ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ವೈದ್ಯಕೀಯ ಪುರಾವೆಗಳಿಲ್ಲ ಎಂದ ಉ.ಪ್ರ. ನ್ಯಾಯಾಲಯ

ಘಟನೆ ಬಳಿಕ ಎಂಟು ದಿನಗಳ ಕಾಲ ಆಕೆ ಮಾತನಾಡುತ್ತಿದ್ದ ಕಾರಣ ಆರೋಪಿಗಳ ಉದ್ದೇಶ ಆಕೆಯನ್ನು ಕೊಲ್ಲುವುದಿತ್ತು ಎಂದು ಖಂಡಿತವಾಗಿಯೂ ಹೇಳಲಾಗದು ಎಂದಿದೆ ಕೋರ್ಟ್.
Hathras Case
Hathras Case

ಹಾಥ್‌ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಪೊಲೀಸರಿಗೆ ನೀಡಿದ ಆರಂಭಿಕ ಹೇಳಿಕೆಯಲ್ಲಿ ಕೃತ್ಯದ ವಿವರಗಳನ್ನು ಆಕೆ ಬಹಿರಂಗಪಡಿಸಿಲ್ಲ ಎಂದು ಉತ್ತರಪ್ರದೇಶದ ವಿಶೇಷ ನ್ಯಾಯಾಲಯ ತಿಳಿಸಿದೆ [ಸರ್ಕಾರ ಮತ್ತು ಸಂದೀಪ್‌ ಇನ್ನಿತರರ ನಡುವಣ ಪ್ರಕರಣ].

ಪ್ರಕರಣವು ರಾಜಕೀಯ ಒಳಸುಳಿಗಳನ್ನು ಹೊಂದಿರುವುದರಿಂದ ಸಂತ್ರಸ್ತೆಯು ನಾಲ್ವರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೆ ಬದಲಿಸುವಂತೆ ಆಕೆಗೆ ಸೂಚಿಸಿರುವ ಸಾಧ್ಯತೆ ಇದೆ ಎಂದು 167 ಪುಟಗಳ ವಿವರವಾದ ತೀರ್ಪಿನಲ್ಲಿ, ಎಸ್‌ಸಿ/ಎಸ್‌ಟಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ರಿಲೋಕ್ ಪಾಲ್ ಸಿಂಗ್ ತಿಳಿಸಿದ್ದಾರೆ.

ಪ್ರಕರಣದ  ನಾಲ್ವರು ಆರೋಪಿಗಳಲ್ಲಿ ಮೂವರನ್ನು ಅಂದರೆ ರಾಮು, ಲವಕುಶ ಹಾಗೂ ರವಿ ಅವರನ್ನು ಗುರುವಾರ ಖುಲಾಸೆಗಳಿಸಿದ್ದ ನ್ಯಾಯಾಲಯ ಮತ್ತೊಬ್ಬ ಆರೋಪಿ ಸಂದೀಪ್‌ನನ್ನು ಕೊಲೆಗೆ ಸಮನಲ್ಲದ ನರಹತ್ಯೆ ಎಸಗಿದ್ದಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿ ಅಪರಾಧಿ ಎಂದು ಘೋಷಿಸಿತ್ತು. ಆತನಿಗೆ . ₹ 50,000 ದಂಡದೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ದಂಡದ ಮೊತ್ತದಲ್ಲಿ , ₹ 40,000 ಸಂತ್ರಸ್ತೆಯ ತಾಯಿಗೆ ನೀಡಬೇಕು ಎಂದು ಸೂಚಿಸಿತ್ತು.

ನ್ಯಾಯಾಲಯದ ಅವಲೋಕನಗಳು

  • ಆರೋಪಿ ಸಂದೀಪ್ 2020ರ ಸೆಪ್ಟೆಂಬರ್ 14ರಂದು ಸಂತ್ರಸ್ತೆವಿನ ಕೊರಳಿಗೆ ದುಪ್ಪಟ್ಟಾ ಸುತ್ತಿ ಎಳೆದಿದ್ದು, ಇದರಿಂದ ಆಕೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿರುವುದು, ಚಿಕಿತ್ಸೆ ಫಲಿಸದೆ ಸೆಪ್ಟೆಂಬರ್ 29 ರಂದು ನಿಧನರಾಗಿರುವುದು  ಸಾಕ್ಷ್ಯಾಧಾರದ ಮೂಲಕ ಸಂಪೂರ್ಣವಾಗಿ ಸಾಬೀತಾಗಿದೆ.

  • ಸಾಮಾನ್ಯವಾಗಿ ಕತ್ತು ಹಿಸುಕಿದರೆ ಕೆಲವೇ ನಿಮಿಷದಲ್ಲಿ ಸಂತ್ರಸ್ತೆ ಸಾಯುತ್ತಾಳೆ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಕುತ್ತಿಗೆಗೆ ತೀವ್ರ ಹೊಡೆತದಿಂದ ಸಂಭವಿಸಿದೆ ಎನ್ನಲಾದ ಸಂತ್ರಸ್ತೆಯ ಸಾವು ಕಾಲಾನಂತರ ಆಕೆಯ ಗರ್ಭಕಂಢದ ಮುರಿತದಲ್ಲಿನ ಬದಲಾವಣೆಗಳಿಂದಾಗಿ ಸಂಭವಿಸಿದೆ. ಘಟನೆ ನಡೆದು ಎಂಟು ದಿನಗಳ ಕಾಲ ಸಂತ್ರಸ್ತೆ ಮಾತನಾಡುತ್ತಿದ್ದುದರಿಂದ ಆರೋಪಿಗಳ ಉದ್ದೇಶ ಆಕೆಯನ್ನು ಕೊಲ್ಲುವುದಾಗಿತ್ತು ಎಂದು ಖಂಡಿತಾ ಹೇಳಲಾಗದು.

  • ಸಂತ್ರಸ್ತೆಯ ದೇಹದ ಮೇಲಿನ ಗಾಯಗಳು ಒಬ್ಬ ವ್ಯಕ್ತಿಯಿಂದ ಉಂಟಾಗಿರುವ ಸಾಧ್ಯತೆಯಿದೆ ಎಂಬುದು ನಿಜ. ಆದ್ದರಿಂದ, ಆರೋಪಿ ಸಂದೀಪ್‌ನ ಕೃತ್ಯವು ಐಪಿಸಿ ಸೆಕ್ಷನ್ 304 (ಕೊಲೆಗೆ ಸಮನಲ್ಲದ ನರಹತ್ಯೆ) ಅಡಿಯಲ್ಲಿ ಬರುತ್ತದೆಯೇ ವಿನಾ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಅಲ್ಲ.

  • ಇತರ ಆರೋಪಿಗಳು ಘಟನೆಯ ಭಾಗವಾಗಿದ್ದಾರೆ ಎಂದು ತೋರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಇದರಿಂದಾಗಿ ಅವರನ್ನು ಖುಲಾಸೆಗೊಳಿಸಲಾಗಿದೆ.

  • ಘಟನೆ ನಡೆದ ದಿನ ಅಂದರೆ ಸೆಪ್ಟೆಂಬರ್ 14, 2020 ರಂದೇ ಹಾಥ್‌ರಸ್‌ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ವೀಡಿಯೊಗಳನ್ನು ಪತ್ರಕರ್ತರು ತೆಗೆದಿದ್ದಾರೆ., (ಆದರೆ) ಘಟನೆ ನಡೆದ ಐದು ದಿನದ ಬಳಿಕ ಸೆಪ್ಟೆಂಬರ್ 19ರಂದು ಮಹಿಳಾ ಕಾನ್‌ಸ್ಟೆಬಲ್‌ಗೆ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

  • ಸಾಮೂಹಿಕ ಅತ್ಯಚಾರ ನಡೆದಿದ್ದರೆ ಆಕೆ ಎಲ್ಲಾ ನಾಲ್ವರು ಆರೋಪಿಗಳ ಹೆಸರನ್ನು ಪೊಲೀಸರಿಗೆ, ಮಾಧ್ಯಮಗಳಿಗೆ ತಿಳಿಸಬೇಕಿತ್ತು. ಆದರೆ ಘಟನೆ ನಡೆದು  ಐದು ದಿನಗಳ ನಂತರವೂ ಮಹಿಳಾ ಕಾನ್‌ಸ್ಟೆಬಲ್‌ಗೆ ನೀಡಿದ ಹೇಳಿಕೆಯಲ್ಲಿ ಆಕೆ ಒಬ್ಬ ಆರೋಪಿ ಸಂದೀಪನ ಹೆಸರನ್ನು ಮಾತ್ರ ಹೇಳಿದ್ದಾಳೆ. ಸಾಮೂಹಿಕ ಅತ್ಯಚಾರದ ಬಗ್ಗೆ ಉಲ್ಲೇಖಿಸಿಲ್ಲ.

  • ಆದ್ದರಿಂದ, 22.09.2020 ರಂದು ಪೊಲೀಸರ ಎದುರು ಸಂದೀಪ್‌ ಜೊತೆ ನಾಲ್ವರ ಹೆಸರನ್ನು ಹೇಳಿರುವುದು ನಂಬಲರ್ಹ ಎನ್ನಲಾಗದು. ಏಕೆಂದರೆ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಸರಳಾ ದೇವಿ ಅವರು ಸಂತ್ರಸ್ತೆಯ ಹೇಳಿಕೆ ತೆಗೆದುಕೊಂಡ ನಂತರ ಅದೇ ದಿನ ಸಂಜೆ ನಯೀಬ್‌ನ ತಹಶೀಲ್ದಾರ್‌ ಆದ ಮನೀಶ್‌ ಕುಮಾರ್‌ ಅವರು ಆಕೆಯ ಹೇಳಿಕೆ ಪಡೆದಿದ್ದಾರೆ. ಈ ಹೇಳಿಕೆಯಲ್ಲಿ ಅತ್ಯಾಚಾರ ಎಸಗಿರುವುದನ್ನು ಆಕೆ ಉಲ್ಲೇಖಸಿಲ್ಲ.   

  • ಇದಲ್ಲದೆ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗಳಲ್ಲಿ ಯಾವುದೂ ಆಕೆ ಅತ್ಯಾಚಾರಕ್ಕೊಳಗಾಗಿರುವುದನ್ನು ತೋರಿಸಿಲ್ಲ ಎಂಬುದು ಗಮನಾರ್ಹ. ಪ್ರಕರಣಕ್ಕೆ ರಾಜಕೀಯ ಕೋನ ಇರುವುದರಿಂದ ಬದಲಿ ಹೇಳಿಕೆ ನೀಡುವಂತೆ (ಆಕೆಗೆ) ಬೋಧಿಸಲಾಯಿತು.

  • ಘಟನೆ ರಾಜಕೀಯ ಸ್ವರೂಪ ಪಡೆಯುತ್ತಿದ್ದಂತೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಭೇಟಿಯಾಗಲು ಅನೇಕ ಜನ ಬರತೊಡಗಿದರು.

  •  ಆದ್ದರಿಂದ ಸಂತ್ರಸ್ತೆಗೆ ಬೇರೆ ವ್ಯಕ್ತಿಗಳು ಇಲ್ಲವೇ ಕುಟುಂಬ ಸದಸ್ಯರು, ʼಬೋಧಿಸಿದʼ ಬಳಿಕ ಘಟನೆ ನಡೆದ ಎಂಟು ದಿನಗಳ ನಂತರ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಸಂದೀಪ್‌ ಅಲ್ಲದೆ ಇತರರ ಹೆಸರನ್ನು ಉಲ್ಲೇಖಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

  • ಘಟನೆ ನಡೆದ ಎರಡು ಮೂರು ದಿನಗಳ ಬಳಿಕ ಸಂತ್ರಸ್ತೆ ನಾಲ್ವರು ಆರೋಪಿಗಳ ಹೆಸರುಗಳನ್ನು ತಿಳಿಸಿ ಅತ್ಯಾಚಾರ ನಡೆದಿರುವುದನ್ನು ಬಹಿರಂಗಪಡಿಸಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೂ ಸಾಕ್ಷ್ಯ ವಿಶ್ವಾಸಾರ್ಹವಲ್ಲ. ಏಕೆಂದರೆ ಘಟನೆ ನಡೆದ ಐದು ದಿನಗಳ ಬಳಿಕ ಸೆಪ್ಟೆಂಬರ್ 9 ರಂದು, ಮಹಿಳಾ ಕಾನ್‌ಸ್ಟೆಬಲ್ ರಶ್ಮಿ ಸಂತ್ರಸ್ತೆಯ ಹೇಳಿಕೆಯನ್ನು ತೆಗೆದುಕೊಂಡಿದ್ದು ಅದರಲ್ಲಿ ಒಬ್ಬ ಆರೋಪಿ ಸಂದೀಪ್‌ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
State_v_Sandeep.pdf
Preview

Related Stories

No stories found.
Kannada Bar & Bench
kannada.barandbench.com