ಭಾಷೆಯಾಗಿ ಕನ್ನಡ ಅಧ್ಯಯನ ಮಾಡದ ವಿದ್ಯಾರ್ಥಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅನುಮತಿಸಿದ ಹೈಕೋರ್ಟ್‌

ಕಿಶೋರ್ 1ನೇ ತರಗತಿಯಿಂದ ಈವರೆಗೂ ಕನ್ನಡ ವಿಷಯ ಅಧ್ಯಯನ ಮಾಡಿಲ್ಲ. ಸಂಸ್ಕೃತ, ಇಂಗ್ಲಿಷ್ & ಹಿಂದಿ ವಿಷಯ ಓದಿದ್ದಾನೆ. ಹೀಗಿರುವಾಗ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆಯಬೇಕು ಎಂಬುದು ಸಲ್ಲ ಎಂದಿರುವ ನ್ಯಾಯಾಲಯ.
Karnataka High Court
Karnataka High Court

ಕನ್ನಡ ಭಾಷಾ ವಿಷಯ ಹೊರತುಪಡಿಸಿ ಶುಕ್ರವಾರದಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನಗರದ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ.

ಬೆಂಗಳೂರಿನ ವಿದ್ಯಾಭಾರತಿ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಕಿಶೋರ್‌ಗೆ ಕನ್ನಡ ಭಾಷಾ ವಿಷಯ ಹೊರತುಪಡಿಸಿ ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾ ವಿಷಯಗಳಲ್ಲಿ ಎಸ್‌ಎಸ್‌ಎಲ್ ಪರೀಕ್ಷೆ ಬರೆಯಲು ಅನುಮತಿ ನೀಡಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್ ಅವರ ನೇತೃತ್ವದ ವಿಭಾಗೀಯವು ಪೀಠ ಆದೇಶ ಮಾಡಿದೆ.

ವಿದ್ಯಾರ್ಥಿಗೆ ಶುಕ್ರವಾರದಿಂದ (ಮಾರ್ಚ್‌ 31ರಿಂದ) ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರವೇಶ ಪತ್ರ ಮತ್ತು ಇತರೆ ಅಗತ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶಿಸಿದೆ. ರಾಜ್ಯ ಸರ್ಕಾರವು ಕನ್ನಡ ಭಾಷೆ ಕಲಿಕೆಯ ನಿಯಮ-2017 ಅನ್ನು ಪರಿಚಯಿಸಿದೆ. ಅದರಂತೆ ಎಲ್ಲಾ ಶಾಲೆಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಸರ್ಕಾರದ ವಾದವನ್ನು ಪೀಠವು ತಿರಸ್ಕರಿಸಿದೆ.

ವಿದ್ಯಾರ್ಥಿ ಕಿಶೋರ್ ಒಂದನೇ ತರಗತಿಯಿಂದ ಈವರೆಗೂ ಕನ್ನಡ ಭಾಷಾ ವಿಷಯವನ್ನೇ ಅಧ್ಯಯನ ಮಾಡಿಲ್ಲ. ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷಾ ವಿಷಯ ಓದಿದ್ದಾನೆ. ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪರೀಕ್ಷೆ ಬರೆಯಬೇಕು ಎಂಬುದು ಸರಿಯಲ್ಲ. ಇದು ಆತನ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ: ವಿದ್ಯಾರ್ಥಿ ಕಿಶೋರ್ ತಮಿಳುನಾಡು ಮೂಲದವರು. ಅಲ್ಲಿಯೇ 6ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದ್ದಾರೆ. ತಂದೆ ಬೆಂಗಳೂರಿಗೆ ವರ್ಗವಾದ ಕಾರಣ ಬೆಂಗಳೂರಿನ ಮಹಾಲಕ್ಷ್ಮೀಪುರಂನ ಬಿಜೆಎಸ್ ವರ್ಲ್ಡ್ ಶಾಲೆಯಲ್ಲಿ 7ನೇ ತರಗತಿಗೆ ಪ್ರವೇಶ ಪಡೆದಿದ್ದನು. ಕನ್ನಡ ಭಾಷೆಯ ಜ್ಞಾನವಿಲ್ಲದ ಕಾರಣ ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ ಅನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಿದ್ದನು. ನಂತರ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾಭಾರತಿ ಶಾಲೆಗೆ 10ನೇ ತರಗತಿಗೆ ಸೇರ್ಪಡೆಯಾಗಿದ್ದ.

ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾ ವಿಷಯದಲ್ಲೇ ಅಧ್ಯಯನ ಮಾಡಲು ಡಿಡಿಪಿಐಯಿಂದ 2022ರ ಏಪ್ರಿಲ್‌ 22ರಂದು ಅನುಮೋದನೆ ಸಹ ಪಡೆದಿದ್ದ. ಆದರೆ, ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಅಧ್ಯಯನ ಮಾಡದ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ಶಾಲೆ ತಿಳಿಸಿತ್ತು. ಇದರಿಂದ ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷಾ ವಿಷಯದಲ್ಲೇ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿ ಅನುಮತಿ ಕೋರಿದ್ದ. ಅದನ್ನು ತಿರಸ್ಕರಿಸಿದ್ದ ಎಸ್‌ಎಸ್‌ಎಲ್‌ಸಿ ಮಂಡಳಿ ನಿರ್ದೇಶಕರು ಮತ್ತು ಡಿಡಿಪಿಐ, ಪರೀಕ್ಷೆ ಬರೆಯಬೇಕಾದರೆ ವಿದ್ಯಾರ್ಥಿ ಕನ್ನಡವನ್ನು ಮೂರನೇ ಭಾಷಾ ವಿಷಯವಾಗಿ ಅಧ್ಯಯನ ಮಾಡಬೇಕು ಎಂದು 2023ರ ಜನವರಿ 16ರಂದು ಹಿಂಬರಹ ನೀಡಿದ್ದರು.

ಇದನ್ನು ವಿದ್ಯಾರ್ಥಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಏಕ ಸದಸ್ಯ ಪೀಠವು ಸಂಸ್ಕೃತ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕಿಶೋರ್‌ಗೆ ಅನುಮತಿ ನೀಡಿತ್ತು. ಅಲ್ಲದೆ, ಈ ತೀರ್ಪು ಮತ್ಯಾರಿಗೂ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಮೆಲ್ಮನವಿ ಸಲ್ಲಿಸಿತ್ತು.

Related Stories

No stories found.
Kannada Bar & Bench
kannada.barandbench.com