ರಾಜಧಾನಿಯಲ್ಲಿ ಅಪರಿಚಿತ, ವಾರಸುದಾರರಿಲ್ಲದ ವಾಹನ ಹರಾಜಿಗೆ ಕಾಲಮಿತಿ ನಿಗದಿಪಡಿಸಿದ ಹೈಕೋರ್ಟ್‌

ಮಾಲೀಕರು ಸಿಗದಿದ್ದರೆ ವ್ಯಾಪ್ತಿ ಹೊಂದಿದ ನ್ಯಾಯಾಲಯದ ಅನುಮತಿ ಪಡೆದು ಹರಾಜು ಹಾಕಲಾಗುವುದು. ಆ ರೀತಿ ವಾಹನಗಳನ್ನು ಹರಾಜು ಹಾಕುವ ಮುನ್ನ ಪತ್ರಿಕಾ ಪ್ರಕಟಣೆ ನೀಡಲಾಗುವುದು ಎಂದು ಪೀಠಕ್ಕೆ ವಿವರಿಸಿದ ಎಜಿ.
Two-wheeler
Two-wheeler Image for representative purpose

ಬೆಂಗಳೂರಿನ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಕರ್ನಾಟಕ ಹೈಕೋರ್ಟ್ ಗುರುವಾರ ಕಾಲಮಿತಿ ನಿಗದಿಪಡಿಸಿದೆ.

ಬೆಂಗಳೂರಿನ ತ್ಯಾಗರಾಜ ನಗದರಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅಡ್ವೋಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರು ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹನಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜನವರಿ 31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯ ನಿರ್ಣಯಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ಸ್ಥಳಾಂತರ ಮಾಡಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಮೂಲಕ ವಾಹನದ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ರಸ್ತೆ ಬದಿ ನಿಂತಲ್ಲೇ ನಿಂತಿರುವ ವಾಹನಗಳನ್ನು ತೆಗೆಯುವಂತೆ ಸ್ಟಿಕ್ಕರ್ ಅಳವಡಿಸಲಾಗುವುದು. 15 ದಿನಗಳ ನಂತರ ಆರ್‌ಟಿಒ ಕಚೇರಿಗೆ ತಂದು ಮಾಲೀಕರನ್ನು ಸಂಪರ್ಕಿಸಲಾಗುವುದು. ಮಾಲೀಕರು ಸಿಗದಿದ್ದರೆ ವ್ಯಾಪ್ತಿ ಹೊಂದಿದ ನ್ಯಾಯಾಲಯದ ಅನುಮತಿ ಪಡೆದು ಹರಾಜು ಹಾಕಲಾಗುವುದು. ಆ ರೀತಿ ವಾಹನಗಳನ್ನು ಹರಾಜು ಹಾಕುವ ಮುನ್ನ ಪತ್ರಿಕಾ ಪ್ರಕಟಣೆ ನೀಡಲಾಗುವುದು ಎಂದು ವಿವರಿಸಿದರು.

ವಾರಸುದಾರರು ಪತ್ತೆಯಾಗದ ಸಂದರ್ಭದಲ್ಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲದಿಂದ ಅನುಮತಿ ಪಡೆದು ಅಂತಹ ವಾಹನಗಳನ್ನು ಹರಾಜು ಹಾಕಲಾಗುತ್ತದೆ. ಗೆಜೆಟ್ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳಲ್ಲಿ ವಾಹನಗಳನ್ನು ಹರಾಜು ಹಾಕಲು 2023ರ ಜುಲೈ 11ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡದಿದ್ದರೆ ಆಡಳಿತಾತ್ಮಕ ಅಪಾಯಗಳನ್ನು ಸೃಷ್ಟಿಸುತ್ತದೆ. ಹೀಗಾಗಿ, ಅವಧಿಯನ್ನು 15 ದಿನಕ್ಕೆ ಇಳಿಕೆ ಮಾಡಿದರೆ ಅನುಕೂಲವಾಗಲಿದೆ. ಅಲ್ಲದೇ ಕಡಿಮೆ ಅವಧಿ ನಿಗದಿಪಡಿಸಿದರೆ ಅನುಕೂಲವಾಗುತ್ತದೆ. ಅಲ್ಲದೇ ಆಂತಹ ವಾಹನಗಳ ಸ್ಥಳಾಂತರಕ್ಕೆ ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲಸಂದ್ರದಲ್ಲಿ 2 ಎಕರೆ ಜಾಗ ಗುರುತಿಸಲಾಗಿದೆ ಎಂಬ ಪ್ರಮಾಣಪತ್ರದ ಅಂಶವನ್ನು ಇದೇ ವೇಳೆ ಅಡ್ವೋಕೇಟ್ ಜನರಲ್ ಪೀಠದ ಗಮನಕ್ಕೆ ತಂದರು.

ಇದನ್ನು ಒಪ್ಪಿದ ಪೀಠವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿ ಅವಧಿಯನ್ನು ಕಡಿತಗೊಳಿಸಿತು. ಅದರಂತೆ, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದ 30 ದಿನಗಳಲ್ಲಿ ಹರಾಜು ಹಾಕಬೇಕು, 1ರಿಂದ 5 ವರ್ಷದ ವಾಹನಗಳನ್ನು ಮೂರು ತಿಂಗಳಲ್ಲಿ ಹಾಗೂ 5ರಿಂದ 15 ವರ್ಷದ ವಾಹನಗಳನ್ನು ಎರಡು ತಿಂಗಳ ಒಳಗೆ ಹರಾಜು ಹಾಕಬೇಕು. ಅದರ ಪ್ರಗತಿ ಆಧರಿಸಿ ಪೊಲೀಸರು ನ್ಯಾಯಾಲಯದಿಂದ ಮುಂದಿನ ನಿರ್ದೇಶನಗಳನ್ನು ಕೋರಬಹುದು ಎಂದು ಹೇಳಿ ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿತು.

ಅಫಿಡವಿಟ್‌ನಲ್ಲಿ ಏನಿದೆ?

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ ಸಂಬಂಧ ಕ್ರಮವಾಗಿ 2021ರಲ್ಲಿ 74,851, 2022ರಲ್ಲಿ 1,53,983, 2023ರಲ್ಲಿ 78,238 ಮತ್ತು 2024ರಲ್ಲಿ 479 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸಿದ ವಾಹನಗಳ ಸಂಬಂಧ 2021ರಲ್ಲಿ 8,422, 2022ರಲ್ಲಿ 18,144, 2023ರಲ್ಲಿ 9,547, 2024ರಲ್ಲಿ 113 ಪ್ರಕರಣ ದಾಖಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಪಾದಚಾರಿ ಮಾರ್ಗದ ಮೇಲೆ 15 ಮತ್ತು ಅದಕ್ಕಿಂತ ಹೆಚ್ಚು ದಿನಗಳ ಕಾಲ ನಿಲುಗಡೆ ಮಾಡಿದ ವಾಹನಗಳನ್ನು ವಾರಸುದಾರರಿಲ್ಲದ ವಾಹನ ಎಂದು ಪರಿಗಣಿಸಲಾಗುವುದು ಮತ್ತು ಅಂತಹ ವಾಹನಗಳು ಇರುವ ಪ್ರದೇಶವನ್ನು ಪತ್ತೆಹಚ್ಚಲು ತಂಡ ರಚಿಸಲಾಗಿದೆ. ಆ ತಂಡವು ಅಂತಹ ವಾಹನಗಳನ್ನು ಮಹಜರು ಮಾಡಿದ ನಂತರ ಸಂಗ್ರಹಣಾ ಸ್ಥಳಕ್ಕೆ ಟೋಯಿಂಗ್ ಮಾಡಲಿದೆ. ನಂತರ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಸಂಪರ್ಕಿಸಿ, ಆ ವಾಹನಗಳ ಮಾಲೀಕರು, ಅವರ ವಿಳಾಸ ಹಾಗೂ ಅವುಗಳ ಮೇಲಿನ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ವಾಹನ ಮಾಲೀಕರಿಗೆ ದಂಡ ಪಾವತಿಸಲು ಸೂಚಿಸಲಾಗುವುದು. ದಂಡ ಪಾವತಿಸದಿದ್ದರೆ ಹರಾಜು ಹಾಕಲು ಅಥವಾ ಗುಜರಿಗೆ ಹಾಕುವ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಫುಟ್‌ಪಾತ್ ಒತ್ತುವರಿ ತೆರವಿಗೆ ವಿಶೇಷ ಕಾರ್ಯಾಚರಣೆ

ಬಿಬಿಎಂಪಿ ವ್ಯಾಪ್ತಿಯ 609.89 ಕಿ.ಮೀ ಮತ್ತು 734.45 ಕಿ.ಮೀ ಉಪ ಮುಖ್ಯರಸ್ತೆಗಳ ಪಾದಚಾರಿ ಮಾರ್ಗಗಳ ಮೇಲೆ ಶಾಶ್ವತ ಹಾಗೂ ಉಪ ಶಾಶತ್ವ ನಿರ್ಮಾಣಗಳನ್ನು ಅನುಮತಿಸುವುದಿಲ್ಲ. ಪಾದಚಾರಿ ಮಾರ್ಗಗಳ ಒತ್ತುವರಿ ಗುರುತಿಸಿ, ತೆರವುಗೊಳಿಸಲು ಕಾಲಕಾಲಕ್ಕೆ ವಿಶೇಷ ಕಾರ್ಯಚರಣೆ ಮಾಡಲಾಗುವುದು. ಈ ಕಾರ್ಯಚರಣೆಗೆ ಅಗತ್ಯವಾದ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಮ್ಮತಿಸಿದೆ.

ವಸತಿ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ಮಳಿಗೆಗಳನ್ನು ಇಟ್ಟುಕೊಂಡು ಒತ್ತುವರಿ ಮಾಡಿರುವುದು ಕಂಡುಬಂದಿದೆ. ಆ ಕುರಿತು ಸರ್ವೇ ನಡೆಸಿ ಆ ರಸ್ತೆಗಳ್ಲಲಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸರ್ವೇ ನಡೆಸಲು ನಗರ ವ್ಯಾಪಾರ ಸಮಿತಿ ರಚಿಸಲಾಗುವುದು. ಆ ಸಮಿತಿಯು ಪಾದಚಾರಿ ಮಾಗದ ಮೇಲಿನ ಬೀದಿ ಬದಿ ವ್ಯಾಪಾರಗಳನ್ನು ತೆರವುಗೊಳಿಸುವ ಹಾಗೂ ಜೀವನಾಧಾರ ತೊಂದರೆಯಾಗದಂತೆ ವ್ಯಾಪಾರ ವಲಯ ಗುರುತಿಸಿ, ಅಲ್ಲಿ ಅವರು ತಮ್ಮ ಸರಕು ಮಾರಾಟ ಮಾಡುವ ವ್ಯವಸ್ಥೆ ಒದಗಿಸಲಿದೆ. ಅವರಿಗೆ ಗುರುತಿನ ಚೀಟಿ ಕಲ್ಪಿಸಲಾಗುತ್ತದೆ. ಆ ಕುರಿತು ಸರ್ವೇ ನಡೆಸಲು ಸಮತಿ ರಚಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com