ಪತಿಗೆ ಮಗು ಒಪ್ಪಿಸದೆ ಹೈಕೋರ್ಟ್‌, ಸುಪ್ರೀಂ ಆದೇಶಗಳ ಧಿಕ್ಕರಿಸಿದ್ದ ಪತ್ನಿಯ ವಿರುದ್ಧ ಹೈಕೋರ್ಟ್‌ ಗರಂ; ಮಣಿದ ಪತ್ನಿ

ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಪೊಲೀಸರು ಆಕೆ ಉದ್ಯೋಗ ಮಾಡುವ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಮಗುವನ್ನು ಪತಿಯ ಸುಪರ್ದಿಗೆ ನೀಡುವವರೆಗೂ ಆಕೆಯ ವೇತನ ತಡೆಹಿಡಿಯುವಂತೆ ಸೂಚಿಸಬೇಕು ಎಂದು ಆದೇಶಿಸಿದ್ದ ಹೈಕೋರ್ಟ್‌.
Justices Alok Aradhe and Anant Ramanath Hegde
Justices Alok Aradhe and Anant Ramanath Hegde

ನ್ಯಾಯಾಲಯಗಳ ಆದೇಶ ಧಿಕ್ಕರಿಸಿದ್ದಲ್ಲದೆ ಬೆಂಗಳೂರು ಹಾಗೂ ದೆಹಲಿ ಪೊಲೀಸರ ಕೈ ಸಿಗದೆ ಮಗಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ವಿರುದ್ಧ ಸಿವಿಲ್ ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್ ಕಠಿಣ ಆದೇಶ ಹೊರಡಿಸಿದ ನಂತರ ಪೊಲೀಸರ ಕಣ್ಗಾವಲಿನಲ್ಲಿ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿದ ಪ್ರಕರಣವೊಂದು ನಡೆದಿದೆ.

ಪತಿಯನ್ನು ಹೆಣ್ಣು ಮಗುವಿನ ಶಾಶ್ವತ ಪಾಲಕರನ್ನಾಗಿ ನಿಯೋಜಿಸಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದವು. ಆದೇಶ ಪಾಲನೆ ಮಾಡದಿದ್ದಾಗ ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಹಲವು ಬಾರಿ ಹೈಕೋರ್ಟ್ ಆದೇಶಿಸಿತ್ತು. ಅದನ್ನೂ ಬದಿಗೊತ್ತಿದ ಮಹಿಳೆ, ಮಗಳನ್ನು ಕರೆದೊಂಡು ನಾಪತ್ತೆಯಾಗಿದ್ದರು. ಇದರಿಂದ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು. ಆದರೂ ಆಕೆ ಹಾಜರಾಗಲಿಲ್ಲ. ಬೆಂಗಳೂರು ಮತ್ತು ದೆಹಲಿ ಪೊಲೀಸರು ಸಾಕಷ್ಟು ಶೋಧ ನಡೆಸಿದರು ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಸ್ವಯಂ ಪ್ರೇರಿತವಾಗಿ ಸುಪ್ರೀಂ ಕೋರ್ಟ್‌ಗೆ ನೀಡಿದ್ದ ವಾಗ್ದಾನದಿಂದ ಹೈಕೋರ್ಟ್‌ಗೆ ಹಾಜರಾದರು. ಆದರೂ ಪತಿಯ ಸುಪರ್ದಿಗೆ ಮಗಳನ್ನು ಒಪ್ಪಿಸಿರಲಿಲ್ಲ.

ಮಹಿಳೆಯ ಈ ನಡೆ ಕಾನೂನಿನ ಸ್ಪಷ್ಟ ದುರ್ಬಳಕೆಯಾಗಿದ್ದು, ಸಹಿಸಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ ಹೈಕೋರ್ಟ್, ನಗರ ಪೊಲೀಸ್ ಆಯುಕ್ತರು 24 ಗಂಟೆಯಲ್ಲಿ ಮಹಿಳೆಯು ಪುತ್ರಿಯನ್ನು ಪತಿಯ ಸುಪರ್ದಿಗೆ ಒಪ್ಪಿಸುವುದನ್ನು ಖಾತರಿಪಡಿಸಬೇಕು. ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಪೊಲೀಸರು ಆಕೆ ಉದ್ಯೋಗ ನಿರ್ವಹಿಸುವ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಮಗುವನ್ನು ಪತಿಯ ಸುಪರ್ದಿಗೆ ನೀಡುವವರೆಗೂ ಆಕೆಯ ವೇತನ ತಡೆಹಿಡಿಯುವಂತೆ ಸೂಚಿಸಬೇಕು. ಹಾಗೆಯೇ, ಪತಿಯು ಪತ್ನಿ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣ ಹೂಡಬೇಕು ಎಂದು ಕಠಿಣ ಆದೇಶ ಹೊರಡಿಸಿತು.

ಈ ಆದೇಶ ಹೊರಬಿದ್ದ ಕೂಡಲೇ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಳೆ ಮತ್ತೆ ಮಗುವಿನೊಂದಿಗೆ ಪರಾರಿಯಾಗಬಹುದು ಎಂಬ ಆತಂಕದಿಂದ ಪೊಲೀಸರು ಆಕೆಯ ಕಾವಲಿಗೆ ಮುಂದಾದರು. ಹೈಕೋರ್ಟ್ ಆದೇಶದಂತೆ ಮಗುವನ್ನು ಪತಿಯ ವಶಕ್ಕೆ ನೀಡುವಂತೆ ಸೂಚಿಸಿದರು. ನ್ಯಾಯಾಲಯ 24 ಗಂಟೆ ಸಮಯ ನೀಡಿರುವುರಿಂದ ಕೂಡಲೇ ಮಗಳನ್ನು ಪತಿಗೆ ಒಪ್ಪಿಸಲಾರೆ ಎಂದು ಮಹಿಳೆ ಪಟ್ಟುಹಿಡಿದಿದ್ದರು. ಹೀಗಾಗಿ, ಪೊಲೀಸರು ಆಕೆಯ ಜೊತೆಗೇ ಇದ್ದರು. ಅಂತಿಮವಾಗಿ ಕೆಲಹೊತ್ತಿನ ಹೈಡ್ರಾಮದ ನಂತರ ನ್ಯಾಯಾಲಯದ ಆದೇಶದಂತೆ ಪೊಲೀಸರ ಕಣ್ಗಾವಲಿನಲ್ಲಿಯೇ ಮಹಿಳೆ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿದರು ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಗಣೇಶ್ ಮತ್ತು ರೇಖಾ (ಇಬ್ಬರ ಹೆಸರ ಬದಲಿಸಲಾಗಿದೆ) 2011ರಂದು ಮದುವೆಯಾಗಿದ್ದರು. ದಂಪತಿಗೆ ಹೆಣ್ಣು ಮಗು ಜನಿಸಿತ್ತು. ನಂತರ ದಂಪತಿ ಸಂಬಂಧ ಹಳಸಿತ್ತು. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಮಗು ಪತ್ನಿಯ ಸುಪರ್ದಿಯಲ್ಲಿತ್ತು. ತನ್ನನ್ನು ಮಗುವಿನ ಪಾಲಕನಾಗಿ ನಿಯೋಜಿಸುವಂತೆ ಕೋರಿ ಗಣೇಶ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿ, ಒಂದು ತಿಂಗಳಲ್ಲಿ ಪತಿಯ ಸುಪರ್ದಿಗೆ ನೀಡುವಂತೆ ಪತ್ನಿ ರೇಖಾಗೆ 2022ರ ಮಾರ್ಚ್‌ 3ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿಗೆ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪುರಸ್ಕರಿಸಿದ್ದ ಹೈಕೋರ್ಟ್, 2022-23ನೇ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಮಗುವನ್ನು ಪತಿಯ ಸುಪರ್ದಿಗೆ ನೀಡಬೇಕು. ಮಗುವನ್ನು ಭೇಟಿ ಮಾಡಲು ತಾಯಿಗೆ (ಅರ್ಜಿದಾರ ಪತ್ನಿ) ಅವಕಾಶ ಕಲ್ಪಿಸಿ 2023ರ ಮಾರ್ಚ್‌ 3ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ರೇಖಾ ಸಲ್ಲಿಸಿದ್ದ ಮೆಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮಗಳ ಕಡೆಯಿಂದ ಸಲ್ಲಿಸಲಾಗಿದ್ದ ಮತ್ತೊಂದು ಮೇಲ್ಮನವಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಹೀಗಿದ್ದರೂ ಮಗುವನ್ನು ಪತಿಯ ಸುಪರ್ದಿಗೆ ರೇಖಾ ಒಪ್ಪಿಸಿರಲಿಲ್ಲ. ಇದರಿಂದ ಮಗಳನ್ನು ಪತ್ನಿ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಪತಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ವಿಭಾಗೀಯ ಪೀಠವು ರೇಖಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಆಕೆಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿತ್ತು. ಈ ಆದೇಶದ ವಿರುದ್ಧವೂ ರೇಖಾ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಈ ಅರ್ಜಿಯನ್ನೂ ಸುಪ್ರೀಂ ಕೋರ್ಟ್ 2023ರ ಮೇ 16ರಂದು ವಜಾಗೊಳಿಸಿ, ಹೈಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಅದಕ್ಕೆ ಒಪ್ಪಿದ್ದ ರೇಖಾ, ಅಂತಿಮವಾಗಿ ಮಗಳ ಸಹಿತ ಹೈಕೋರ್ಟ್‌ಗೆ ಹಾಜರಾಗಿದ್ದರು.

ಪ್ರಕರಣದ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, 2023ರ ಮಾರ್ಚ್‌ 13ರಂದು ಮಗುವಿನ ಶಾಲಾ ಪರೀಕ್ಷೆ ಪೂರ್ಣಗೊಂಡಿದೆ. ಕೌಟುಂಬಿಕ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮಗುವನ್ನು ಪತ್ನಿಯ ಸುಪರ್ದಿಗೆ ರೇಖಾ ನೀಡಿಲ್ಲ. ಜಾಮೀನು ರಹಿತ ವಾರೆಂಟ್ ಅನ್ನೂ ನಿರ್ಲಕ್ಷಿಸಿದ್ದಾರೆ. ಬೆಂಗಳೂರು ಮತ್ತು ದೆಹಲಿ ಪೊಲೀಸರ ಅವಿರತ ಹುಡುಕಾಟದ ಹೊರತಾಗಿಯೂ ರೇಖಾ ಪತ್ತೆಯಾಗಿಲ್ಲ. ರೇಖಾ ಅವರ ನಡೆ ಕಾನೂನಿನ ದುರ್ಬಳಕೆಯಾಗಿದ್ದು, ಅದನ್ನು ಸಹಿಸಲಾಗದು. ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ಆಕೆಯ ಸುಪರ್ದಿಯಲ್ಲಿಯೇ ಮುಂದುವರಿಸಲು ಸಾಧ್ಯವಿಲ್ಲ. ಆದ್ದರಿಂದ ಬೆಂಗಳೂರು ನಗರ ಪೊಲೀಸರು ಮಗಳನ್ನು 24 ಗಂಟೆಯೊಳಗೆ ಅರ್ಜಿದಾರ ಪತಿಯ ವಶಕ್ಕೆ ಒಪ್ಪಿಸಬೇಕು. ಪತ್ನಿ ವಿರುದ್ಧ ಪತಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆ ಹೂಡಬೇಕು ಎಂದು ನಿರ್ದೇಶಿಸಿ, ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

Related Stories

No stories found.
Kannada Bar & Bench
kannada.barandbench.com