ಪತ್ನಿಗೆ ನೀಡುವ ಜೀವನಾಂಶ ಕಡಿಮೆ ಮಾಡಲು ಕೋರಿದ್ದ ಪತಿ; ₹25 ಲಕ್ಷದಿಂದ ₹40 ಲಕ್ಷಕ್ಕೆ ಹೆಚ್ಚಿಸಿದ ಕರ್ನಾಟಕ ಹೈಕೋರ್ಟ್‌

ಎರಡನೇ ಪುತ್ರನ ವೃತ್ತಿಪರ ಕೋರ್ಸ್ ವ್ಯಾಸಂಗ ಮತ್ತು ಪತ್ನಿಯ ಜೀವನ ನಿರ್ವಹಣೆ ಪರಿಗಣಿಸಿದಾಗ ಜೀವನಾಂಶವನ್ನು ಹೆಚ್ಚಿಸುವುದು ಸೂಕ್ತ ಎಂದಿರುವ ನ್ಯಾಯಾಲಯ.
High Court of Karnataka
High Court of Karnataka

ವಿಚ್ಛೇದಿತ ಪತ್ನಿಯ ಜೀವನ ನಿರ್ವಹಣೆ ಹಾಗೂ ಆಕೆಯ ಸುಪರ್ದಿಯಲ್ಲಿರುವ ಎರಡನೇ ಮಗನ ವೃತ್ತಿಪರ ಕೋರ್ಸ್ ವ್ಯಾಸಂಗದ ವೆಚ್ಚ ಪರಿಗಣಿಸಿ, ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ₹25 ಲಕ್ಷ ಶಾಶ್ವತ ಜೀವನಾಂಶ ಮೊತ್ತವನ್ನು ₹40 ಲಕ್ಷಕ್ಕೆ ಹೆಚ್ಚಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ದಕ್ಷಿಣ ಕನ್ನಡದ ವಿಚ್ಚೇದಿತ ದಂಪತಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರಕರಣದಲ್ಲಿ ಮೇಲ್ಮನವಿದಾರರ ಮೊದಲ ಮಗ ಮುಂಬೈ ಐಐಟಿಯಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ₹26.50 ಲಕ್ಷ ವ್ಯಯಿಸಲಾಗುತ್ತಿದೆ. ಎರಡನೇ ಮಗ ಸದ್ಯ ಪತ್ನಿಯ ಸುಪರ್ದಿಯಲ್ಲಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಮೊದಲನೆ ಮಗನ ವ್ಯಾಸಂಗದ ಸಂಪೂರ್ಣ ವೆಚ್ಚದ ಜವಾಬ್ದಾರಿ ಹೊತ್ತಿರುವಂತೆ ಎರಡನೇ ಮಗನ ವಿದ್ಯಾಭ್ಯಾಸದ ಖರ್ಚನ್ನೂ ತಂದೆಯೇ ಹೊರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಎರಡನೇ ಪುತ್ರನ ವೃತ್ತಿಪರ ಕೋರ್ಸ್ ವ್ಯಾಸಂಗ ಮತ್ತು ಪತ್ನಿಯ ಜೀವನ ನಿರ್ವಹಣೆ ಪರಿಗಣಿಸಿದಾಗ ಜೀವನಾಂಶವನ್ನು ಹೆಚ್ಚಿಸುವುದು ಸೂಕ್ತ. ಅದರಂತೆ ₹40 ಲಕ್ಷ ಜೀವನಾಂಶ ನಿಗದಿಪಡಿಸಿದರೆ, ಎರಡನೇ ಮಗನ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚ ನೋಡಿಕೊಳ್ಳಬಹುದು ಎಂದು ತೀರ್ಮಾನಿಸಿದ ಹೈಕೋರ್ಟ್, ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶದ ಮೊತ್ತವನ್ನು ₹40 ಲಕ್ಷಕ್ಕೆ ಹೆಚ್ಚಿಸಿದೆ. ಆ ಪೈಕಿ ಮೂರು ತಿಂಗಳ ಒಳಗೆ ₹10 ಲಕ್ಷ ಮತ್ತು ಉಳಿದ ₹30 ಲಕ್ಷವನ್ನು ಒಂದು ವರ್ಷದ ಒಳಗೆ ಎರಡು ಕಂತಿನಲ್ಲಿ ಪತ್ನಿಗೆ ಪಾವತಿಸುವಂತೆ ಪತಿಗೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡದವರಾದ ಮೇಲ್ಮನವಿದಾರರು 2003ರಲ್ಲಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ದುಬೈನಲ್ಲಿ ಒಟ್ಟಿಗೆ ಆರು ವರ್ಷ ನೆಲೆಸಿದ್ದರು. ಭಿನ್ನಾಭಿಪ್ರಾಯಗಳಿಂದ ಸಂಬಂಧ ಹಳಸಿದಾಗ 2009ರ ಡಿಸೆಂಬರ್‌ನಲ್ಲಿ ಪತ್ನಿ, ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ದುಬೈ ತೊರೆದು ಮಂಗಳೂರಿನ ತಾಯಿಯ ಮನೆ ಸೇರಿದ್ದರು.

ಪತ್ನಿ-ಮಕ್ಕಳನ್ನು ಮನೆಗೆ ಕರೆತರಲು ಪ್ರಯತ್ನಿಸಿ, ವಿಫಲವಾದ ಪತಿಯು ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿಯು ತನ್ನ ಹಾಗೂ ಮಕ್ಕಳನ್ನು ನಿರ್ಲಕ್ಷ್ಯ ಮಾಡುವುದಲ್ಲದೇ ಅನಗತ್ಯವಾಗಿ ನಿಂದಿಸುತ್ತಿದ್ದರು. ಮದ್ಯ ವ್ಯಸನಿಯಾಗಿದ್ದ ಅವರು ಪರಸ್ತ್ರೀ ವ್ಯಾಮೋಹ ಬೆಳೆಸಿಕೊಂಡಿದ್ದರು. ಪತಿಯ ಕಿರುಕುಳದಿಂದ ಬೇಸತ್ತು ಮಕ್ಕಳೊಂದಿಗೆ ತವರು ಮನೆ ಸೇರಬೇಕಾಯಿತು ಎಂದು ಆರೋಪಿಸಿದ್ದರು.

ವಿಚ್ಛೇದನ ಮಂಜೂರು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ 25 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡುವಂತೆ ಪತಿಗೆ 2015ರ ಜುಲೈ 1ರಂದು ಆದೇಶಿಸಿತ್ತು. ಈ ಮೊತ್ತ ಕಡಿತಗೊಳಿಸುವಂತೆ ಕೋರಿ ಪತಿ ಮತ್ತು ಜೀವನಾಂಶ ಮೊತ್ತ ಹೆಚ್ಚಿಸುವಂತೆ ಪತ್ನಿ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಪತ್ನಿ ಪರ ವಕೀಲರು, ದಂಪತಿ 13 ವರ್ಷದಿಂದ ದೂರವಿದ್ದಾರೆ. ಅವರು ಮತ್ತೆ ಸಹ ಜೀವನ ನಡೆಸಲು ಕಷ್ಟ. ಪತಿಯು ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಉತ್ತಮ ವರಮಾನ ಗಳಿಸುತ್ತಿದ್ದಾರೆ. ಪತಿಯನ್ನು ತೊರೆದು ಬಂದ ಕ್ಷಣದಿಂದ ಮಕ್ಕಳನ್ನು ಪತ್ನಿಯೇ ಪೋಷಿಸುತ್ತಿದ್ದಾರೆ. ಅವರಿಗೆ ಸ್ವತಂತ್ರ ಆದಾಯ ಮೂಲವಿಲ್ಲ. ಆದ್ದರಿಂದ ಶಾಶ್ವತ ಜೀವನಾಂಶ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೋರಿದರು.

ಅಲ್ಲದೆ, ಕೌಟುಂಬಿಕ ನ್ಯಾಯಾಲಯವು 2015ರಲ್ಲಿ ₹25 ಲಕ್ಷ ಜೀವನಾಂಶ ಘೋಷಿಸಿದ್ದರೂ ಅದನ್ನು ಈವರೆಗೂ ಪತಿ ಪಾವತಿಸಿಲ್ಲ. ಸದ್ಯ ಜೀವನ ನಿರ್ವಹಣೆ ವೆಚ್ಚ ಹೆಚ್ಚಿರುವುದರಿಂದ ಜೀವನಾಂಶ ಏರಿಕೆ ಮಾಡಬೇಕು ಎಂದು ಪತ್ನಿ ಪರ ವಕೀಲರು ಕೋರಿದ್ದರು.

ಪತಿಯ ಪರ ವಕೀಲರು, ಮೊದಲ ಮಗ ಮುಂಬೈನ ಐಐಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಪತಿಯೇ ವಹಿಸಿಕೊಂಡಿದ್ದಾರೆ. ಎರಡನೇ ಮಗನ ಶೈಕ್ಷಣಿಕ ವೆಚ್ಚ ಭರಿಸಲು ಸಿದ್ಧವಾಗಿದ್ದಾರೆ. ಆದರೆ ವಿದ್ಯಾವಂತೆಯಾಗಿರುವ ಪತ್ನಿಗೆ ಯಾವುದೇ ಆದಾಯ ಮೂಲವಿಲ್ಲ ಎಂಬುದನ್ನು ಒಪ್ಪಲಾಗದು. ಮೊದಲನೇ ಮಗನ ವಿದ್ಯಾಭ್ಯಾಸಕ್ಕಾಗಿ ಪತಿ ದೊಡ್ಡ ಮಟ್ಟದ ಸಾಲ ಪಡೆದಿದ್ದಾರೆ. ಆದರಿಂದ ಪತ್ನಿಗೆ ಹೆಚ್ಚಿನ ಮೊತ್ತದ ಜೀವನಾಂಶ ನೀಡಲಾಗದು. ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶವನ್ನು ಕಡಿತಗೊಳಿಸಬೇಕು ಎಂದು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com