ನನ್ನ ಯೌವನದ ದಿನಗಳಲ್ಲಿ ಆಕಾಶವಾಣಿಗೆ ರೇಡಿಯೊ ಜಾಕಿಯಾಗಿ ಅರೆಕಾಲಿಕವಾಗಿ ಕೆಲಸ ಮಾಡಿದ್ದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.
ಗೋವಾದ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಅಂಡ್ ರಿಸರ್ಚ್ನ (IIULER) ಪ್ರಥಮ ಶೈಕ್ಷಣಿಕ ಅಧಿವೇಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
"ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ ನಾನು ನನ್ನ ಇಪ್ಪತ್ತರ ಪ್ರಾಯದಲ್ಲಿ ಆಕಾಶವಾಣಿಯಲ್ಲಿ ರೇಡಿಯೊ ಜಾಕಿಯಾಗಿ 'ಪ್ಲೇ ಇಟ್ ಕೂಲ್', 'ಎ ಡೇಟ್ ವಿತ್ ಯು' ಅಥವಾ 'ಸಂಡೇ ರಿಕ್ವೆಸ್ಟ್ಸ್' ರೀತಿಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದೆ” ಎಂದು ಅವರು ಹೇಳಿದರು.
ಸಂಗೀತದ ಮೇಲಿನ ತಮ್ಮ ಪ್ರೀತಿ ಇಂದಿಗೂ ಮುಂದುವರೆದಿದ್ದು ಪ್ರತಿ ದಿನವೂ ತಾವು ಸಂಗೀತ ಆಲಿಸುವುದಾಗಿ ಅವರು ತಿಳಿಸಿದರು. "ಸಂಗೀತದ ಮೇಲಿನ ನನ್ನ ಪ್ರೀತಿ ಇಂದಿಗೂ ಮುಂದುವರೆದಿದೆ. ಹೀಗಾಗಿ ನಾನು ವಕೀಲರ ಅಷ್ಟಾಗಿ ಇಂಪಾಗಿರದ ಸಂಗೀತ (ವಾದ) ಕೇಳಿಮುಗಿಸಿದ ನಂತರ, ಪ್ರತಿ ದಿನವೂ ಕರ್ಣಕ್ಕೆ ಪ್ರಿಯವೆನಿಸುವ ಸಂಗೀತ ಆಲಿಸುತ್ತೇನೆ. " ಎಂದು ಅವರು ಚಟಾಕಿ ಹಾರಿಸಿದರು.
ತಮ್ಮ ತಾರುಣ್ಯ, ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ಮತ್ತಿತರ ವಿಚಾರಗಳ ಕುರಿತಾಗಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ವಿವಿಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಎಂದರೆ ಸಿಎಲ್ಎಟಿಗೆ ಅಣಿಗೊಳಿಸಲೆಂದೇ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವುದು. ಆದರೆ ಅವರು ಸಿಎಲ್ಎಟಿ ಪರೀಕ್ಷೆ ಉತ್ತೀರ್ಣರಾದ ಮಾತ್ರಕ್ಕೆ ಕಾನೂನು ಕಲಿತಂತಾಗುವುದಿಲ್ಲ ಎಂದು ಸಿಜೆಐ ಹೇಳಿದರು.