ಭುವನಹಳ್ಳಿ ಅರಣ್ಯ ಪ್ರದೇಶಕ್ಕೆ ಸೇರಿದ 8 ಎಕರೆ ಜಮೀನಿನ ಮೇಲಿನ ಅಧಿಕಾರ ಬೇರೆಯವರಿಗೆ ಘೋಷಿಸದಂತೆ ಹೈಕೋರ್ಟ್‌ ನಿರ್ಬಂಧ

ಪ್ರತಿವಾದಿಗಳು ಮತ್ತು ಅವರ ಕಡೆಯವರು ವ್ಯಾಜ್ಯ ಪ್ರದೇಶದಲ್ಲಿ ಲೇಔಟ್‌ ನಿರ್ಮಾಣ ಮಾಡಿದ್ದು, ಅರಣ್ಯ ಪ್ರದೇಶದ ಮೇಲೆ ಮೂರನೇ ವ್ಯಕ್ತಿ ಸ್ವತ್ತಿನ ಅಧಿಕಾರ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸರ್ಕಾರ ಆಕ್ಷೇಪಿಸಿದೆ.
Karnataka High Court
Karnataka High Court

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಭುವನಹಳ್ಳಿ ಅರಣ್ಯ ಪ್ರದೇಶಕ್ಕೆ ಸೇರಿದೆ ಎನ್ನಲಾದ 8 ಎಕರೆ 35 ಗುಂಟೆ ಜಮೀನಿನ ಮೇಲಿನ ಅಧಿಕಾರವನ್ನು ಯಾವುದೇ ಮೂರನೇ ವ್ಯಕ್ತಿಗೆ ಘೋಷಿಸದಂತೆ ನಿರ್ಬಂಧ ಹೇರಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೇವನಹಳ್ಳಿ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌ ಟಿ ನರೇಂದ್ರ ಪ್ರಸಾದ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆಗೆ ಅಂಗೀಕರಿಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ಎಂ.ರೋಣ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯಲ್ಲಿ ಚಿಕ್ಕಸಣ್ಣೆ ಮತ್ತು ಭುವನಹಳ್ಳಿಯನ್ನು ಒಳಗೊಂಡ 59 ಎಕರೆ 8 ಗುಂಟೆ ಪ್ರದೇಶವನ್ನು ರಾಜ್ಯದ ಅರಣ್ಯ ಪ್ರದೇಶ ಎಂದು ಮೈಸೂರು ಅರಣ್ಯ ನಿಯಂತ್ರಣ ಕಾಯಿದೆಯ ಸೆಕ್ಷನ್‌ 17ರ ಅನುಸಾರ 1921ರ ಜನವರಿ 8ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಭುವನಹಳ್ಳಿ ರಾಜ್ಯ ಅರಣ್ಯ ಬ್ಲಾಕ್‌ನಲ್ಲಿರುವ ಚಿಕ್ಕಸಣ್ಣೆಯ ಸರ್ವೇ ನಂಬರ್ 69ರಲ್ಲಿ (ಹಳೆಯ ಸರ್ವೇ ನಂಬರ್ 67) ವ್ಯಾಜ್ಯಕ್ಕೆ ಒಳಪಟ್ಟಿರುವ 8 ಎಕರೆ 35 ಗುಂಟೆ ಜಮೀನು ಕೂಡಾ ಸೇರಿದೆ. ಇದರಲ್ಲಿ ಮೇಲ್ಮನವಿಯ ಪ್ರತಿವಾದಿಗಳು ಮತ್ತು ಅವರ ಕಡೆಯವರು ವ್ಯಾಜ್ಯ ಪ್ರದೇಶದಲ್ಲಿ ಲೇಔಟ್‌ ನಿರ್ಮಾಣ ಮಾಡಿದ್ದು, ಅರಣ್ಯ ಪ್ರದೇಶದ ಮೇಲೆ ಮೂರನೇ ವ್ಯಕ್ತಿ ಸ್ವತ್ತಿನ ಅಧಿಕಾರ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಇದರಂತೆಯೇ ಸುತ್ತಲಿನ ಇನ್ನುಳಿದ ರಾಜ್ಯ ಅರಣ್ಯ ಪ್ರದೇಶದಲ್ಲೂ ಮೂರನೇ ವ್ಯಕ್ತಿಗಳು ಪೋಡಿ ಮಾಡಿಕೊಂಡು ಲೇಔಟ್‌ ನಿರ್ಮಿಸಿದ್ದು ಅರಣ್ಯ ಪ್ರದೇಶವೇ ಇಲ್ಲದಂತಾಗಿದೆ ಮತ್ತು ಇಲ್ಲೀಗ ಕೇವಲ 8 ಎಕರೆ 25 ಗುಂಟೆ ಮಾತ್ರವೇ ಅರಣ್ಯ ಪ್ರದೇಶವಾಗಿ ಉಳಿದಿದೆ ಎಂದು ವಿವರಿಸಿದರು.

ಸರ್ಕಾರವು ಅರಣ್ಯ ಪ್ರದೇಶದ ಒತ್ತುವರಿಯನ್ನು ಕಾಲಕಾಲಕ್ಕೆ ಗುರುತಿಸಿ ತಡೆಯುತ್ತಿರಬೇಕು ಮ‌ತ್ತು ದಾಖಲೆಗಳನ್ನು ಜತನವಾಗಿ ಕಾಪಾಡುತ್ತಿರಬೇಕು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ವಲಯ ಅರಣ್ಯ ಅಧಿಕಾರಿ ಯು ಜೆ ಪವಿತ್ರಾ ಅವರ ಶ್ರಮ ವಹಿಸಿ ರಾಜ್ಯ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜತನದಿಂದ ಕ್ರೋಢೀಕರಿಸಿದ್ದಾರೆ. ಈ ಕ್ರೋಢೀಕೃತ ದಾಖಲೆಗಳನ್ನು ಪೀಠ ಪರಿಶೀಲಿಸಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠವು ಪ್ರತಿವಾದಿಯಾಗಿರುವ ಚಿಕ್ಕಸಣ್ಣೆ ಗ್ರಾಮದ ಸಗಟು ಹಣ್ಣಿನ ವ್ಯಾಪಾರಿ ಎಂ ಎ ಮೊಹಮದ್ ಸನಾವುಲ್ಲಾ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಸಣ್ಣೆ ಗ್ರಾಮ ವ್ಯಾಪ್ತಿಯಲ್ಲಿನ ಭುವನಹಳ್ಳಿಯ ಅಧಿಸೂಚಿತ ಅರಣ್ಯ ಪ್ರದೇಶದ ಕೆಲ ಭಾಗವನ್ನು 1936ರ ಸೆಪ್ಟೆಂಬರ್ 30ರಂದು ಮೈಸೂರು ಭೂ ಕಂದಾಯ ಸಂಹಿತೆ ಅನುಸಾರ ಹರಾಜು ಹಾಕಿದಾಗ ಸುಬ್ಬರಾಯ ಮೊದಲಿಯಾರ್ ಎಂಬುವರು  43 ಎಕರೆ 24 ಗುಂಟೆ ಜಮೀನನ್ನು ಖರೀದಿಸಿದ್ದರು. ಸುಬ್ಬರಾಯ ಅವರಿಗೆ 1936 ನವೆಂಬರ್‌ 19 ರಂದು ಮಾರಾಟ ಪ್ರಮಾಣ ಪತ್ರ ನೀಡಲಾಗಿದೆ. ಈ ಸ್ವತ್ತನ್ನು 1977ರಲ್ಲಿ ಸದ್ಯ ಪ್ರತಿವಾದಿಯಾಗಿರುವ ಕಡೆಯವರು ಖರೀದಿಸಿದ್ದರಲ್ಲದೆ, ಈ ಕುರಿತಂತೆ ಸಿವಿಲ್‌ ವ್ಯಾಜ್ಯಗಳು ಉದ್ಭವಿಸಿ ಈಗ ಎರಡನೇ ಸುತ್ತಿನ ವ್ಯಾಜ್ಯ ನಡೆಯುತ್ತಿದೆ.

ಸ್ವತ್ತಿಗೆ ಸಂಬಂಧಿಸಿದ ಅಸಲು ದಾವೆಯಲ್ಲಿ ದೇವನಹಳ್ಳಿಯ ಪ್ರಧಾನ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 2023ರ ಡಿಸೆಂಬರ್ 15ರಂದು ಆದೇಶ ನೀಡಿದ್ದು, ಪ್ರತಿವಾದಿಗಳಿಗೆ ಸ್ವತ್ತಿನ ಅಧಿಕಾರ ಘೋಷಣೆ ಮಾಡುವಂತೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿರುವ ರಾಜ್ಯ ಸರ್ಕಾರವು ‘ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಕಂದಾಯ ಇಲಾಖೆ ಹರಾಜು ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮೇಲ್ಮನವಿ ಸಲ್ಲಿಸಿದೆ.

Kannada Bar & Bench
kannada.barandbench.com