Justice M Nagaprasanna
Justice M Nagaprasanna

ಸಂವಿಧಾನದತ್ತವಾಗಿ ಬಂದಿರುವ ಮೂಲಭೂತ ಹಕ್ಕುಗಳು ಖಾಸಗಿತನದ ಹಕ್ಕುಗಳೂ ಹೌದು: ಹೈಕೋರ್ಟ್‌

ಕ್ರಿಮಿನಲ್‌ ಆರೋಪದ ಪ್ರಕರಣದಲ್ಲಿ ನಿರ್ದೋಷಿಯಾಗಿರುವ ನನ್ನ ಹೆಸರನ್ನು ಹೈಕೋರ್ಟ್‌ನ ಡಿಜಿಟಲ್‌ ದಾಖಲೆಗಳಿಂದ ತೆಗೆದುಹಾಕಲು ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಸಂವಿಧಾನದತ್ತವಾಗಿ ಬಂದಿರುವ ಮೂಲಭೂತ ಹಕ್ಕುಗಳು ಖಾಸಗಿತನದ ಹಕ್ಕುಗಳೂ ಆಗಿದ್ದು, ವ್ಯಕ್ತಿಯೊಬ್ಬ ಗೌರವಯುತವಾಗಿ ಬದುಕುವುದನ್ನು ಎತ್ತಿಹಿಡಿದಿವೆ. ಈ ಅಂಶವನ್ನು ಯಾರೂ ಮರೆಯಬಾರದು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಹೇಳಿದೆ.

ಕ್ರಿಮಿನಲ್‌ ಆರೋಪದ ಪ್ರಕರಣದಲ್ಲಿ ನಿರ್ದೋಷಿಯಾಗಿರುವ ನನ್ನ ಹೆಸರನ್ನು ಹೈಕೋರ್ಟ್‌ನ ಡಿಜಿಟಲ್‌ ದಾಖಲೆಗಳಿಂದ ತೆಗೆದುಹಾಕಲು ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿ 28 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಿ ಎಚ್‌ ಹನುಮಂತರಾಯ ಅವರು ಅರ್ಜಿದಾರನ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದು ಅದು ಪುರಸ್ಕೃತವಾಗಿದೆ. ಆದರೂ, ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿವರಗಳು ನ್ಯಾಯಾಲಯದ ವೆಬ್‌ಸೈಟ್‌ ಮತ್ತು ಇತರೆ ಕಾನೂನು ಜಾಲತಾಣಗಳಲ್ಲಿ ಗೋಚರವಾಗುತ್ತಿದೆ ಎಂದು ಆಕ್ಷೇಪಿಸಿದರು.

ಅರ್ಜಿದಾರರ ಬಗೆಗಿನ ಮಾಹಿತಿಯು ಅಧಿಕೃತ ವೆಬ್‌ಸೈಟ್‌ ಮುಖಾಂತರ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿದ್ದು, ಇದರಿಂದ ಅವರ ಜೀವನೋಪಾಯವೇ ಕಷ್ಟವಾಗಿದೆ. ಎಲ್ಲಿಯೂ ನೌಕರಿ ಸಿಗದೆ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸಮಾಜದಲ್ಲಿ ಗೌರವದಿಂದ ಬದುಕು ನಡೆಸಲು ತೊಂದರೆಯಾಗುತ್ತಿದೆ. ಆದ್ದರಿಂದ, ಅವರ ಹೆಸರನ್ನು ಹೈಕೋರ್ಟ್‌ನ ಡಿಜಿಟಲ್‌ ದಾಖಲೆಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಪೀಠವು ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದ ನಂತರವೂ ಆರೋಪಿಯಾಗಿದ್ದವರ ಹೆಸರನ್ನು, ಸಾಮಾಜಿಕ ಜಾಲತಾಣಗಳಲ್ಲಿ ಇರುವುದಕ್ಕೆ ಅವಕಾಶ ಮಾಡಿದರೆ ಗೌರವಯುತವಾಗಿ ಬದುಕುವ ವ್ಯಕ್ತಿಯೊಬ್ಬನ ಹಕ್ಕಿಗೆ ಅದು ಖಂಡಿತಾ ಧಕ್ಕೆ ಉಂಟು ಮಾಡುವ ಅಂಶ ಎಂಬ ಅಭಿಪ್ರಾಯದೊಂದಿಗೆ, ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿರುವ ಪ್ರಕರಣದ ವಿವರಗಳಲ್ಲಿ ಅರ್ಜಿದಾರರ ಹೆಸರನ್ನು ಮರೆಮಾಚುವಂತೆ ರಿಜಿಸ್ಟ್ರಿಗೆ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

Kannada Bar & Bench
kannada.barandbench.com