Non-Veg Stall
Non-Veg Stall

[ಮಾಂಸಾಹಾರ ಅಂಗಡಿಗಳ ಜಪ್ತಿ ಪ್ರಕರಣ] ಜನ ತಮ್ಮಿಷ್ಟದ್ದು ತಿನ್ನುವುದನ್ನು ಹೇಗೆ ತಡೆಯುತ್ತೀರಿ ಎಂದ ಗುಜರಾತ್ ಹೈಕೋರ್ಟ್

"ನೀವು ಮಾಂಸಾಹಾರ ಇಷ್ಟಪಡದಿರುವುದು ನಿಮ್ಮ ದೃಷಿಕೋನ. ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?" ಎಂದು ಅಹಮದಾಬಾದ್‌ ನಗರಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ.
Published on

ನಗರದಲ್ಲಿ ಮಾಂಸಾಹಾರ ಮಾರಾಟ ಮಾಡುವ ಆಹಾರ ಮಳಿಗೆಗಳನ್ನು ವಶಪಡಿಸಿಕೊಂಡ ಅಹಮದಾಬಾದ್ ನಗರ ಪಾಲಿಕೆಯನ್ನು ಗುಜರಾತ್ ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ (ದಿಲೀಪ್ ಗಟುಭಾಯಿ ರೋಟ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ).

ಮಾಂಸಾಹಾರ ಮಾರುವ ತಳ್ಳುಗಾಡಿಗಳನ್ನು ವಶಪಡಿಸಿಕೊಂಡ ಪಾಲಿಕೆ ವಿರುದ್ಧ ವಿವಿಧ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಆಲಿಸುತ್ತಿದ್ದರು. ಮಾರಾಟಗಾರರಲ್ಲಿ ಮಾಂಸಾಹಾರ, ಮೊಟ್ಟೆ ಹಾಗೂ ಸಸ್ಯಾಹಾರ ಮಾರಾಟ ಮಾಡುವವರೂ ಸೇರಿದ್ದಾರೆ.

Also Read
ಶಬರಿಮಲೆಯಲ್ಲಿ ಹಲಾಲ್‌ ಬೆಲ್ಲ ಬಳಕೆ ಪ್ರಕರಣ: ಆಹಾರ ಮತ್ತು ಭದ್ರತಾ ಇಲಾಖೆ ಪ್ರತಿಕ್ರಿಯೆ ಬಯಸಿದ ಕೇರಳ ಹೈಕೋರ್ಟ್‌

"ಯಾವುದು ಸಮಸ್ಯೆ? ನೀವು ಮಾಂಸಾಹಾರ ಇಷ್ಟಪಡದಿರುವುದು ನಿಮ್ಮ ದೃಷಿಕೋನ. ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?” ಎಂದು ನ್ಯಾಯಾಲಯ ಪಾಲಿಕೆಯನ್ನು ಕಟುವಾಗಿ ಪ್ರಶ್ನಿಸಿತು. "ಜನರು ತಮ್ಮಿಷ್ಟದ್ದನ್ನು ತಿನ್ನುವುದನ್ನು ನೀವು ತಡೆಯಲು ಹೇಗೆ ಸಾಧ್ಯ? ಅಧಿಕಾರದಲ್ಲಿರುವವರು ಇದನ್ನು ಮಾಡಬಯಸುತ್ತಾರೆ ಎಂದಾಕ್ಷಣಕ್ಕೆ ಹಾಗೆ ಮಾಡಬಹುದೇ?" ಎಂದು ಪೀಠವು ತರಾಟೆಗೆ ತೆಗೆದುಕೊಂಡಿತು.

ಮಾರಾಟಗಾರರ ಸರಕು ಮತ್ತು ಸಾಮಗ್ರಿಗಳನ್ನು ಅವರಿಗೆ ಮರಳಿಸಬೇಕೆಂಬ ಅರ್ಜಿದಾರರ ಪ್ರಕರಣಗಳನ್ನು ತ್ವರಿತವಾಗಿ ಪರಿಗಣಿಸುವಂತೆ ಪಾಲಿಕೆಗೆ ನ್ಯಾಯಾಲಯ ನಿರ್ದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು. ಇದೇ ವೇಳೆ, ಯಾರದೋ ಅಹಂಕಾರವನ್ನು ತಣಿಸಲು ಇಂತಹ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿಗಳು ಪಾಲಿಕೆಯನ್ನು ಈ ವೇಳೆ ಎಚ್ಚರಿಸಿದರು.

Kannada Bar & Bench
kannada.barandbench.com