Harsha
Harsha

[ಹರ್ಷ ಹತ್ಯೆ] ಐವರು ಆರೋಪಿಗಳನ್ನು ಮೇ 9ರವರೆಗೆ ವಿಚಾರಣೆಗಾಗಿ ಎನ್‌ಐಎ ಪೊಲೀಸರ ಕಸ್ಟಡಿಗೆ ನೀಡಿದ ವಿಶೇಷ ನ್ಯಾಯಾಲಯ

2022ರ ಫೆಬ್ರವರಿ 20ರಂದು ರಾತ್ರಿ 9 ಗಂಟೆಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಯಾಗಿತ್ತು. ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿದ್ದು ಈವರೆವಿಗೂ 10 ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
Published on

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಐವರು ಕೊಲೆ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಬುಧವಾರ ಎನ್‌ಐಎ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಎನ್‌ಐಎ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 52ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಎನ್‌ಐಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಬಿ ಜಿ ಪ್ರಮೋದ್‌ ಅವರು ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಲು ಆದೇಶಿಸಿದರು.

ಆರೋಪಿಗಳಾದ ಶಿವಮೊಗ್ಗದ ಟ್ಯಾಂಕ್‌ ಮೊಹಲ್ಲಾದ ಅಬ್ದುಲ್‌ ಆಫ್ವಾನ್‌ (21), ವಾದಿ ಎ ಹುದಾ ನಿವಾಸಿ, ಅಬ್ದುಲ್‌ ಖಾದರ್ ಜಿಲಾನ್‌ (25), ಇಲ್ಯಾಸ್‌ ನಗರದ ಫರಜ್‌ ಪಾಷಾ (24), ಜೆ.ಪಿ ನಗರದ ಸೈಯದ್‌ ನದೀಂ (20) ಮತ್ತು ವಾದಿ ಎ ಹುದಾ ನಿವಾಸಿ ಜಾಫರ್ ಸಾದಿಕ್‌ (50) ಇವರನ್ನು ಮೇ 5ರ ಬೆಳಗ್ಗೆಯಿಂದ ಮೇ 9ರ ಮಧ್ಯಾಹ್ನದವರೆಗೆ ಎನ್‌ಐಎ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.

2022ರ ಫೆಬ್ರವರಿ 20ರಂದು ರಾತ್ರಿ 9 ಗಂಟೆಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆಯಾಗಿತ್ತು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿದ್ದು ಈವರೆವಿಗೂ ಹತ್ತು ಜನ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

Kannada Bar & Bench
kannada.barandbench.com