ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ಫೇಸ್ ಬುಕ್

ತಿಹಾರ್‌ ಜೈಲಿಗೆ ಒಯ್ಯಲು ಕೇಜ್ರಿವಾಲ್‌ ಅವರಿಗೆ ಅನುಮತಿಸಲಾದ ವಸ್ತುಗಳು ಇವು

ಕೇಜ್ರಿವಾಲ್ ಅವರ ದೇಹದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಸಕ್ಕರೆ ಮಟ್ಟ ಕುಸಿದರೆ ಅವರಿಗೆ ಗ್ಲೂಕೋಸ್, ಮಿಠಾಯಿ ಹಾಗೂ ಬಾಳೆಹಣ್ಣು ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿ ಭಗವದ್ಗೀತೆ, ರಾಮಾಯಣ ಹಾಗೂ ಪತ್ರಕರ್ತೆ ನೀರಜಾ ಚೌಧರಿ ಅವರ ʼಹೌ ಪ್ರೈಮ್‌ ಮಿನಿಸ್ಟರ್ಸ್‌ ಡಿಸೈಡ್‌ʼ ಕೃತಿಗಳನ್ನು ಓದಲು ದೆಹಲಿ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ.

ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ; ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಈ ಆದೇಶ ಹೊರಡಿಸಿದ್ದಾರೆ. ನ್ಯಾಯಾಲಯ ಕೇಜ್ರಿವಾಲ್‌ ಅವರನ್ನು ಏಪ್ರಿಲ್‌ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿರುವುದರಿಂದ ಜೈಲಿನಲ್ಲಿರುವಾಗ ಅವರಿಗೆ ಮನೆಯಲ್ಲೇ ತಯಾರಿಸಿದ ಊಟ ಒದಗಿಸಲು ನ್ಯಾಯಾಧೀಶರು ಅನುಮತಿಸಿದ್ದು ಕೇಜ್ರಿವಾಲ್‌ ಅವರು ಹಾಸಿಗೆ, ದಿಂಬು ಹಾಗೂ ಹೊದಿಕೆಯನ್ನು ಜೈಲಿಗೆ ತರಬಹುದು ಎಂದರು.

ಆದೇಶಕ್ಕೆ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಅವರು ವಿರೋಧ ವ್ಯಕ್ತಪಡಿಸಲಿಲ್ಲ.

ಕೇಜ್ರಿವಾಲ್ ಅವರ ದೇಹದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಸಕ್ಕರೆ ಮಟ್ಟ ಕುಸಿದರೆ ಅವರಿಗೆ ಗ್ಲೂಕೋಸ್, ಮಿಠಾಯಿ ಹಾಗೂ ಬಾಳೆಹಣ್ಣು ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ಕೇಜ್ರಿವಾಲ್ ಅವರಿಗೆ ನೋಟ್ ಪ್ಯಾಡ್ ಮತ್ತು ಪೆನ್ ಒದಗಿಸುವ ಬಗ್ಗೆ ಪರಿಗಣಿಸುವಂತೆ ನ್ಯಾಯಾಧೀಶೆ ಬವೇಜಾ ತಿಹಾರ್ ಜೈಲು ಅಧೀಕ್ಷಕರಿಗೆ ಸೂಚಿಸಿದರು.

ಈ ವಸ್ತುಗಳು ಜೈಲು ಅಧಿಕಾರಿಗಳ ಬಳಿ ಲಭ್ಯವಿಲ್ಲದಿದ್ದರೆ, ಕೇಜ್ರಿವಾಲ್ ಸ್ವಂತ ಖರ್ಚಿನಲ್ಲಿ ಪುಸ್ತಕ, ನೋಟ್‌ಪ್ಯಾಡ್‌ ಹಾಗೂ ಪೆನ್ನನ್ನುಕೊಂಡೊಯ್ಯಬಹುದಾಗಿದ್ದು ಅವುಗಳನ್ನು ಪರಿಶೀಲಿಸಿ ಅನುಮತಿಸುವಂತೆ ನ್ಯಾಯಾಲಯ ಸೂಚಿಸಿದೆ.

ಜೊತೆಗೆ ಅವರು ಕನ್ನಡಕ ಮತ್ತು ಧಾರ್ಮಿಕ ಲಾಕೆಟ್‌ ಧರಿಸುವುದನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ.

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

Related Stories

No stories found.
Kannada Bar & Bench
kannada.barandbench.com