ಬೆಳಗಾವಿ ಹಿಂದೂ ಸಮ್ಮೇಳನ: ಸೂಲಿಬೆಲೆ, ಹಾರಿಕಾ ಭಾಗವಹಿಸಲು ಅನುಮತಿ ನಿರಾಕರಿಸಿದ್ದ ಪೊಲೀಸ್‌ ನೋಟಿಸ್‌ ರದ್ದು

“ಸೂಲಿಬೆಲೆ ಮತ್ತು ಹಾರಿಕಾ ಉಂಟು ಮಾಡಬಹುದಾದ ಸಮಸ್ಯೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲದೆ, ಅವರ ವಿರುದ್ಧ ಕೆಲವು ಪ್ರಕರಣ ದಾಖಲಾಗಿವೆ ಎಂದು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಲು ಸಾಧ್ಯವಿಲ್ಲ” ಎಂದ ನ್ಯಾಯಾಲಯ.
ಬೆಳಗಾವಿ ಹಿಂದೂ ಸಮ್ಮೇಳನ: ಸೂಲಿಬೆಲೆ, ಹಾರಿಕಾ ಭಾಗವಹಿಸಲು ಅನುಮತಿ ನಿರಾಕರಿಸಿದ್ದ ಪೊಲೀಸ್‌ ನೋಟಿಸ್‌ ರದ್ದು
Published on

ಬೆಳಗಾವಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಫೆಬ್ರವರಿ 6 ಮತ್ತು 8ರಂದು ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಲು ಚಕ್ರವರ್ತಿ ಸೂಲಿಬೆಲೆ ಮತ್ತು ಹಾರಿಕಾ ಮಂಜುನಾಥ್‌ಗೆ ನಿರ್ಬಂಧಿಸಿದ್ದ ಪೊಲೀಸ್‌ ನೋಟಿಸ್‌ಗಳನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಬದಿಗೆ ಸರಿಸಿದೆ.

ಅನುಮತಿ ನಿರಾಕರಿಸಿ 22.01.2026ರಂದು ಪೊಲೀಸರು ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಹಿಂದೂ ಸಮ್ಮೇಳನ ಸಮಿತಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice Lalitha Kanneganti
Justice Lalitha Kanneganti

“ಸೂಲಿಬೆಲೆ ಮತ್ತು ಹಾರಿಕಾ ಅವರು ಉಂಟು ಮಾಡಬಹುದಾದ ಸಮಸ್ಯೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲದೆ, ಅವರ ವಿರುದ್ಧ ಕೆಲವು ಪ್ರಕರಣ ದಾಖಲಾಗಿವೆ ಎಂದು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಆಕ್ಷೇಪಾರ್ಹ ನೋಟಿಸ್‌ಗಳು ಕಾರಣರಹಿತವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ನಿಜವಾದ ಅಥವಾ ತಕ್ಷಣದ ಅಪಾಯ ಎದುರಾಗಿದೆ ಎಂಬುದನ್ನು ತೋರಿಸಲು ವಿಫಲವಾಗಿವೆ” ಎಂದು ನ್ಯಾಯಾಲಯ ಹೇಳಿದೆ.

“ನಿರ್ದಿಷ್ಟವಾಗಿ ಕರ್ನಾಟಕ ಪೊಲೀಸ್‌ ಕಾಯಿದೆಯ ಅನ್ವಯ ಅರ್ಜಿದಾರರು ನೀಡುವ ಮನವಿಗಳನ್ನು ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕು” ಎಂದೂ ನ್ಯಾಯಾಲಯ ನಿರ್ದೇಶಿಸಿದೆ.

“ಪೊಲೀಸರು ಮಾಡಿರುವ ಆದೇಶವು ಸಕಾರಣಗಳನ್ನು ಹೊಂದಿಲ್ಲ. ಈ ರೀತಿಯಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಪೊಲೀಸರು ಕಸಿಯಲಾಗದು. ಅರ್ಜಿದಾರರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದ ಮಾತ್ರಕ್ಕೆ ಪೊಲೀಸರು ಸಮ್ಮೇಳದಲ್ಲಿ ಅರ್ಜಿದಾರರು ಭಾಗವಹಿಸದಂತೆ ನಿರ್ಬಂಧಿಸಲಾಗದು” ಎಂದು ಪೀಠ ವಿವರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಈ ಹಿಂದೆ ಅರ್ಜಿದಾರರು ಇಂಥ ಐದು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಯಾವುದೇ ತೆರನಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಾಗಿಲ್ಲ. ಅರ್ಜಿದಾರರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡದೇ ಆಕ್ಷೇಪಾರ್ಹವಾದ ಆದೇಶಗಳನ್ನು ಪೊಲೀಸರು ಹೊರಡಿಸಿದ್ದಾರೆ” ಎಂದು ವಾದಿಸಿದ್ದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜೆ ಎಂ ಗಂಗಾಧರ್‌ ಅವರು “ಅರ್ಜಿದಾರರು ಈ ಹಿಂದೆ ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಾಗಿವೆ. ಈಗ ಅರ್ಜಿದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದು, ಅವುಗಳನ್ನು ಪರಿಗಣಿಸಿ ಸೂಕ್ತ ಆದೇಶ ಮಾಡಲಾಗುವುದು. ಸಮಸ್ಯೆಗಳು ಉದ್ಭವಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ” ಎಂದಿದ್ದರು.

Attachment
PDF
Hindu Sammelana Samiti Vs State of Karnataka
Preview
Kannada Bar & Bench
kannada.barandbench.com