಿದ ಆರೋಪಿಗಳನ್ನು ಆರೋಪಿಗಳನ್ನು ವೈದ್ಯಕೀಯ ಕಾರಣಗಳಿಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಮೇ 1 ರಂದು, ಥಪನ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿತ್ತು. ಮೇ 3ರಂದು ಅವರ ತಾಯಿ ಹೈಕೋರ್ಟ್‌ನಲ್ಲಿ ಆತನ ತಾಯಿ ಪ್ರಸ್ತು ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com