ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅವಧಿ ವಿಸ್ತರಣೆ ಕೋರಿಕೆ ತಿರಸ್ಕರಿಸಿದ ಹೈಕೋರ್ಟ್‌

ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಿದ ದಿನದಿಂದ ಸಮಿತಿ ಅವಧಿ ಪ್ರಾರಂಭವಾಗಲಿದೆ ಎಂದು ಅರ್ಥೈಸಲಾಗದು. ಸಮಿತಿ ರಚಿಸಿದ ಪ್ರಾರಂಭದಿಂದಲೂ ಅವರು ಸದಸ್ಯರಾಗಿರುತ್ತಾರೆ. ಹೀಗಾಗಿ ಅರ್ಜಿದಾರರ ವಾದ ಒಪ್ಪಲಾಗದು ಎಂದ ಪೀಠ.
High Court of Karnataka
High Court of Karnataka

ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಅಧಿಕಾರವಾಧಿ ಪೂರೈಸಿದ್ದರೂ, ಕೊನೆಯ ಘಳಿಗೆಯಲ್ಲಿ ಸಮಿತಿ ಅವಧಿ ವಿಸ್ತರಿಸುವಂತೆ ಮಾಡಿರುವ  ಮನವಿಗೆ ಸಮ್ಮತಿಸಲಾಗದು ಎಂದಿರುವ ಕರ್ನಾಟಕ ಹೈಕೋರ್ಟ್, ಈ ಸಂಬಂಧ ಸಮಿತಿಯ ಆರು ಮಂದಿ ಸದಸ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದೆ.

ದೇವಾಲಯದ ಆಡಳಿತ ಮಂಡಳಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಮಿತಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಸಮಿತಿ ರಚನೆ ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಮೂರು ವರ್ಷಗಳ ಅವಧಿಯನ್ನು  ಒಪ್ಪಿಕೊಂಡು, ಅಧಿಕಾರ ಅನುಭವಿಸಿದ್ದಾರೆ. ಅವಧಿ ಕೊನೆಗೊಳ್ಳುವ ಸಂದರ್ಭದಲ್ಲಿ ಸಮಿತಿಯ ಕಾಲಾವಧಿ ವಿಸ್ತರಿಸುವ ಕೋರಿಕೆ ಒಪ್ಪಲಾಗದು ಎಂದು ಪೀಠ ತಿಳಿಸಿದೆ.

ಸಮಿತಿ ರಚನೆ ಮಾಡಿ ಆದೇಶ ಮಾಡಿರುವುದಕ್ಕೆ ಬದಲಾಗಿ ಸಮಿತಿ ಮೊದಲ ಸಭೆ ನಡೆಸಿದ ದಿನದಿಂದ ಮೂರು ವರ್ಷಗಳ ಅವಧಿಗೆ ಇರಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಇದಕ್ಕೆ ಸಮ್ಮತಿಸುವುದು ಧಾರ್ಮಿಕ ದತ್ತಿ ಕಾಯಿದೆಗೆ ವಿರುದ್ಧ. ಸಮಿತಿ ರಚಿಸಿ ಆದೇಶ ಮಾಡಿದ ದಿನದಿಂದ ಅವಧಿ ಪ್ರಾರಂಭವಾಗಿದ್ದು, ಮೂರು ವರ್ಷಗಳಿಗೆ ಅಂತ್ಯಗೊಳ್ಳಲಿದೆ ಎಂದು ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಪೀಠ ವಿವರಿಸಿದೆ.

ಸಮಿತಿಯ ಸದಸ್ಯರು ಸಭೆ ಕರೆಯುವುದು ಎಂದು ಕಾಯಿದೆಯಲ್ಲಿ ತಿಳಿಸಲಾಗಿದೆ. ಆದರೆ, ಇದನ್ನು ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಿದ ದಿನದಿಂದ ಸಮಿತಿ ಅವಧಿ ಪ್ರಾರಂಭವಾಗಲಿದೆ ಎಂದು ಅರ್ಥೈಸಲಾಗದು. ಸಮಿತಿ ರಚಿಸಿದ ಪ್ರಾರಂಭದಿಂದಲೂ ಅವರು ಸದಸ್ಯರಾಗಿರುತ್ತಾರೆ. ಹೀಗಾಗಿ ಅರ್ಜಿದಾರರ ವಾದ ಒಪ್ಪಲಾಗದು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಧಾಮಿಕ ದತ್ತಿ ಕಾಯಿದೆ ಸೆಕ್ಷನ್ 25ರ ಪ್ರಕಾರ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಮಂಡಳಿ ಸಮಿತಿಯನ್ನು 2020ರ ಅಕ್ಟೋಬರ್ 27ರಂದು ಕೆಲವು ಷರತ್ತುಗಳೊಂದಿಗೆ ಮೂರು ವರ್ಷಗಳ ಅವಧಿಗೆ ರಚನೆ ಮಾಡಿ ಆದೇಶಿಸಲಾಗಿತ್ತು. ಇದರ ಪ್ರಕಾರ ಅರ್ಜಿದಾರರು ಅಧಿಕಾರ ಸ್ವೀಕರಿಸಿ ಮೂರು ವರ್ಷ ಪೂರ್ಣಗೊಳಿಸಿದ್ದರು.

ಈ ನಡುವೆ ಸಮಿತಿ ನಡೆಸಿದ ಮೊದಲ ಸಭೆಯಿಂದ ಸಮಿತಿ ಕಾಲಾವಧಿ ಪ್ರಾರಂಭವಾಗಲಿದೆ. ಆದ್ದರಿಂದ, ಸಮಿತಿ ಸಭೆ ನಡೆದ 2021ರ ಏಪ್ರಿಲ್ 26ರ ದಿನವನ್ನು ಪರಿಗಣಿಸಿ ಮೂರು ವರ್ಷಗಳ ಅವಧಿಗೆ ಅಂದರೆ, 2024ರ ಏಪ್ರಿಲ್ 26ರ ವರೆಗೂ ಕಾಲಾವಧಿ ಇರಲಿದೆ. 2020ರ ಅಕ್ಟೋಬರ್ 27ರಂದು ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚನೆ ಮಾಡಿ ಆದೇಶಿಸಿರುವ ಧಾರ್ಮಿಕ ದತ್ತಿ ಇಲಾಖೆ ಆದೇಶ ರದ್ದುಪಡಿಸಬೇಕು ಅಥವಾ ಮಾರ್ಪಡಿಸಬೇಕು  ಎಂದು ಕೋರಿ  ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಅತುಲ್ ಕುಮಾರ್ ಶೆಟ್ಟಿ, ರತ್ನಾ, ಎಚ್.ಜಯನಂದ, ಕೆ.ರಾಮಚಂದ್ರ ಅಡಿಗಾ, ಗೋಪಾಲಕೃಷ್ಣ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com