ಭಯೋತ್ಪಾದಕರ ನಿಧಿ ʼಜಮ್ಮು ಕಾಶ್ಮೀರ ಅಫೆಕ್ಟೀಸ್ ರಿಲೀಫ್ ಟ್ರಸ್ಟ್ʼಗೆ (ಜೆಕೆಎಆರ್ಟಿ) ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ನಾಲ್ವರು ಸ್ವಯಂಪ್ರೇರಿತವಾಗಿ ದೆಹಲಿ ನ್ಯಾಯಾಲಯದಲ್ಲಿ ಶುಕ್ರವಾರ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಾದ ಮೊಹಮ್ಮದ್ ಶಫಿ ಷಾ, ತಾಲಿಬ್ ಲಾಲಿ ಮುಜಾಫರ್, ಅಹ್ಮದ್ ದರ್ ಮತ್ತು ಮುಷ್ತಾಕ್ ಅಹ್ಮದ್ ಲೋನ್ ಅವರು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರೆದುರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
“(ತಪ್ಪೊಪ್ಪಿಗೆ) ಪ್ರಕ್ರಿಯೆಯನ್ನು ಅರ್ಥಮಾಡಿಸಿಕೊಟ್ಟ ನಂತರ ಆರೋಪಿಗಳು ಸ್ವಯಂಪ್ರೇರಣೆಯಿಂದ ತಪ್ಪೊಪ್ಪಿಕೊಳ್ಳಲು ಮುಂದಾದರು. ಎಲ್ಲಾ ಆರೋಪಿಗಳನ್ನು ಅವರ ವಕೀಲರು ಪ್ರತಿನಿಧಿಸಿ ತಪ್ಪೊಪ್ಪಿಗೆ ಪ್ರಕ್ರಿಯೆ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದ್ದಾರೆ. ತಪ್ಪೊಪ್ಪಿಗೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಆರೋಪಿಯ ಪ್ರತ್ಯೇಕ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ನ್ಯಾಯಾಲಯ ವಿವರಿಸಿತು.
ನಂತರ ನ್ಯಾಯಾಲಯವು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ವಿಷಯದ ವಿಚಾರಣೆ ಹಾಗೆಯೇ ತೀರ್ಪು ಪ್ರಕಟಿಸುವುದಕ್ಕಾಗಿ ಫೆಬ್ರವರಿ 16ಕ್ಕೆ ಪ್ರಕರಣ ಮುಂದೂಡಿತು.
ಹಿಜಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿ ವರ್ಗಾವಣೆ ಮಾಡಲು ಜೆಕಾರ್ಟ್ (JKART) ರೂಪಿಸಿದ್ದ. 2005ರಿಂದ 2013ರ ನಡುವೆ ₹ 80 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಸಲಾವುದ್ದೀನ್ ಮತ್ತಿತರ ಆರೋಪಿಗಳು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ನೆರೆಯ ದೇಶಗಳಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎನ್ನುವುದು ಪ್ರಾಸಿಕ್ಯೂಷನ್ ಆರೋಪವಾಗಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಜೆಕಾರ್ಟ್ ಅನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಭಯೋತ್ಪಾದಕ ಕೃತ್ಯಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸುವುದಕ್ಕಾಗಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಅದನ್ನು ವ್ಯಾಪಕವಾಗಿ ಬಳಸಲಾಗಿದೆ ಎಂದು ಅದು ಹೇಳಿದೆ.