ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತನ ಬಳಿ ಡಿಎಲ್ ಇಲ್ಲದಿರುವುದನ್ನೇ ನಿರ್ಲಕ್ಷ್ಯ ಎನ್ನಲಾಗದು: ಹೈಕೋರ್ಟ್

ಅಪಘಾತದಿಂದ ಒಂದು ಕಾಲನ್ನೇ ಕಳೆದುಕೊಂಡಿದ್ದರೂ ಕೇವಲ ₹50 ಸಾವಿರ ಪರಿಹಾರ ಘೋಷಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ (ಎಂಎಸಿಟಿ) ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ಭಾಗಶಃ ಪುರಸ್ಕರಿಸಿದೆ.
Karnataka High Court
Karnataka High Court
Published on

ರಸ್ತೆ ಅಪಘಾತಗಳಲ್ಲಿ ಚಾಲಕನ ನಿರ್ಲಕ್ಷ್ಯ ಸಾಬೀತಾಗದ ಹೊರತು ಆತನ ಬಳಿ ಚಾಲನಾ ಪರವಾನಗಿ (ಡಿಎಲ್) ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ತೀರ್ಮಾನಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌, ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದ ವ್ಯಕ್ತಿಯ ನೆರವಿಗೆ ಧಾವಿಸಿದೆ.

ಅಪಘಾತದಿಂದ ಒಂದು ಕಾಲನ್ನೇ ಕಳೆದುಕೊಂಡಿದ್ದರೂ ಕೇವಲ ₹50 ಸಾವಿರ ಪರಿಹಾರ ಘೋಷಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ (ಎಂಎಸಿಟಿ) ಆದೇಶ ಪ್ರಶ್ನಿಸಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಅಣ್ಣೇನಹಳ್ಳಿ ಗ್ರಾಮದ ನಿವಾಸಿ ಶಿವೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಚಿ ಸುಮಲತಾ ಅವರ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದ್ದು, ಮೇಲ್ಮನವಿದಾರರ ಪರಿಹಾರ ಮೊತ್ತವನ್ನು ₹5,67,000ಗೆ ಹೆಚ್ಚಿಸಿದೆ.

ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿಯಿಂದ ವಿಮೆ ಪಡೆದಿದ್ದ ಮತ್ತೊಂದು ವಾಹನ ಸವಾರನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದೆ ಎಂಬ ಅಂಶ ತನಿಖೆಯಲ್ಲಿ ಸಾಬೀತಾಗಿದೆ. ಆದ್ದರಿಂದ, ಮೇಲ್ಮನವಿದಾರನ ಬಳಿ ವಾಹನ ಚಾಲನಾ ಪರವಾನಗಿ ಇರಲಿಲ್ಲ ಎಂಬ ಕಾರಣಕ್ಕೆ ಅಪಘಾತದಲ್ಲಿ ಆತನ ನಿರ್ಲಕ್ಷ್ಯವೂ ಇದೆ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಪಘಾತದಿಂದ ಮೇಲ್ಮನವಿದಾರರಿಗೆ ಗಂಭೀರ ಗಾಯವಾಗಿದ್ದು, ಈ ಸಂಬಂಧ ವೈದ್ಯರಲ್ಲಿ ಪರೀಕ್ಷೆಗೊಳಪಡಿಸಿದಾಗ ಎಡಗಾಲನ್ನು ತೆಗೆದುಹಾಕಬೇಕು ಎಂದು ತಿಳಿಸಿದ್ದರು. ಮೇಲ್ಮನವಿದಾರರ ಜೀವ ಉಳಿಯಬೇಕಾದರೆ ಮೊಣಕಾಲಿನ ಮೇಲ್ಭಾಗದವರೆಗೆ ತೆಗೆಯುವುದು ಅನಿವಾರ್ಯ ಎಂದು ವರದಿ ನೀಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೂ ಸಲ್ಲಿಸಿದ್ದಾರೆ. ಆದರೆ, ವಿಮಾ ಕಂಪನಿ ಪರ ವಕೀಲರು, ಮೇಲ್ಮನವಿದಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವೈದ್ಯರ ಸಲಹೆಗಳನ್ನು ಪಾಲಿಸಿಲ್ಲ. ಮೇಲ್ಮನವಿದಾರರು ಆನಂತರ ನಿರಂತರವಾಗಿ ಚಿಕಿತ್ಸೆ ಪಡೆಯಲು ನಿರ್ಲಕ್ಷ್ಯವಹಿಸಿದ್ದರಿಂದಲೇ ಅವರ ಕಾಲು ತೆಗೆಯುವಂತಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಅದಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಲು ವಿಮಾ ಕಂಪನಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮೇಲ್ಮನವಿದಾರರು ಅನುಭವಿಸಿರುವ ನಷ್ಟಕ್ಕೆ ಪರಿಹಾರವಾಗಿ ನ್ಯಾಯಾಧಿಕರಣ ಕೇವಲ ₹50 ಸಾವಿರಗಳನ್ನು ಮಾತ್ರ ಘೋಷಣೆ ಮಾಡಿದೆ. ಆದರೆ, ಕಾಲು ಮುರಿತಕ್ಕೆ ಸೂಕ್ತ ಪರಿಹಾರ ಘೋಷಣೆ ಮಾಡುವಲ್ಲಿ ನ್ಯಾಯಾಧಿಕರಣ ವಿಫಲವಾಗಿದೆ ಎಂದಿರುವ ಪೀಠವು ಮೇಲ್ಮನವಿದಾರರಿಗೆ ಉಂಟಾಗಿರುವ ಅಂಗಾಂಗ ಊನಕ್ಕೆ ನ್ಯಾಯಾಧಿಕರಣ ಘೋಷಿಸಿರುವ ಪರಿಹಾರದ ಮೊತ್ತವನ್ನು ₹5,67,000ಗೆ ಹೆಚ್ಚಿಸಲಾಗಿದ್ದು, ಆದೇಶ ಪ್ರತಿ ದೊರೆತ 8 ವಾರಗಳ ಒಳಗೆ ಪರಿಹಾರ ಮೊತ್ತ ಪಾವತಿಸಬೇಕು ಎಂದು ವಿಮಾ ಕಂಪನಿಗೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮೇಲ್ಮನವಿದಾರ ಶಿವಣ್ಣ 2015ರ ಜನವರಿ 4ರಂದು ಸಂಬಂಧಿಕರೊಂದಿಗೆ ಟಿವಿಎಸ್‌ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಹಿರೇಹಳ್ಳಿ ಗ್ರಾಮದ ಕಡೆ ಹೋಗಲು ವಾಹನವನ್ನು ಯುಟರ್ನ್ ತೆಗೆದುಕೊಂಡು ಹೊರಟ ಸಂದರ್ಭದಲ್ಲಿ ನಿರ್ಲಕ್ಷ್ಯ ಹಾಗೂ ಅತಿವೇಗವಾಗಿ ಬಂದ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು. ಕೆಳಕ್ಕೆ ಬಿದ್ದಿದ್ದ ಶಿವಣ್ಣ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹಾಸನದ ಮಂಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಡಗಾಲಿನ ಮೂಳೆ ಮುರಿತಕ್ಕೊಳಗಾಗಿದ್ದ ಶಿವಣ್ಣ ಜನವರಿ 11ರವರೆಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ಆದರೆ, ಗಾಯದ ಭಾಗದಲ್ಲಿ ಸೋಂಕು ಉಲ್ಬಣಿಸಿದ ಕಾರಣ ಫೆಬ್ರವರಿ 25ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಶಿವಣ್ಣ ಅವರ ಜೀವಕ್ಕೇ ಅಪಾಯ ಎದುರಾಗಬಹುದಾದ ಸಾಧ್ಯತೆಯಿಂದ ಅವರ ಎಡಗಾಲನ್ನು ಮೊಣಕಾಲಿನವರೆಗೆ ಕತ್ತರಿಸಿಹಾಕಲಾಗಿತ್ತು. ಪರಿಹಾರ ಕೋರಿ ಶಿವಣ್ಣ ಎಂಎಸಿಟಿ ಮೊರೆ ಹೋಗಿದ್ದರು. ಅಪಘಾತದಲ್ಲಿ ಶಿವಣ್ಣ ಅವರ ನಿರ್ಲ್ಯಕ್ಷ್ಯವೂ ಇದೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಧಿಕರಣ 50 ಸಾವಿರ ಪರಿಹಾರವನ್ನಷ್ಟೇ ಘೋಷಿಸಿತ್ತು. ಇದರಿಂದ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಶಿವಣ್ಣ, ಅಪಘಾತದಲ್ಲಿ ತಮ್ಮ ನಿರ್ಲಕ್ಷ್ಯವಿಲ್ಲ ಎಂದು ಘೋಷಿಸುವಂತೆ ಹಾಗೂ ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಶಿವಣ್ಣ ಪರ ವಕೀಲರು, ಘಟನೆಗೆ ಸಂಬಂಧಿಸಿದಂತೆ ಮೇಲ್ಮನವಿದಾರರ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ಮತ್ತೊಬ್ಬ ಬೈಕ್ ಸವಾರ ಅತಿ ವೇಗವಾಗಿ ಬಂದ ಪರಿಣಾಮದಿಂದ ಅಪಘಾತ ಸಂಭವಿಸಿದೆ. ಅದಕ್ಕೆ ಪುರಾವೆಗಳೂ ಇವೆ. ಈ ಸಂಬಂಧ ತನಿಖೆ ನಡೆಸಿರುವ ಪೊಲೀಸರು, ಡಿಕ್ಕಿ ಹೊಡೆದ ವಾಹನ ಸವಾರನ ಅಜಾಗರೂಕ ಹಾಗೂ ಅತಿ ವೇಗದ ಚಾಲನೆಯ ಕಾರಣದಿಂದಲೇ ಘಟನೆ ನಡೆದಿದೆ ಎಂದು ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೀಗಿದ್ದರೂ, ಎಂಎಸಿಟಿ ಮೇಲ್ಮನವಿದಾರರದ್ದು ಶೇ.25 ಪ್ರಮಾಣದ ನಿರ್ಲಕ್ಷ್ಯವಿದೆ ಎಂದು ತೀರ್ಮಾನಿಸಿದೆ. ಜತೆಗೆ, ಪರಿಹಾರದ ಮೊತ್ತವೂ ಬಹಳ ಕಡಿಮೆಯಾಗಿದೆ ಎಂದು ಆಕ್ಷೇಪಿಸಿದ್ದರು.

ವಿಮಾ ಕಂಪನಿ ಪರ ವಕೀಲರು, ಮೇಲ್ಮನವಿದಾರರು ಸೂಕ್ತ ಚಾಲನಾ ಪರವಾನಗಿ ಹೊಂದಿಲ್ಲದೆ, ವಾಹನ ಚಲಾಯಿಸಿದ್ದಾರೆ. ಪಾಟೀಸವಾಲಿನ ಸಂದರ್ಭದಲ್ಲಿ ಅದನ್ನು ಮೇಲ್ಮನವಿದಾರರೂ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧಿಕರಣ ನೀಡಿರುವ ಆದೇಶ ಸೂಕ್ತವಾಗಿದೆ. ಆದ್ದರಿಂದ, ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com