ಆರೋಪಪಟ್ಟಿ ಸಲ್ಲಿಕೆ ಬಳಿಕವೂ ಬಂಧನದಲ್ಲಿಟ್ಟು ವಿಚಾರಣೆ ಮುಂದುವರಿಸಿದರೆ ವಿಚಾರಣಾ ಪೂರ್ವ ಶಿಕ್ಷೆಯಾಗಲಿದೆ: ಹೈಕೋರ್ಟ್‌

ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಎಂ ಬಿ ಸಂತೋಷ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ನಡೆಸಿತು.
Karnataka High Court
Karnataka High Court
Published on

ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ನಂತರವೂ ಆರೋಪಿಯನ್ನು ಬಂಧನದಲ್ಲಿ ಇರಿಸಿ ವಿಚಾರಣೆ ಮುಂದುವರಿಸಿದರೆ ಅದು ವಿಚಾರಣಾ ಪೂರ್ವ ಶಿಕ್ಷೆ ಎನಿಸಿಕೊಳ್ಳುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ.

ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಎಂ ಬಿ ಸಂತೋಷ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ನಡೆಸಿತು.

ಆರೋಪಿ ಪರ ವಕೀಲರಾದ ಚಿಕ್ಕಮಗಳೂರಿನ ವಕೀಲ ಪಿ ಇ ಸುರೇಶ್, ಎಸ್‌ ಪಿ ಶಾಶ್ವತ್‌ ಮತ್ತು ಪಿ ಎಸ್‌ ಉತ್ಸವ್‌ ಗೌಡ ಅವರ ವಾದ ಪುರಸ್ಕರಿಸಿರುವ ಪೀಠವು ಎರಡು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸಲು ಆದೇಶಿಸಿ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ: ಸಂತೋಷ್ ಅವರಿಗೆ ಸಂಬಂಧಿಸಿದ ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮದಲ್ಲಿದ್ದ ಕೃಷಿ ಜಮೀನನ್ನು ಕಾರ್ತಿಕ್ (45) ಮಧ್ಯವರ್ತಿಯಾಗಿ ಮಾರಾಟ ಮಾಡಿಸಿದ್ದರು. ಮಾರಾಟದ ನಂತರ ತನಗೆ ಬರಬೇಕಾದ ಲಾಭದ ಹಣಕ್ಕೆ ಕಾರ್ತಿಕ್ ಮೋಸ ಮಾಡಿದ್ದಾರೆ ಎಂದು ಸಂತೋಷ್ ತಗಾದೆ ತೆಗೆದಿದ್ದರು‌‌. ಈ ಸಂಬಂಧ 2023ರ ಆಗಸ್ಟ್ 13ರಂದು ತಮ್ಮ ಮನೆಯಲ್ಲಿ ಕಾರ್ತಿಕ್ ಜೊತೆ ಮಾತುಕತೆ ನಡೆಸುತ್ತಿದ್ದ ಸಮಯದಲ್ಲಿ ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಸಂತೋಷ್ ಅವರ ತಂದೆ ಭಾಸ್ಕರ ಗೌಡ ಇದನ್ನು ತಡೆಯಲು ಮುಂದಾದಾಗ ಅವರ ಮೇಲೂ ಹಾಗೂ ಅವರ ತಾಯಿ ಪ್ರೇಮಾ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟರೆ ಭಾಸ್ಕರಗೌಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಅವರೂ ಮೃತಪಟ್ಟಿದ್ದರು. ಈ ಸಂಬಂಧ ಕಾರ್ತಿಕ್ ಪತ್ನಿ ಶಾಂಭವಿ ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿತ್ತು.

ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಂತೋಷ್ ಅವರನ್ನು ಬಂಧಿಸಿದ್ದರು. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 302 ಮತ್ತು 307ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಚಿಕ್ಕಮಗಳೂರು ಎರಡನೇ ಹೆಚ್ಚುವರಿ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಸತ್ರ ನ್ಯಾಯಾಲಯವು ಸಂತೋಷ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

Attachment
PDF
Santosh M B Vs State of Karnataka.pdf
Preview
Kannada Bar & Bench
kannada.barandbench.com