
ನಟಿ ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜಾಮೀನು ಕೋರಿ ಎರಡನೇ ಆರೋಪಿ ತರುಣ್ ರಾಜ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.
ಜಾಮೀನು ಕೋರಿ ತರುಣ್ ರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಧೀಶ ವಿಶ್ವನಾಥ ಗೌಡರ್ ಇಂದು ಪ್ರಕಟಿಸಿದರು.
ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಹಿಂದೆ ರನ್ಯಾ ರಾವ್ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.
ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಚಿನ್ನ ಸಾಗಣೆ ಪ್ರಕರಣದಲ್ಲಿ ತರುಣ್ ರಾಜ್ ಭಾಗಿಯಾಗಿರುವುದಕ್ಕೆ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್ಐ) ಪೊಲೀಸರ ಬಳಿ ಸಾಕ್ಷ್ಯಗಳೇ ಇಲ್ಲ. ವಿದೇಶಕ್ಕೆ ತೆರಳಲು ರನ್ಯಾಗೆ ವಿಮಾನ ಟಿಕೆಟ್ ಕೊಡಿಸಿರುವುದೇ ತರುಣ್ ಎಂಬ ಡಿಆರ್ಐ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಚಿನ್ನವನ್ನು ಜಿನೇವಾಗೆ ಕೊಂಡೊಯ್ಯಲು ರನ್ಯಾಗೆ ತರುಣ್ ಹೇಳಿದ್ದಾನೆ ಎಂಬ ಆರೋಪದಲ್ಲಿ ಹುರುಳಿಲ್ಲ. ತರುಣ್ ಅನ್ನು ಬಂಧಿಸಿರುವ ಡಿಆರ್ಐ ಅಧಿಕಾರಿಗಳು ಪೊಲೀಸರೇ ಅಲ್ಲ. ಬಂಧನಕ್ಕೆ ಡಿಆರ್ಐ ಅಧಿಕಾರಿಗಳು ಸೂಕ್ತ ಕಾರಣ ನೀಡಿಲ್ಲ. ಹೀಗಾಗಿ, ಜಾಮೀನು ನೀಡಬೇಕು ಎಂದು ಕೋರಿದ್ದರು.
ಈ ವಾದಕ್ಕೆ ಆಕ್ಷೇಪಿಸಿದ್ದ ಡಿಆರ್ಐ ಪರ ವಕೀಲ ಮಧು ರಾವ್ ಅವರು “ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಮೊದಲ ಆರೋಪಿ ರನ್ಯಾ ರಾವ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ತರುಣ್ ಪಾತ್ರ ಸಾಬೀತಾಗಿದೆ. ಮಾರ್ಚ್ 3 ರಂದು ತರುಣ್ ದುಬೈನಿಂದ ಹೈದರಾಬಾದ್ಗೆ ಪ್ರಯಾಣ ಮಾಡಿದ್ದಾರೆ. ತರುಣ್ ರಾಜ್ ರನ್ಯಾಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ ಹಾಗೂ ತರುಣ್ ವೀಸಾ ಖಾತೆಗೆ ರನ್ಯಾ ಹಣ ತುಂಬಿದ್ದಾರೆ. ಮಾರ್ಚ್ 3ರಂದು ದುಬೈನಲ್ಲಿ ತರುಣ್ ಚಿನ್ನವನ್ನ ರನ್ಯಾಗೆ ತಲುಪಿಸಿ, ನಂತರ ಹೈದರಾಬಾದ್ಗೆ ಬಂದಿದ್ದಾರೆ. ತರುಣ್ ಬಂಧನದ ಮೆಮೊದಲ್ಲಿ ಆತ ಎಸಗಿರುವ ಅಪರಾಧ, ಬಂಧನ ಅಗತ್ಯ ಕಾರಣ ಸೇರಿ ಎಲ್ಲ ಅಂಶಗಳನ್ನೂ ಉಲ್ಲೇಖಿಸಲಾಗಿದೆ. ತರುಣ್ ಅಮೆರಿಕಾ ನಾಗರಿಕನಾಗಿದ್ದು, ಜಾಮೀನು ನೀಡಿದರೆ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು” ಎಂದು ವಾದಿಸಿದ್ದರು.