ಎಂಬಿಬಿಎಸ್‌ ಸೀಟುಗಳಿಗೆ ಕ್ರೀಡಾ ಕೋಟಾದಡಿ ಹೊಸದಾಗಿ ರ‍್ಯಾಂಕ್‌ ಪಟ್ಟಿ ಸಿದ್ಧಪಡಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರೂಪಿಸುವ ರ‍್ಯಾಂಕಿಂಗ್ ಅನ್ವಯ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶವನ್ನು ಖಾತರಿಪಡಿಸಬೇಕು ಎಂದೂ ಕೆಇಎಗೆ ನ್ಯಾಯಾಲಯ ನಿರ್ದೇಶಿಸಿದೆ.
Acting Chief Justice Alok Aradhe and Justice S Vishwajith Shetty, Karnataka High Court
Acting Chief Justice Alok Aradhe and Justice S Vishwajith Shetty, Karnataka High Court

ಎಂಬಿಬಿಎಸ್ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಜ್ಯದ ಕ್ರೀಡಾ ಕೋಟಾದ ರ‍್ಯಾಂಕಿಂಗ್ ಅನ್ನು ಹೊಸದಾಗಿ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಗೆ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ನಿರ್ದೇಶಿಸಿದೆ.

ಬೆಂಗಳೂರಿನ 18 ವರ್ಷದ ಡೈವಿಂಗ್ ಚಾಂಪಿಯನ್ ಅದಿತಿ ದಿನೇಶ್‌ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಪೀಠವು ಮಾನ್ಯ ಮಾಡಿದೆ. ಮೂವರು ಚೆಸ್ ಆಟಗಾರರಾದ ಸಾತ್ವಿಕ್ ಶಿವಾನಂದ್, ಎಸ್.ಆರ್.ಪ್ರತಿಮಾ ಮತ್ತು ಖುಷಿ ಎಂ.ಹೊಂಬಾಳ್ ಅವರಿಗೆ ಕ್ರೀಡಾಕೋಟಾದಲ್ಲಿ ಪ್ರವೇಶ ನೀಡಿರುವ ಕ್ರಮವನ್ನು ಪ್ರಶ್ನಿಸಿ ಎಂಬಿಬಿಎಸ್ ಸೀಟು ಸಿಗದೆ ಬಿಡಿಎಸ್ ಕೋರ್ಸ್ ಸೇರಿದ್ದ ಅರ್ಜಿದಾರೆ ಅಭ್ಯರ್ಥಿ ಅದಿತಿ ಅರ್ಜಿ ಸಲ್ಲಿಸಿದ್ದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರೂಪಿಸುವ ರ‍್ಯಾಂಕಿಂಗ್ ಅನ್ವಯ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶವನ್ನು ಖಾತರಿಪಡಿಸಬೇಕು ಎಂದೂ ಕೆಇಎಗೆ ನ್ಯಾಯಾಲಯ ನಿರ್ದೇಶಿಸಿದೆ.

‘‘ಕ್ರೀಡಾ ಕೋಟಾದಡಿ ಅರ್ಹತಾ ಮಾನದಂಡ ಅತ್ಯಂತ ಸ್ಪಷ್ಟವಾಗಿದೆ, ಅಭ್ಯರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ ಜಯಿಸಿರಬೇಕು ಎಂದು ಹೇಳಲಾಗಿದೆ. ಅದರಂತೆ ಅರ್ಜಿದಾರರು ಭಾರತೀಯ ಈಜು ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್‌ಗಳಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ, ಆ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಪ್ರತಿವಾದಿಗಳಾದ ಮೂವರು ಆಟಗಾರರು ಪದಕಗಳನ್ನು ಗೆದ್ದ ಬಗ್ಗೆ ಯಾವುದೇ ದಾಖಲೆ ಇಲ್ಲ’’ ಎಂದು ಹೇಳಿದೆ.

“ಪ್ರತಿವಾದಿ ಮೂವರು ಆಟಗಾರರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿರಬಹುದು. ಆದರೆ, ಅವರು ಪದಕಗಳನ್ನು ಜಯಿಸಿಲ್ಲ. ಹೀಗಾಗಿ ಅವರು ಕ್ರೀಡಾ ಕೋಟಾದ ಅರ್ಹ ಮಾನದಂಡದ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಅಂಶವನ್ನು ಪರಿಗಣಿಸುವಲ್ಲಿ ಸಮಿತಿ ವಿಫಲವಾಗಿದೆ. ಮೊದಲು ಪ್ರಕಟಿಸಿದ್ದ ಪಟ್ಟಿಯಲ್ಲಿ ಅರ್ಜಿದಾರರು 10ನೇ ಶ್ರೇಯಾಂಕದಲ್ಲಿದ್ದರು, ಆನಂತರ ಪ್ರತಿವಾದಿಗಳಿದ್ದರು. ಆದರೆ ಆನಂತರ ಪರಿಷ್ಕೃತ ರ‍್ಯಾಂಕಿಂಗ್‌ನಲ್ಲಿ ಅರ್ಜಿದಾರರು 16ನೇ ಸ್ಥಾನದಲ್ಲಿದ್ದರು, ಅದಕ್ಕೂ ಮೊದಲಿನ ರ‍್ಯಾಂಕಿಂಗ್‌ನಲ್ಲಿ ಮೂವರು ಆಟಗಾರರಿದ್ದಾರೆ. ಇದು ಸರಿಯಲ್ಲ. ಹೀಗಾಗಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರ‍್ಯಾಂಕಿಂಗ್‌ ನಿಗದಿಪಡಿಸಿ, ಕೆಇಎಗೆ ಸಲ್ಲಿಕೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಂ ಪಿ ಶ್ರೀಕಾಂತ್ ಅವರು “ಅಧಿಕಾರಿಗಳು ಚೆಸ್ ಅನ್ನು ಅಂತಾರಾಷ್ಟ್ರೀಯ ಕ್ರೀಡೆ ಎಂದು ಪರಿಗಣಿಸಿ ಮೂವರು ಆಟಗಾರರ ಹೆಸರನ್ನು ಅರ್ಜಿದಾರರಿಗಿಂತ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೇಲೆ ಸೇರಿಸಿ ಅವರಿಗೆ ಪ್ರವೇಶ ಸಿಗುವಂತೆ ಮಾಡಿದ್ದಾರೆ. ಇಲ್ಲಿ ಅರ್ಜಿದಾರರಿಗೆ ಕನಿಷ್ಠ ತಮ್ಮ ಅಹವಾಲು ಸಲ್ಲಿಸಲೂ ಸಹ ಅವಕಾಶ ನೀಡಿಲ್ಲ” ಎಂದರು.

“ಅರ್ಜಿದಾರರು ಹಲವು ರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ, ಆದರೆ, ಉಳಿದ ಮೂವರು ಚೆಸ್ ಆಟಗಾರರು ಪದಕ ಗೆದ್ದಿಲ್ಲ. ಆದರೂ ಅವರಿಗೆ ರ‍್ಯಾಂಕಿಂಗ್ ನೀಡಿ ಸೀಟು ಲಭ್ಯವಾಗುವಂತೆ ಮಾಡಿರುವುದು ಅನ್ಯಾಯದ ಕ್ರಮ” ಎಂದು ವಾದಿಸಿದ್ದರು. ಸರ್ಕಾರದ ಪರ ವಕೀಲರು “ಅದಿತಿ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ತಡವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ” ಎಂದು ವಾದಿಸಿದ್ದರು. 

Related Stories

No stories found.
Kannada Bar & Bench
kannada.barandbench.com