ಮೈಸೂರು ಚಲೊಗೆ ನಕಾರ: ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಒಂದೂವರೆ ತಾಸು ಸಮಾವೇಶ ನಡೆಸಲು ಹೈಕೋರ್ಟ್‌ ಅನುಮತಿ

ಸಭೆಯಲ್ಲಿ ಭಾಗಿಯಾಗುವ ಯಾರೂ ಪ್ರಚೋದನಾಕಾರಿ ಭಾಷಣ ಮಾಡದಂತೆ ಅರ್ಜಿದಾರರು ಖಾತರಿವಹಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆದರೆ ಅರ್ಜಿದಾರರನ್ನು ಹೊಣೆಗಾರರನ್ನಾಗಿಸಲಾಗುವುದು ಎಂಬ ಷರತ್ತು ವಿಧಿಸಿರುವ ನ್ಯಾಯಾಲಯ.
Justice R Devdas, Karnataka High Court
Justice R Devdas, Karnataka High Court
Published on

ಮೈಸೂರಿನ ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ವಿರೋಧಿಸಿ ಗನ್‌ ಹೌಸ್‌ನಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ʼಮೈಸೂರು ಚಲೊʼ ನಡೆಸಲು ಸ್ಪಷ್ಟವಾಗಿ ಅನುಮತಿ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಒಂದೂವರೆ ತಾಸು ಮಾತ್ರ ಸಮಾವೇಶ ನಡೆಸಲು ಅನುಮತಿಸಿದೆ. ಅಲ್ಲದೇ, ಪ್ರಚೋದನಾಕಾರಿ ಭಾಷಣ ಮಾಡದಂತ ಕಟ್ಟಪ್ಪಣೆ ವಿಧಿಸಿದೆ.

ಮೈಸೂರು ಚಲೋಗೆ ನಡೆಸಲು ಅನುಮತಿ ನಿರಾಕರಿಸಿದ್ದ ಮೈಸೂರು ಪೊಲೀಸ್‌ ಆಯುಕ್ತರ ಕ್ರಮ ಪ್ರಶ್ನಿಸಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ವಿಚಾರಣೆನ ನಡೆಸಿತು.

“ಮೈಸೂರಿನ ಫುಟ್‌ಬಾಲ್‌ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಅರ್ಜಿದಾರರು ಸಭೆ/ಸಮಾವೇಶ ನಡೆಸಬಹುದಾಗಿದೆ. ಇದಕ್ಕೆ ಒಂದು ಲಕ್ಷ ಮೌಲ್ಯದ ಬಾಂಡ್‌ ಅನ್ನು ಮೈಸೂರು ಪೊಲೀಸ್‌ ಆಯುಕ್ತರಿಗೆ ಒದಗಿಸಬೇಕು. ಸಮಾವೇಶದಲ್ಲಿ ಭಾಗಿಯಾಗುವ ಯಾರೂ ಪ್ರಚೋದನಾಕಾರಿ ಭಾಷಣ ಮಾಡದಂತೆ ಅರ್ಜಿದಾರರು ಖಾತರಿವಹಿಸಬೇಕು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಅರ್ಜಿದಾರರನ್ನು ಹೊಣೆಗಾರರನ್ನಾಗಿಸಲಾಗುವುದು. ಇಂದು ಮಧ್ಯಾಹ್ನ 3:30ರ ಬಳಿಕ ಒಂದೂವರೆ ತಾಸು ಮಾತ್ರ ಸಭೆ ನಡೆಸಲು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೇ, “ಮೈಸೂರು ಪೊಲೀಸ್‌ ಆಯುಕ್ತರು ಫುಟ್‌ಬಾಲ್‌ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಅಗತ್ಯ ಬಂದೋಬಸ್ತ್‌ ಮಾಡಬೇಕು. ಇಡೀ ಸಭೆಯಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಸೀಮಿತ ಅವಧಿಗೆ ನಿಷೇಧಾಜ್ಞೆ ಹಿಂಪಡೆಯಬೇಕು” ಎಂದು ನ್ಯಾಯಾಲಯವು ನಿರ್ದೇಶಿಸಿ , ಅರ್ಜಿ ಇತ್ಯರ್ಥಪಡಿಸಿತು.

ಇದಕ್ಕೂ ಮುನ್ನ, ಅರ್ಜಿದಾರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಅವರು “ಉದಯಗಿರಿ ಠಾಣೆಯ ಮೇಲೆ ಜಿಹಾದಿ ಮನಸ್ಥಿತಿಯವರು ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಮೈಸೂರಿನ ಗನ್‌ ಹೌಸ್‌ನಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಶಾಂತಿಯುತವಾಗಿ ಮೈಸೂರು ಚಲೋ ನಡೆಲು ಅನುಮತಿಸುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕು ರಕ್ಷಿಸಬೇಕು” ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ “ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಒಂದು ವಾರ ಅಥವಾ 10 ದಿನಗಳ ಬಳಿಕ ಅರ್ಜಿದಾರರು ಸಭೆ/ಮೆರವಣಿಗೆ ನಡೆಸಬಹುದಾಗಿದೆ. ಈಗಾಗಲೇ ಸಭೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದಎರಡು  ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಹಾಗೂ ಅಹಿತರಕರ ಘಟನೆ ನಡೆದರೆ ಅರ್ಜಿದಾರರನ್ನು ಹೊಣೆ ಮಾಡಲಾಗದು. ಹೀಗಾಗಿ, ಅನುಮತಿ ನೀಡಬಾರದು” ಎಂದರು.

ಅರ್ಜಿದಾರರಿಗೆ ಸಭೆ ನಡೆಸಲು ಅನುಮತಿಸುವ ಮತ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ಸಾಕಷ್ಟು ಕಾಲ ಜಿಜ್ಞಾಸೆ ನಡೆಸಿದ ನ್ಯಾಯಾಲಯವು ರಾಜ್ಯ ಸರ್ಕಾರವು ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಸಭೆ ನಡೆಸಲು ಅನುಮತಿಸುವ ಸಂಬಂಧ ಸೂಚನೆ ಪಡೆಯಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ (ಎಎಜಿ) ಭಾನುಪ್ರಕಾಸ್‌ ಅವರಿಗೆ ಸೂಚಿಸಿತ್ತು. ಇದರ ಆಧಾರದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ ಎಎಜಿ ಅವರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರೊಂದಿಗೆ ಸಭೆ ಮಾಡಲು ಅನುಮತಿಸಬಹುದು. ಆದರೆ, ಪರಿಸ್ಥಿತಿ ಕಠಿಣವಾಗಿದೆ ಎಂದರು.

ಇದನ್ನು ಆಲಿಸಿದ ಪೀಠವು ಅರ್ಜಿದಾರರ ನಿರಂತರ ಕೋರಿಕೆಯ ಮೇರೆಗೆ ಸೀಮಿತ ಅವಧಿಗೆ ಸಭೆ/ಸಮಾವೇಶ ನಡೆಸಲು ಷರತ್ತುಗಳನ್ನು ವಿಧಿಸಿ, ಅನುಮತಿಸಿತು.

Kannada Bar & Bench
kannada.barandbench.com