
“ಕೋಮು ದ್ವೇಷ ಭಾಷಣಗಳಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಭಾಗಿಯಾಗಬಾರದು” ಎಂಬ ಷರತ್ತಿಗೆ ಒಳಪಟ್ಟು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರಿಗೆ ನೀಡಲಾಗಿರುವ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಿಸ್ತರಿಸಿದೆ.
ತೆಕ್ಕಾರುವಿನ ಎಸ್ ಬಿ ಇಬ್ರಾಹಿಂ ಸಲ್ಲಿಸಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್ಐಆರ್ ರದ್ದತಿ ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಸರ್ಕಾರದ ವಕೀಲರು ಮತ್ತು ಅರ್ಜಿದಾರರ ವಕೀಲರ ಮನವಿಯ ಮೇರೆಗೆ ಆರೋಪಿಸಲಾದ ಅಪರಾಧಗಳನ್ನು ಮುಂದುವರಿಸಬಾರದು ಎಂಬ ಷರತ್ತಿಗೆ ಒಳಪಟ್ಟು ಹರೀಶ್ ಪೂಂಜಾ ವಿರುದ್ಧದ ಮಧ್ಯಂತರ ಆದೇಶ ವಿಸ್ತರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ದೂರುದಾರ ಎಸ್ ಬಿ ಇಬ್ರಾಹಿಂ ಪರ ವಕೀಲ ಎಸ್ ಬಾಲನ್ ಅವರು “ಮುಸ್ಲಿಮ್ ಸಮುದಾಯವನ್ನು ಪೈಶಾಚಿಕವಾಗಿ ಬಿಂಬಿಸುವ ಕೆಲಸವನ್ನು ಹರೀಶ್ ಪೂಂಜಾ ಮುಂದುವರಿಸಿದ್ದಾರೆ. ಮಧ್ಯಂತರ ಆದೇಶ ಇರುವುದನ್ನು ಬಳಸಿಕೊಂಡು ಹರೀಶ್ ಪೂಂಜಾ ಅವರು ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ. ಅವರ ವಿರುದ್ಧ ಏಳು ಎಫ್ಐಆರ್ ದಾಖಲಾಗಿವೆ. ನ್ಯಾಯಾಲಯವು ಇದನ್ನು ಪರಿಗಣಿಸಬೇಕು” ಎಂದರು.
ಇದನ್ನು ಒಪ್ಪಿದ ನ್ಯಾಯಾಲಯವು “ಮುಂದಿನ ವಿಚಾರಣೆಯವರೆಗೆ ಪೂಂಜಾ ಅವರು ಯಾವುದೇ ತೆರನಾದ ಆರೋಪಿತ ಅಪರಾಧಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಆದೇಶದಲ್ಲಿ ದಾಖಲಿಸಲಾಗುವುದು” ಎಂದಿತು.
2025ರ ಮೇ 22ರಂದು ನ್ಯಾಯಾಲಯವು “ಹೈಕೋರ್ಟ್ನ ಸಮನ್ವಯ ಪೀಠಗಳು ಪೂಂಜಾ ವಿರುದ್ಧ ಬೇರೆ ಪ್ರಕರಣಗಳಿಗೆ ತಡೆ ನೀಡಿರುವುದನ್ನು ಪರಿಗಣಿಸಿ, ಅರ್ಜಿದಾರರ ಕೋರಿಕೆಯಂತೆ ಹಾಲಿ ಪ್ರಕರಣಕ್ಕೆ ತಡೆ ನೀಡುವುದು ಸೂಕ್ತ” ಎಂದು ಆದೇಶಿಸಿತ್ತು.
ಪ್ರಕರಣದ ಹಿನ್ನೆಲೆ: ಇಬ್ರಾಹಿಂ ಉಪ್ಪಿನಂಗಡಿ ನೀಡಿರುವ ದೂರಿನಲ್ಲಿ, ತೆಕ್ಕಾರುವಿನ ಭಟ್ರಬೈಲು ಎಂಬಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಮೇ 3ರಂದು ಹರೀಶ್ ಪೂಂಜಾ ಅವರು ರಾತ್ರಿ 9-9.30ರ ವೇಳೆಗೆ ತುಳು ಭಾಷೆಯಲ್ಲಿ ಮಾತನಾಡಿ “ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್ಲೈಟ್ ಹೊಡೆದಿದ್ದಾರೆ. ಜನರೇಟರ್ನ ಡೀಸೆಲ್ ಕದ್ದಿದ್ದಾರೆ ಎಂಬ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಬ್ರಹ್ಮ ಕಲಶೋತ್ಸವ ಮುಗಿಯುವ ವೇಳೆಗೆ ಕದ್ದಿರುವವರು ಯಾರು ಎಂಬ ಮಾಹಿತಿ ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್ ಹೊಡೆದಿದ್ದಾರೆ. ಅವರಿಗೆ ಆಮಂತ್ರಣ ನೀಡಬಾರದಿತ್ತು. ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದೂಗಳು, ಹಿಂದೂಗಳೇ ಅವರನ್ನು ಸೇರಿಸಬಾರದು. ಪ್ರಸ್ತುತ ತೆಕ್ಕಾರಿನಲ್ಲಿ 1,200 ಮುಸ್ಲಿಮರಿದ್ದು, ನಾವು 150 ಮನೆಯವರು ಇದ್ದೇವೆ. 10 ವರ್ಷ ಕಳೆದರೆ 5 ಸಾವಿರ ಜನರಾಗುತ್ತಾರೆ. ಮುಸ್ಲಿಮರು ಐದು ಸಾವಿರ ಅಲ್ಲ 10 ಸಾವಿರ ಆದರೂ ಅವರನ್ನು ಹೆದರಿಸಿ, ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿ, ದೇವರ ಪೂಜೆ ಮಾಡಿಕೊಂಡ ಬರಬೇಕು" ಎಂದು ಹೇಳಿದ್ದಾರೆ. ಈ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಿಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಿರುವುದಾಗಿ ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಹರೀಶ್ ಪೂಂಜಾ ವಿರುದ್ಧ ಬಿಎನ್ಎಸ್ ಸೆಕ್ಷನ್ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಅಡಿ ಪ್ರಕರಣ ದಾಖಲಿಸಿದ್ದರು.