ಅಕ್ರಮ ಹಣ ವರ್ಗಾವಣೆ ಪ್ರಕರಣ ಪ್ರಶ್ನಿಸಿದ ಐಎಐಟಿ: ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ನೋಟಿಸ್‌

2015ರ ಸೆ. 24ರಂದು ಎಫ್‌ಡಿಐ ಮೂಲಕ ಸ್ವೀಕರಿಸಲಾದ ಹಣವನ್ನು ಎಫ್‌ಡಿ ಇಡಲಾಗಿದ್ದು, ಕೆಲ ತಿಂಗಳ ಬಳಿಕ ಐಎಐಟಿಯು ₹14.25 ಕೋಟಿಯನ್ನು ಒ ಡಿ ಮೂಲಕ ಪಡೆದು, ಅದರಲ್ಲಿ ₹10 ಕೋಟಿಯನ್ನು ಕೊಲಾಟರಲ್‌ ಭದ್ರತೆಯ ರೂಪದಲ್ಲಿ ನಿಶ್ಚಿತ ಠೇವಣಿಯಾಗಿಸಿದೆ.
Amnesty International, Karnataka High Court
Amnesty International, Karnataka High Court
Published on

ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ನ ಟ್ರಸ್ಟಿ ನಿಧೀಶ್‌ ತ್ಯಾಗಿ ಸಲ್ಲಿಸಿರುವ ಅರ್ಜಿಯ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

2022ರ ಮೇ 27ರಂದು ದಾಖಲಾಗಿರುವ ದೂರು ಮತ್ತು 2023ರ ಅಕ್ಟೋಬರ್‌ 19ರಂದು ದಾಖಲಾಗಿರುವ ಹೆಚ್ಚುವರಿ ದೂರು ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಸಂಬಂಧ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣ ರದ್ದತಿ ಕೋರಿ ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ ಪರವಾಗಿ ನಿಧೀಶ್‌ ತ್ಯಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ಪ್ರಕರಣಕ್ಕೆ ಸಮನ್ವಯ ಪೀಠವು (ಏಪ್ರಿಲ್‌ 29ರಂದು) ತಡೆ ನೀಡಿದೆ. ಹೀಗಾಗಿ, ಈ ಪ್ರಕರಣದಲ್ಲೂ ತಡೆ ನೀಡಬೇಕು” ಎಂದು ಕೋರಿದರು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಕೀಲರು “ಮಧುಕರ್‌ ದೇಶಪಾಂಡೆ ಇ ಡಿ ಪರವಾಗಿ ನೋಟಿಸ್‌ ಪಡೆಯಲಿದ್ದಾರೆ” ಎಂದರು.

ಇದನ್ನು ಆಲಿಸಿದ ಪೀಠವು ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2019ರ ಜೂನ್‌ 12ರಂದು ಕೇಂದ್ರ ಗೃಹ ಇಲಾಖೆ ನೀಡಿದ್ದ ದೂರನ್ನು ಆಧರಿಸಿ ಕೇಂದ್ರೀಯ ತನಿಖಾ ದಳವು (ಸಿಬಿಐ) 2019ರ ನವೆಂಬರ್‌ 5ರಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಐಐಪಿಎಲ್‌), ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ (ಐಎಐಟಿ), ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಫೌಂಡೇಶನ್‌ ಟ್ರಸ್ಟ್‌ (ಎಐಐಎಫ್‌ಟಿ), ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸೌತ್‌ ಏಷ್ಯಾ ಫೌಂಡೇಶನ್‌ (ಎಐಎಸ್‌ಎಎಫ್‌) ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 120(ಬಿ) ಜೊತೆಗೆ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಸೆಕ್ಷನ್‌ಗಳಾದ 11, 35 ಮತ್ತು 39ರ ಅಡಿ ಪ್ರಕರಣ ದಾಖಲಿಸಿತ್ತು. ಐಪಿಸಿ ಸೆಕ್ಷನ್‌ 120(ಬಿ)ರ ಅಡಿ ಪ್ರಕರಣ ದಾಖಲಾಗಿರುವುದರಿಂದ ಇದು ಗಂಭೀರ ಅಪರಾಧವೊಂದರ ಭಾಗವಾಗಿದೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

2011-12ರಲ್ಲಿ ಎಐಐಎಫ್‌ಟಿಗೆ ಇಂಗ್ಲೆಂಡ್‌ನ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನಿಂದ ದೇಣಿಗೆ ಪಡೆಯಲು ಅನುಮತಿ ದೊರೆತಿತ್ತು. ಭದ್ರತಾ ಸಲಹೆಯ ಅನುಸಾರ ನೀಡಲಾಗಿದ್ದ ಅನುಮತಿಯನ್ನು ಬಳಿಕ ರದ್ದುಪಡಿಸಲಾಗಿತ್ತು. ಆನಂತರ ಪೂರ್ವಾನುಮತಿ ಇಲ್ಲದಿದ್ದರೂ ಅಮ್ನೆಸ್ಟಿ ಇಂಡಿಯಾವು ಎಫ್‌ಸಿಆರ್‌ಎ ಅಡಿ ನೋಂದಣಿ ಪಡೆಯಲು ಪ್ರಯತ್ನ ಮಾಡಿತ್ತು. ಅಂತಿಮವಾಗಿ ಹಣ ಸ್ವೀಕರಿಸಲು ಅಮ್ನೆಸ್ಟಿ ಇಂಡಿಯಾವು ವಾಣಿಜ್ಯ ಹಾದಿ ತುಳಿಯುವ ಮೂಲಕ ಗೃಹ ಇಲಾಖೆಯ ಅನುಮತಿ ಪಡೆಯದೆಯೇ ಇದ್ದರೂ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ರೂಪದಲ್ಲಿ ತನ್ನ ಖಾತೆಗೆ ₹10 ಕೋಟಿ ಪಡೆದಿತ್ತು. ಆನಂತರವೂ ಇದೇ ರೀತಿ ಗೃಹ ಇಲಾಖೆಯ ಅನುಮತಿ ಇಲ್ಲದಿದ್ದರೂ ಇಂಗ್ಲೆಂಡ್‌ನ ಸಂಸ್ಥೆಯಿಂದ ಅಮ್ನೆಸ್ಟಿ ಇಂಡಿಯಾ ಖಾತೆಗೆ ₹26 ಕೋಟಿ ಜಮೆಯಾಗಿತ್ತು. ಇಲ್ಲಿ ಎಫ್‌ಸಿಆರ್‌ಎ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

Also Read
ಪಿಎಂಎಲ್‌ಎ ಪ್ರಕರಣ: ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಟ್ರಸ್ಟಿಗೆ ವಿಶೇಷ ನ್ಯಾಯಾಲಯದ ಜಾಮೀನು

ವಾಣಿಜ್ಯ ಉದ್ಯಮಕ್ಕೆ ಬಳಸಲಾಗುವ ಸ್ವಯಂಚಾಲಿತ ವಿಧಾನದಲ್ಲಿ ಸೇವಾ ಗುತ್ತಿಗೆ, ಮುಂಗಡ ಆದಾಯ ಮತ್ತು ಎಫ್‌ಡಿಐ ಮೂಲಕ ಎಐಐಪಿಎಲ್‌ 36 ಕೋಟಿ ರೂಪಾಯಿ ವಿದೇಶಿ ಹಣ ಪಡೆದಿದೆ. ₹10 ಕೋಟಿಯನ್ನು ಎಫ್‌ಡಿಐ ರೂಪದಲ್ಲಿ, ₹26 ಕೋಟಿಯನ್ನು ಕನ್ಸಲ್ಟೆನ್ಸಿ ಸೇವೆಗಳಿಗೆ ಪಾವತಿಸಲಾಗಿದೆ. ಗೃಹ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಎಫ್‌ಸಿಆರ್‌ಎ ಉಲ್ಲಂಘಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆಪಾದಿಸಲಾಗಿದೆ.

2015ರ ಸೆಪ್ಟೆಂಬರ್‌ 24ರಂದು ಎಫ್‌ಡಿಐ ಮೂಲಕ ಸ್ವೀಕರಿಸಲಾದ ಹಣವನ್ನು ನಿಶ್ಚಿತ ಠೇವಣಿ ಇಡಲಾಗಿದ್ದು, ಕೆಲವು ತಿಂಗಳ ಬಳಿಕ ಮತ್ತೊಂದು ಸಂಸ್ಥೆಯಾದ ಐಎಐಟಿಯು ₹14.25 ಕೋಟಿಯನ್ನು ಓವರ್‌ಡ್ರಾಫ್ಟ್‌ ಮೂಲಕ ಪಡೆದು, ಅದರಲ್ಲಿ ₹10 ಕೋಟಿಯನ್ನು ಕೊಲಾಟರಲ್‌ ಭದ್ರತೆಯ ರೂಪದಲ್ಲಿ ನಿಶ್ಚಿತ ಠೇವಣಿಯಾಗಿಸಿದೆ. ಸೇವೆಗಳ ರಫ್ತಿಗೆ ಎಐಐಪಿಎಲ್‌ ₹51 ಕೋಟಿ ಪಡೆದಿದ್ದು, ದರ ಪಟ್ಟಿ, ಒಪ್ಪಂದ ಪತ್ರ ಒಳಗೊಂಡು ಯಾವುದೇ ದಾಖಲೆಗಳನ್ನು ನೀಡಲಾಗಿಲ್ಲ. ಹೀಗಾಗಿ, ಆರೋಪಿಗಳ ಬ್ಯಾಂಕ್‌ ಖಾತೆಗಳು, ವರ್ಗಾವಣೆ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು, ಮೇಲ್ನೋಟಕ್ಕೆ ಆರೋಪಗಳಿವೆ ಎಂದು ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com