ಅರ್ಚಕರಿಗೆ ತಸ್ತೀಕ್ ಹಣ ಡಿಬಿಟಿ ಮಾಡುವ ವ್ಯವಸ್ಥೆಗೆ ಆಕ್ಷೇಪ: ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಕೆ ಎಸ್ ಪದ್ಮನಾಭಾಚಾರ್ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ಅರ್ಚಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
CJ Vibhu Bhakru J̤̤.CM Joshi
CJ Vibhu Bhakru J̤̤.CM Joshi
Published on

ರಾಜ್ಯದಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಅರ್ಚಕರಿಗೆ ತಸ್ತೀಕ್ ಹಣ ಪಾವತಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಈ ಹಿಂದೆ ಜಾರಿಯಲ್ಲಿದ್ದ ಸ್ವಯಂ ದೃಢೀಕರಣ ಆಧಾರಿತ ತಸ್ತೀಕ್‌ ಹಣ ಪಾವತಿ ಪದ್ದತಿಯನ್ನು ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಕೆ ಎಸ್ ಪದ್ಮನಾಭಾಚಾರ್ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ಅರ್ಚಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು “ಡಿಬಿಟಿ ವ್ಯವಸ್ಥೆಯಡಿ ತಸ್ತೀಕ್‌ ಹಣ ಪಡೆದುಕೊಳ್ಳಬೇಕಾದರೆ ಹತ್ತಾರು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಆಧಾರ್ ಸೇರಿ ಗುರುತಿನ ದಾಖಲೆಗಳನ್ನು ಸಲ್ಲಿಸಬೇಕು. ಈ ವ್ಯವಸ್ಥೆ ತುಂಬಾ ತಾಂತ್ರಿಕ ಹಾಗೂ ಗೊಂದಲಕಾರಿಯಾಗಿದೆ. ದೇವಸ್ಥಾನದ ಅರ್ಚಕರಿಗೆ ತಂತ್ರಜ್ಞಾನ ಅಷ್ಟಾಗಿ ತಿಳಿದಿರುವುದಿಲ್ಲ. ಹಳ್ಳಿಗಾಡು, ಅರಣ್ಯ ಪ್ರದೇಶದ ಅರ್ಚಕರು ನೆಟ್‌ವರ್ಕ್ ಸಮಸ್ಯೆ ಸಹ ಇರುತ್ತದೆ. ದಾಖಲೆಗಳನ್ನು ಸಲ್ಲಿಸಲು ಅರ್ಚಕರು ಹತ್ತಾರು ಕಿ ಮೀ ಪ್ರಯಾಣಿಸಿ ತಹಶೀಲ್ದಾರ್ ಕಚೇರಿಗೆ ಬರಬೇಕು. ಇದರಿಂದ ದೈನಂದಿನ ಪೂಜಾ ಕೈಂಕರ್ಯಗಳಿಗೆ ತೋಂದರೆ ಆಗುತ್ತದೆ. ಡಿಬಿಟಿ ವ್ಯವಸ್ಥೆಗೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೆ ಪೂರಕವಾಗಿ ವ್ಯವಸ್ಥೆ ತಂದು, ತಿಳುವಳಿಕೆ ನೀಡಬೇಕಾಗಿದೆ. ಆದ್ದರಿಂದ, ತಾತ್ಕಲಿಕವಾಗಿ ಡಿಬಿಟಿ ವ್ಯವಸ್ಥೆ ಸ್ಥಗಿತಗೊಳಿಸಬೇಕು. ಅದರ ಬದಲಿಗೆ ಸ್ವಯಂ ದೃಢೀಕರಣ ಆಧಾರಿತ ತಸ್ತೀಕ್‌ ಹಣ ಪಾವತಿ ವ್ಯವಸ್ಥೆ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು” ಎಂದು ಕೋರಿದರು.

ಕೆಲ ಕಾಲ ವಾದ ಆಲಿಸಿದ ಪೀಠವು ಅರ್ಜಿದಾರರ ಪರ ವಕೀಲರ ವಾದ ಒಪ್ಪಲು ಸಾಧ್ಯವಿಲ್ಲ. ಆರ್ಥಿಕ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ ಉದ್ದೇಶದೊಂದಿಗೆ ಡಿಬಿಟಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಸೋರಿಕೆ ತಡೆದು ಪಾರದರ್ಶಕತೆ ತರುವುದು ಡಿಬಿಟಿ ವ್ಯವಸ್ಥೆಯ ಮುಖ್ಯ ಗುರಿಯಾಗಿದೆ. ಡಿಬಿಟಿ ವ್ಯವಸ್ಥೆಯಿಂದ ಅರ್ಜಿದಾರರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಬರಲಾರದು. ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳ ನೆರವು ಪಡೆದುಕೊಳ್ಳಬಹುದು. ಹೀಗಾಗಿ, ಈ ಅರ್ಜಿ ಆಧರಿಸಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡುವುದಿಲ್ಲ. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ” ಎಂದು ಹೇಳಿತು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಅರ್ಚಕರಿಗೆ ಡಿಬಿಟಿ ಮೂಲಕ ತಸ್ತೀಕ್‌ ಹಣ ಪಾವತಿಸಲು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿ 2024ರ ಫೆಬ್ರುವರಿ 19ರಂದು ಧಾರ್ಮಿಕ ದತ್ತಿ ಆಯುಕ್ತರು ಆದೇಶ ಹೊರಡಿಸಿದ್ದರು. ಅದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅರ್ಹ ಅರ್ಚರಕರಿಗೆ ಗುರುತಿನ ಚೀಟಿ ಹಾಗೂ ನೇಮಕಾತಿ ಪತ್ರಗಳನ್ನು ತ್ವರಿತಗತಿಯಲ್ಲಿ ನೀಡುವ ಸಂಬಂಧ ತಾಲ್ಲೂಕು ಕೇಂದ್ರಗಳಲ್ಲಿರುವ ಮುಜರಾಯಿ ಕಚೇರಿಗಳ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ಅರಣ್ಯ ಪ್ರದೇಶ ಹಾಗೂ ಹಳ್ಳಿಗಾಡು ಪ್ರದೇಶಗಳಲ್ಲಿರುವ ದೇವಸ್ಥಾನಗಳ ಸಮೀಕ್ಷೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com