ತಾವು ಸದಸ್ಯರಾಗಿರುವ ವಾಟ್ಸಾಪ್ ಗ್ರೂಪ್ಗಳಿಗೆ ಹೀರಾ ಗೋಲ್ಡ್ ಪ್ರಕರಣದಲ್ಲಿ ವಂಚನೆಗೊಳಗಾದ ಹೂಡಿಕೆದಾರರು ಸಂದೇಶ ರವಾನಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು [ಎಸ್ಎಫ್ಐಒ ಮತ್ತು ಹೀರಾ ಗೋಲ್ಡ್ ನಡುವಣ ಪ್ರಕರಣ].
ತಾವು ಸದಸ್ಯರಾಗಿರುವ ವಾಟ್ಸಾಪ್ ಗ್ರೂಪ್ಗಳಿಗೆ ನುಸುಳುತ್ತಿರುವ ಕೆಲವರು ನ್ಯಾಯ ಕೋರಿ ಸಂದೇಶ ಕಳಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು "ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಲು ಬಯಸುವುದಿಲ್ಲ. ಕೆಲವರು ನನ್ನ ಗುಂಪುಗಳಿಗೆ ನುಸುಳುತ್ತಾರೆ ಮತ್ತು ಸಂದೇಶಗಳನ್ನು ಹಾಕುತ್ತಾರೆ. ನಮಗೆ ಇದೆಲ್ಲ ಬೇಡವಾಗಿದೆ” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಅವರಿಗೆ ನ್ಯಾಯಮೂರ್ತಿ ಕೌಲ್ ಹೇಳಿದರು.
ಇದೇ ವಿಚಾರವನ್ನು ಆದೇಶದಲ್ಲಿ ದಾಖಲಿಸಿಕೊಂಡ ನ್ಯಾ. ಎಂ.ಎಂ.ಸುಂದ್ರೇಶ್ ಅವರನ್ನೂ ಒಳಗೊಂಡ ಪೀಠ, ಇಂತಹ ತಂತ್ರಗಳಿಂದ ಹೂಡಿಕೆದಾರರು ದೂರವಿರಬೇಕು ಎಂದು ಕಿವಿಮಾತು ಹೇಳಿದೆ.
ಚಿನ್ನ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದಾಗಿ ಆಮಿಷವೊಡ್ಡಿ ಹೂಡಿಕೆದಾರರಿಂದ ₹ 5,600 ಕೋಟಿ ಠೇವಣಿ ಸಂಗ್ರಹಿಸಿರುವ ಆರೋಪ ಎದುರಾಗಿರುವ ಹೀರಾ ಗೋಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ಮತ್ತು ಗಂಭೀರ ವಂಚನೆ ತನಿಖಾ ಸಂಸ್ಥೆ (ಎಸ್ಎಫ್ಐಒ) ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 15, 2022ಕ್ಕೆ ನಿಗದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಹೀರಾ ಗೋಲ್ಡ್ ನಿರ್ದೇಶಕರಿಗೆ ಮಧ್ಯಂತರ ಜಾಮೀನು ನೀಡಲಾಗಿದ್ದು ಅದನ್ನು ಮಾರ್ಚ್ 2021ರವರೆಗೆ ವಿಸ್ತರಿಸಲಾಗಿದೆ.