ಐದು ದಶಕಗಳ ಬಳಿಕ ಅರ್ಜಿ ಸಲ್ಲಿಕೆಗೆ ಕಿಡಿ; ನಿದ್ದೆಯಿಂದ ಎದ್ದು ಬಂದವರು ನೆರವು ನಿರೀಕ್ಷಿಸಲಾಗದು: ಹೈಕೋರ್ಟ್‌

ಭದ್ರಾ ಮೇಲ್ದಂಡೆ ಯೋಜನೆಗಾಗಿ ದಾವಣಗೆರೆ ಜಿಲ್ಲೆಯ ಗೊಲ್ಳಹಳ್ಳಿ ಗ್ರಾಮದ ಸ್ಥಳಾಂತರಕ್ಕೆ 1962ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 20 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಲಾಗಿತ್ತು.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

“ಐದು ದಶಕಗಳ ಕಾಲ ಗಾಢ ನಿದ್ರೆಯಲ್ಲಿದ್ದು, ಈಗ ದೈವವಾಣಿ ಬಂದಂತೆ ಏಕಾಏಕಿ ನಿದ್ದೆಯಿಂದ ಎದ್ದು ನ್ಯಾಯ ಕೇಳಲು ಬಂದವರಿಗೆ ನೆರವು ನೀಡಲು ನಾವು ಇಲ್ಲಿ ಕೂತಿಲ್ಲ. ಅಂತಹದ್ದನ್ನು ನಮ್ಮಿಂದ ನಿರೀಕ್ಷಿಸುವುದೂ ಬೇಡ” ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅರ್ಜಿದಾರರಿಗೆ ಮೌಖಿಕವಾಗಿ ಚಾಟಿ ಬೀಸಿತು.

ಭದ್ರಾ ಮೇಲ್ದಂಡೆ ಯೋಜನೆಗಾಗಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಹೋಬಳಿಯ ಗೊಲ್ಳಹಳ್ಳಿ ಗ್ರಾಮದ ಸ್ಥಳಾಂತರಕ್ಕೆ 1962ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 20 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಸಂತ್ರಸ್ತ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಗೊಲ್ಲರಹಳ್ಳಿ ಸ್ಥಳಾಂತರಕ್ಕೆ 1962ರಲ್ಲಿ 20 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಕೆಲವು ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಂತ್ರಸ್ತ ಫಲಾನುಭವಿಗಳು ಪುನರ್ವಸತಿ ಪರಿಹಾರದಿಂದ ವಂಚಿತರಾಗಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಅನೇಕ ಮನವಿಗಳನ್ನು ಕೊಟ್ಟಿದ್ದಾರೆ. ಇಲಾಖೆಗಳ ನಡುವೆ ಪತ್ರ ವ್ಯವಹಾರಗಳಷ್ಟೇ ನಡೆದಿವೆ. ನ್ಯಾಯ ಸಿಕ್ಕಿಲ್ಲ. ಹಾಗಾಗಿ, ಈ ಬಗ್ಗೆ 1994ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದಾದ ಬಳಿಕ 2020ರಲ್ಲಿ ಮತ್ತೇ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

ಇದರಿಂದ ಅಸಮಧಾನಗೊಂಡ ಪೀಠವು 19ನೇ ಶತಮಾನ ಕಳೆದು 20ನೇ ಶತಮಾನದ ೨೦ ವರ್ಷಗಳು ಕಳೆದು ಹೋಗಿವೆ. 1962ರಲ್ಲಿ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ, 50 ವರ್ಷ ಗಾಢ ನಿದ್ದೆಯಲ್ಲಿದ್ದ ಅರ್ಜಿದಾರ ಫಲಾನುಭವಿಗಳು, ‘ಈಗ ಕೋರ್ಟ್‌ಗೆ ಹೋಗಲು ಸೂಕ್ತ ಸಮಯ’ ಎಂದು ದೈವವಾಣಿ ಕೇಳಿಸಿಕೊಂಡು ಏಕಾಏಕಿ ನಿದ್ದೆಯಿಂದ ಎದ್ದವರಂತೆ ಈಗ 2023ರಲ್ಲಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಇಂತಹ ಗಾಢ ನಿದ್ದೆಯಲ್ಲಿದ್ದವರಿಗೆ ಹೈಕೋರ್ಟ್ ನೆರವು ನೀಡುತ್ತದೆ ಎಂದು ನಿರೀಕ್ಷೆ ಮಾಡುತ್ತೀರಾ? ಹಾಗೇ ಆಗುವುದಿಲ್ಲ. ನಿದ್ರಾವಸ್ಥೆಯಲ್ಲಿದ್ದವರಿಗೆ ಸಹಾಯ ಮಾಡಲು ಈ ಕೋರ್ಟ್ ಇಲ್ಲ; ನಾವು ಏನಿದ್ದರೂ ಜಾಗೃತ ಸ್ಥಿತಿಯಲ್ಲಿದ್ದವರಿಗೆ ನೆರವು ನೀಡಬಹುದು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವಿಳಂಬವನ್ನು ಮನ್ನಿಸಬಹುದು. ಆದರೆ, ದಶಕಗಳ ವಿಳಂಬವನ್ನು ಒಪ್ಪಲು ಸಾಧ್ಯವಿಲ್ಲ. ಇದೊಂದೇ ಪ್ರಕರಣ ಅಲ್ಲ, ಇಂತಹ ಅನೇಕ ಅರ್ಜಿಗಳು ಬರುತ್ತಿದ್ದು, ಅದರಿಂದ ಸಾಕಾಗಿ ಹೋಗಿದೆ. ನಾವು ತುಂಬಾ ಸಹನೆ ತೋರಿಸುತ್ತಿದ್ದೇವೆ. ಈಗ ದೊಡ್ಡ ಮೊತ್ತದ ದಂಡ ವಿಧಿಸಲು ಆರಂಭಿಸಬೇಕೆನಿಸುತ್ತದೆ. ಪಿಐಎಲ್‌ಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಇಂತಹ ಪಿಎಎಲ್‌ಗಳಿಗೆ ನಮ್ಮ ತೀವ್ರ ಆಕ್ಷೇಪವಿದೆ” ಎಂದು ಮೌಖಿಕವಾಗಿ ಹೇಳಿತು.

ಕೊನೆಗೆ ಅರ್ಜಿ ವಾಪಸ್ ಪಡೆಯವುದಾಗಿ ಅರ್ಜಿದಾರರ ಪರ ವಕೀಲರು ಹೇಳಿರುವುದನ್ನು ಒಪ್ಪಿದ ಪೀಠವು ಅರ್ಜಿದಾರರ ಫಲಾನುಭವಿಗಳು ವೈಯುಕ್ತಿಕವಾಗಿ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.

Related Stories

No stories found.
Kannada Bar & Bench
kannada.barandbench.com