ಬಾಲಿವುಡ್‌ ನಟ ಕಬೀರ್ ಬೇಡಿ ಆತ್ಮಕಥೆ ನಿರ್ಬಂಧ ಕೋರಿದ್ದ ಹಿರಿಯ ಸಹೋದರನ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಕಬೀರ್ ಬೇಡಿ ಅವರ ʼಸ್ಟೋರಿಸ್ ಐ ಮಸ್ಟ್ ಟೆಲ್; ದಿ ಎಮೋಷನಲ್ ಲೈಫ್ ಆಫ್ ಆನ್ ಆಕ್ಟರ್’ ಪ್ರಕಟಣೆ ನಿರ್ಬಂಧಿಸಲು ನಿರಾಕರಿಸಿದ್ದ ವಿಚಾರಣಾಧೀನ ನ್ಯಾಯಾಲಯದ‌ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್‌.
Kabir Bedi and Karnataka HC
Kabir Bedi and Karnataka HCFB

ಬಾಲಿವುಡ್‌ ನಟ ಕಬೀರ್ ಬೇಡಿ ಅವರ ಆತ್ಮಕಥೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿರುವ ಹಿನ್ನೆಲೆಯಲ್ಲಿ ಆ ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕಬೀರ್ ಬೇಡಿಯ ಹಿರಿಯ ಸಹೋದರ ಟಿ ಆರ್ ಬೇಡಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಕಬೀರ್ ಬೇಡಿ ಅವರ ʼಸ್ಟೋರಿಸ್ ಐ ಮಸ್ಟ್ ಟೆಲ್; ದಿ ಎಮೋಷನಲ್ ಲೈಫ್ ಆಫ್ ಆನ್ ಆಕ್ಟರ್’ ಪ್ರಕಟಣೆ ನಿರ್ಬಂಧಿಸಲು ನಿರಾಕರಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಟಿ ಆರ್ ಬೇಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಮನವಿ ಪರಿಗಣಿಸಲು ಯಾವುದೇ ಆಧಾರವಿಲ್ಲ. ವಿಚಾರಣಾಧೀನ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವುದಕ್ಕೆ ಕಾರಣ ನೀಡಿದೆ. ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಹಾಗೂ ಮನವಿ ಅರ್ಹತೆ ಹೊಂದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ವಿಚಾರಣಾಧೀನ ನ್ಯಾಯಾಲಯ 2022ರ ಸೆಪ್ಟೆಂಬರ್‌ 27ರಂದು ಆದೇಶ ಮಾಡಿದೆ. ಬಳಿಕ 9 ತಿಂಗಳ ನಂತರ ಹೈಕೋರ್ಟ್ ನಲ್ಲ ಮೇಲ್ಮನವಿ ಸಲ್ಲಿಸಲಾಗಿದೆ. 2021ರಲ್ಲಿಯೇ ಪುಸ್ತಕ ಪ್ರಕಟಗೊಂಡು, ಮಾರಾಟವಾಗಿದೆ. ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಕಬೀರ್ ಬೇಡಿ ಅವರ ಕೃತಿಯಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಅವರಿಂದ ವಾರ್ಷಿಕ ಶೇ.24ರ ಬಡ್ಡಿಯಂತೆ ರೂ.1 ಕೋಟಿ ಪರಿಹಾರ ನೀಡಲು ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಕಬೀರ್‌ ಬೇಡಿ ಹಾಗೂ ಅವರ ಪುಸಕ್ತವನ್ನು ಹೊರತರುತ್ತಿರುವ ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ಸ್ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ತಮ್ಮ ವಿರುದ್ಧ ಕೃತಿಯಲ್ಲಿ ದಾಖಲಿಸಿರುವ ಅವಹೇಳನಕಾರಿ ಅಂಶಗಳನ್ನು ತೆಗೆದುಹಾಕುವಂತೆ ಕೃತಿಕಾರರು ಮತ್ತು ಪ್ರಕಾಶಕರಿಗೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

ಕಬೀರ್ ಬೇಡಿ ಅವರು ತಮ್ಮ ಪುಸಕ್ತ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಲಿ ಎಂದು ಸಾಕಷ್ಟು ಸುಳ್ಳು ಅಂಶಗಳನ್ನು ದಾಖಲಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.

ಆದರೆ, ವಿಚಾರಣಾಧೀನ ನ್ಯಾಯಾಲಯವು ಪುಸ್ತಕ ಈಗಾಗಲೇ ಪ್ರಕಟಗೊಂಡು ಸಾಕಷ್ಟು ಸಂಖ್ಯೆಯ ಪ್ರತಿಗಳು ಮಾರಾಟವಾಗಿವೆ. ಈ ಹಂತದಲ್ಲಿ ತಡೆ ನೀಡಲಾಗದು ಎಂದು ಹೇಳಿರುವುದಲ್ಲದೇ, ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾದ ಅವಹೇಳನಕಾರಿ ಅಂಶಗಳು ನಿಜವೇ ಸುಳ್ಳೇ ಎಂಬುದು ತಿಳಿಯಲು ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕಾಗಿದೆ ಎಂದು ಆದೇಶಿಸಿದೆ. ಹೀಗಾಗಿ, ಯಾವುದೇ ಮಧ್ಯಂತರ ಆದೇಶ ನೀಡಲಾಗದು, ಒಂದು ವೇಳೆ ಮಧ್ಯಂತರ ತಡೆ ನೀಡಿದರೆ ಅದೇ ಅಂತಿಮ ಆದೇಶವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Attachment
PDF
R T Bedi Vs Kiran Bedi and others.pdf
Preview
Kannada Bar & Bench
kannada.barandbench.com