ಲಲಿತ ಪ್ರಬಂಧ ಪ್ರಶಸ್ತಿ: ಗೋಗೇರಿಯವರ ‘ಮಹಾಮಾತೆ ಮಲ್ಲಮ್ಮ & ಇತರೆ ಪ್ರಬಂಧಗಳು’ ಕೃತಿ ಆಯ್ಕೆ ರದ್ದು ಮಾಡಿದ ಹೈಕೋರ್ಟ್‌

ಕೊಡಗಿನ ಸಾಹಿತಿ ಭಾರದ್ವಾಜ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
Karnataka HC
Karnataka HC

ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಲಲಿತ ಪ್ರಬಂಧ ಪ್ರಶಸ್ತಿಗೆ ಹುಬ್ಬಳ್ಳಿಯ ಸಾಹಿತಿ ಎಂ ಡಿ ಗೋಗೇರಿ ಅವರ ‘ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಕೃತಿಯನ್ನು ಆಯ್ಕೆ ಮಾಡಿರುವುದನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಕೊಡಗಿನ ಸಾಹಿತಿ ಭಾರದ್ವಾಜ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಲಲಿತ ಪ್ರಬಂಧ ಪ್ರಕಾರದ ಪ್ರಶಸ್ತಿಗೆ ಹೊಸದಾಗಿ ಪುಸಕ್ತ ಆಯ್ಕೆ ಮಾಡಬೇಕು. ಅದಕ್ಕಾಗಿ ಅಕಾಡೆಮಿಯ ಬೈಲಾ 93 (ಉ) 12ನೇ ಷರತ್ತು ಅನ್ವಯ ಉಪ ಸಮಿತಿಯನ್ನು ಪುನರ್ ರಚಿಸಬೇಕು. ಆ ಉಪ ಸಮಿತಿಯು ಭಾರದ್ವಾಜ ಮತ್ತು ಗೋಗೇರಿ ಅವರ ಪುಸ್ತಕಗಳನ್ನು ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಈ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನಲ್ಲಿ ಲಲಿತಾ ಪ್ರಬಂಧ ಪ್ರಕಾರದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿತ್ತು. ಕೊಡಗಿನ ಸಾಹಿತಿ ಭಾರದ್ವಾಜ ಅವರ ‘ಕೌತುಕವಲ್ಲದ ಕ್ಷಣಗಳು’ ಮತ್ತು ಗೋಗೇರಿ ಅವರ ‘ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಪುಸ್ತಕಗಳು ಪ್ರಶಸ್ತಿಗೆ ಸಲ್ಲಿಕೆಯಾಗಿದ್ದವು. ಈ ಎರಡೂ ಪುಸ್ತಕಗಳಿಗೆ ತಲಾ 56 ಅಂಕಗಳು ಬಂದಿದ್ದವು. ಅದರಂತೆ ಪುಸ್ತಕಗಳನ್ನು ಅಕಾಡೆಮಿ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಉಪ ಸಮಿತಿಗೆ ಪುಸ್ತಕ ಕಳುಹಿಸಿಕೊಡಲಾಗಿತ್ತು.

ಉಪ ಸಮಿತಿಯು ಮೌಲ್ಯಮಾಪನ ಮಾಡಿ ಶಿಫಾರಸ್ಸು ಮಾಡುವ ಪುಸ್ತಕಕ್ಕೆ ಪ್ರಶಸ್ತಿಗೆ ನೀಡಲಾಗುತ್ತದೆ. ಅದರಂತೆ ಉಪ ಸಮಿತಿಯು ಗೋಗೇರಿ ಅವರ ‘ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು’ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಅದನ್ನು ಭಾರದ್ವಾಜ ಪ್ರಶ್ನಿಸಿ, ಗೋಗೇರಿ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಮಿತಿ ನಿಯಮ ಪಾಲಿಸಿಲ್ಲ ಎಂದು ಆಕ್ಷೇಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಿಯಮದ ಪ್ರಕಾರ ಉಪ ಸಮಿತಿಯು ಸಭೆ ಸೇರಿ ಚರ್ಚಿಸಿ ಪುಸ್ತಕವನ್ನು ಪ್ರಶಸ್ತಿಗೆ ಶಿಫಾರಸು ಮಾಡಬೇಕು. ಅದಕ್ಕೆ ಸಭೆಯ ನಡಾವಳಿ ಮತ್ತು ಆಯ್ಕೆಗೆ ಸಕಾರಣ ನಮೂದಿಸಬೇಕು. ಈ ಪ್ರಕರಣದಲ್ಲಿ ಉಪ ಸಮಿತಿಯು ಗೋಗೇರಿ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಸಭೆ ನಡೆಸಿ ಅದರ ನಡಾವಳಿ ನಮೂದಿಸಿರುವ ಬಗ್ಗೆ ಯಾವೊಂದು ದಾಖಲೆಯಿಂದ ಸ್ಪಷ್ಟವಾಗುತ್ತಿಲ್ಲ. ಉಪ ಸಮಿತಿ ತನ್ನ ಅಭಿಪ್ರಾಯವನ್ನು ದಾಖಲಿಸದಿದ್ದರೂ ಸಭೆಯ ನಡಾವಳಿಯನ್ನಾದರೂ ನಮೂದಿಸಬೇಕು. ನಡಾವಳಿ ದಾಖಲಿಸದ್ದರಿಂದ ಗೋಗೇರಿ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ಉಪ ಸಮಿತಿ ಸಭೆ ನಡೆಸಿಲ್ಲ ಎಂಬ ನಿರ್ಧಾರಕ್ಕೆ ನ್ಯಾಯಾಲಯ ಬರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Related Stories

No stories found.
Kannada Bar & Bench
kannada.barandbench.com