ಸಂತ್ರಸ್ತೆ ಅಪಹರಣ: ಭವಾನಿ ನಿರೀಕ್ಷಣಾ ಜಾಮೀನಿನ ಷರತ್ತು ಸಡಿಲಿಕೆ ಕೋರಿಕೆ, ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

ಹಿರಿಯ ವಕೀಲ ಸಂದೇಶ್‌ ಚೌಟ "ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ಈ ನ್ಯಾಯಾಲಯವು ವಿಧಿಸಿರುವ ಷರತ್ತಿನಿಂದಾಗಿ ಭವಾನಿ ಮಂಡ್ಯ ಅಥವಾ ಮೈಸೂರಿಗೆ ಪ್ರಯಾಣಿಸಲಾಗುತ್ತಿಲ್ಲ. ತುರ್ತಿನ ಪರಿಸ್ಥಿತಿ ಇರುವುದರಿಂದ ವಿಚಾರಣೆ ನಡೆಸಬೇಕು" ಎಂದು ಕೋರಿದರು.
Bhavani Revanna and Karnataka HC
Bhavani Revanna and Karnataka HC
Published on

ಪುತ್ರ ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿನ ಸಂತ್ರಸ್ತೆ ಅಪಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನಿನ ಷರತ್ತಿನಲ್ಲಿನ ಸಡಿಲಿಕೆ ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಕಾಲಾವಕಾಶ ನೀಡಿದೆ.

ಜೆಡಿಎಸ್‌ ಹಿರಿಯ ನಾಯಕ ಎಚ್‌ ಡಿ ರೇವಣ್ಣ ಪತ್ನಿಯಾಗಿರುವ ಭವಾನಿ ರೇವಣ್ಣ ಅವರು ತಮಗೆ ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿರುವುದರಲ್ಲಿ ವಿನಾಯಿತಿ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice Pradeep Singh Yerur
Justice Pradeep Singh Yerur

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶನೀಡಬೇಕು ಎಂದು ಕೋರಿದರು.

ಭವಾನಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ಈ ನ್ಯಾಯಾಲಯವು ವಿಧಿಸಿರುವ ಷರತ್ತಿನಿಂದಾಗಿ ಭವಾನಿ ಅವರು ಮಂಡ್ಯ ಅಥವಾ ಮೈಸೂರಿಗೆ ಪ್ರಯಾಣಿಸಲಾಗುತ್ತಿಲ್ಲ. ತುರ್ತಿನ ಪರಿಸ್ಥಿತಿ ಇರುವುದರಿಂದ ಅರ್ಜಿ ವಿಚಾರಣೆ ನಡೆಸಬೇಕು” ಎಂದು ಮನವಿ ಮಾಡಿದರು.

ಇದನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲಿ, ಮಾರ್ಚ್‌ 10ರಂದು ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆ ಮುಂದೂಡಿತು.

2024ರ ಜೂನ್‌ 7ರಂದು ಆರು ಷರತ್ತುಗಳನ್ನು ವಿಧಿಸಿ ಹೈಕೋರ್ಟ್‌, ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Also Read
ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು; ಎಸ್‌ಐಟಿ ವಿಚಾರಣೆಗೆ ಇಂದೇ ಹಾಜರಾಗಲು ಹೈಕೋರ್ಟ್‌ ಆದೇಶ

ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ ಆರ್‌ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 364ಎ, 365 ಮತ್ತು 34ರ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ ಭವಾನಿ ಪತಿ ಎಚ್‌ ಡಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಸತೀಶ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಒಟ್ಟು ಒಂಭತ್ತು ಆರೋಪಿಗಳಿದ್ದಾರೆ.

Kannada Bar & Bench
kannada.barandbench.com